ದುಬೈ: ಬಲಿಷ್ಠ ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡವನ್ನು ಸದೆಬಡಿಯುವ ಕನಸು ಇಂದು ಈಡೇರಲಿ. ಭಾರತ ಕ್ರಿಕೆಟ್ ತಂಡವು 12 ವರ್ಷಗಳ ನಂತರ ಮತ್ತೊಮ್ಮೆ ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಡುವ ಕ್ಷಣವನ್ನು ಕಣ್ಣುಂಬಿಕೊಳ್ಳಲು ಭಾರತದ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಭಾನುವಾರ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗವು ನ್ಯೂಜಿಲೆಂಡ್ ವಿರುದ್ಧ ಜಯಿಸಿದರೆ ಚಾಂಪಿಯನ್’ ಕನಸು ಈಡೇರಲಿದೆ. ಕಿವೀಸ್ ಬಳಗವೂ 25 ವರ್ಷಗಳ ನಂತರ ಪ್ರಶಸ್ತಿ ಮುಡಿಗೇರಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ.
ಐಸಿಸಿಯ ಎಲ್ಲ ಟೂರ್ನಿಗಳಲ್ಲಿ ಕಿವೀಸ್ ಬಳಗವು 10-6ರಿಂದ ಭಾರತದ ಎದುರು ಮುನ್ನಡೆಯಲ್ಲಿದೆ. ಆದರೆ ಅಂಕಿ ಅಂಶಗಳನ್ನು ಮತ್ತಷ್ಟು ಪರಿಗಣಿಸಿದರೆ ಐಸಿಸಿ ಟೂರ್ನಿಗಳ ನಾಕೌಟ್ ಪಂದ್ಯಗಳಲ್ಲಿಯೂ ಕಿವೀಸ್ ತಂಡವು 3-1ರ ಮುನ್ನಡೆಯಲ್ಲಿದೆ.
ಈ ಟೂರ್ನಿಯ ಗುಂಪು ಹಂತದಲ್ಲಿ ಉಭಯ ತಂಡಗಳು ಒಂದು ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ ಭಾರತ ಗೆದ್ದಿತ್ತು. ಹೈಬ್ರಿಡ್ ಮಾದರಿಯ ಟೂರ್ನಿ ಇದಾಗಿರುವುದರಿಂದ ಭಾರತ ತಂಡವು ತನ್ನ ಎಲ್ಲ ಪಂದ್ಯಗಳನ್ನೂ ದುಬೈನಲ್ಲಿ ಆಡುತ್ತಿದೆ. ಫೈನಲ್ ಇಲ್ಲಿಯೇ ಇದೆ. ಇದರಿಂದಾಗಿ ಭಾರತಕ್ಕೆ ಹೆಚ್ಚು ಅನುಕೂಲವಾಗಿದೆ ಎಂಬ ಚರ್ಚೆಗಳು ಜೋರಾಗಿಯೇ ನಡೆಯುತ್ತಿವೆ.
ಇದರ ನಡುವೆಯೂ ಕಿವೀಸ್ ತಂಡವು ಪ್ರಶಸ್ತಿ ಗೆಲ್ಲುವ ಆತ್ಮವಿಶ್ವಾಸದಲ್ಲಿದೆ. ಸೆಮಿಫೈನಲ್ನಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ಎದುರು ಭರ್ಜರಿ ಜಯ ಸಾಧಿಸಿ ಬಂದಿರುವ ಮಿಚೆಲ್ ಸ್ಯಾಂಟನರ್ ಬಳಗಕ್ಕೆ ಭಾರತದ ಸ್ಪಿನ್ ಶಕ್ತಿಯನ್ನು ಮೀರಿ ನಿಲ್ಲುವ ಸವಾಲು ಇದೆ.ಹೊಣೆ ಹೊತ್ತಿದ್ದಾರೆ.
ಬಲಗೈ ಸ್ಪಿನ್ನರ್ ವರುಣ ಚಕ್ರವರ್ತಿ ಮತ್ತು ಎಡಗೈ ಮೋಡಿಗಾರ ಕುಲದೀಪ್ ಯಾದವ್ ಅವರ ಜೋಡಿಯೂ ಕಿವೀಸ್ ಬಳಗವನ್ನು ಕಾಡಲು ಸಿದ್ಧವಾಗಿದೆ. ಅವರೊಂದಿಗೆ ಸ್ಪಿನ್- ಆಲ್ರೌಂಡರ್ಗಳಾದ ರವೀಂದ್ರ ಜಡೇಜ ಮತ್ತು ಅಕ್ಷರ್ ಪಟೇಲ್ ಇದ್ದಾರೆ. ಕಿವೀಸ್ ತಂಡದಲ್ಲಿ ಅಮೋಘ ಲಯದಲ್ಲಿರುವ ರಚಿನ್ ರವೀಂದ್ರ ಹಾಗೂ ಅನುಭವಿ ಬ್ಯಾಟರ್ ಕೇನ್ ವಿಲಿಯಮ್ಪನ್ ಅವರನ್ನು ಕಟ್ಟಿಹಾಕುವುದು ಬೌಲರ್ಗಳ ಮುಂದಿರುವ ಮುಖ್ಯ ಸವಾಲು.
ನ್ಯೂಜಿಲೆಂಡ್ ತಂಡದಲ್ಲಿಯೂ ಪರಿಣಾಮಕಾರಿ ಸ್ಪಿನ್ನರ್ಗಳಿದ್ದಾರೆ. ನಾಯಕ ಸ್ಯಾಂಟನರ್, ಮಿಚೆಲ್ ಬ್ರೇಸ್ವೆಲ್, ರವೀಂದ್ರ ಮತ್ತು ಗ್ಲೆನ್ ಫಿಲಿಪ್ಸ್ ಅವರು ತಮ್ಮ ತಂಡವನ್ನು ಗೆಲುವಿನತ್ತ ಮುನ್ನಡೆಸುವ ಸಮರ್ಥರಾಗಿದ್ದಾರೆ. ಅಲ್ಲದೇ ಗ್ಲೆನ್ ಸೇರಿದಂತೆ ಉಳಿದ ಕೆಲವು ಆಟಗಾರರು ಚುರುಕಿನ ಫೀಲ್ಡಿಂಗ್ ಮೂಲಕ ಬ್ಯಾಟರ್ಗಳಿಗೆ ಬಿಸಿ ಮುಟ್ಟಿಸುವಲ್ಲಿಯೂ ನುರಿತಿದ್ದಾರೆ. ಕಳೆದ ಪಂದ್ಯದಲ್ಲಿ ಗ್ಲೆನ್ ಪಡೆದ ಸಾಹಸಮಯ ಕ್ಯಾಚ್ಗೆ ವಿರಾಟ್ ಕೊಹ್ಲಿ ಔಟಾಗಿದ್ದರು.
ಉತ್ತಮ ಲಯದಲ್ಲಿರುವ ವಿರಾಟ್, ಗಿಲ್, ಶ್ರೇಯಸ್ ಅಯ್ಯರ್ ಮತ್ತು ಕೆ.ಎಲ್. ರಾಹುಲ್ ಅವರನ್ನು ಕಟ್ಟಿಹಾಕುವತ್ತ ಕಿವೀಸ್ ಬೌಲರ್ಗಳು ಹೆಚ್ಚು ಗಮನ ಹರಿಸುವುದು ಖಚಿತ. ಅದರಿಂದಾಗಿ ರೋಹಿತ್ ಶರ್ಮಾ ಅವರು ಉತ್ತಮ ಆರಂಭ ನೀಡಿ, ದೀರ್ಘ ಇನಿಂಗ್ಸ್ ಆಡಿದರೆ ತಂಡದ ಹಾದಿ ಸುಲಭವಾಗುತ್ತದೆ.