ಕುಮಟಾ: ನಾಗರಹಾವು ಇಲಿ, ಕೋಳಿ ಮೊಟ್ಟೆ, ಹಾಗೆಯೇ ಹಾವುಗಳನ್ನೇ ನುಂಗುವುದನ್ನು ಕೇಳಿದ್ದೇವೆ. ಆದರೆ ಚಾಕುವನ್ನೇ ತನ್ನ ಆಹಾರ ಎಂದು ಭ್ರಮಿಸಿ ನುಂಗಿದರೆ ಅದರ ಕತೆ ಏನಾಗಬಹುದು..? ಆದರೆ ಇಂಥದ್ದೇ ಘಟನೆಯೊಂದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೆಗಡೆಯ ಗೋವಿಂದ ನಾಯ್ಕ ಎಂಬವರ ಮನೆಯಲ್ಲಿ ನಡೆದಿರುವುದು ವರದಿಯಾಗಿದೆ.
ಚಾಕುವನ್ನು ನುಂಗಿದ ನಾಗರ ಹಾವು ಅದನ್ನು ಜೀರ್ಣಿಸಿಕೊಳ್ಳಲೂ ಆಗದೆ, ಹೊರಕ್ಕೂ ಹಾಕಲಾಗದೆ ವಿಲವಿಲ ಒದ್ದಾಡಿದೆ. ನಂತರ ಅದನ್ನು ಯಶಸ್ವಿಯಾಗಿ ಹೊರಗೆ ತೆಗೆಯಲಾಗಿದೆ.
ಮನೆಯೊಳಗೆ ಬಂದಿದ್ದ ನಾಗರಹಾವು ಗೋವಿಂದ ನಾಯ್ಕ ಅಡುಗೆ ಮನೆಯ ಗೋಡೆಯಲ್ಲಿ ನೇತು ಹಾಕಿದ್ದ ಚಾಕು ಹೇಗೋ ಮನೆಯ ಹೊರಗಡೆ ನೆಲಕ್ಕೆ ಬಿದ್ದಿತ್ತು. ಆದರೆ ನಾಗರಹಾವು ಅದೇ ಜಾಗದಲ್ಲಿ ಓಡಾಡುತ್ತಿದ್ದುದರಿಂದ ಚಾಕು ಬಿದ್ದ ಸ್ಥಳಕ್ಕೆ ಹೋಗಲು ಮನೆಯವರು ಹೆದರಿದ್ದರು. ಆದರೆ ಅಚ್ಚರಿ ಎಂಬಂತೆ ಕೆಲ ಹೊತ್ತಿನಲ್ಲೇ ಚಾಕು ಕಣ್ಮರೆಯಾಗಿತ್ತು. ಚಾಕು ಹೇಗೆ ಮಾಯವಾಯಿತು ಎಂಬುದು ಯಾರಿಗೂ ಗೊತ್ತಾಗಲಿಲ್ಲ. ಆದರೆ ಅಲ್ಲಿದ್ದ ಹಾವು ಓಡಾಡುತ್ತಿರಲಿಲ್ಲ. ಆದರೆ ಮನೆಯವರು ಅದು ಏನೋ ತಿಂದು ವಿಶ್ರಾಂತಿ ಮಾಡುತ್ತಿದೆ ಎಂದು ಭಾವಿಸಿದ್ದರು. ಹೀಗಾಗಿ ಹಾವು ತಾನಾಗಿಯೇ ಹೋಗಲಿ ಕೆಲಹೊತ್ತು ಕಾಯ್ದರು. ಆದರೆ ಎಷ್ಟು ಹೊತ್ತಾದರೂ ನಾಗರಹಾವು ಮಾತ್ರ ಅಲ್ಲಿಂದ ಮಿಸುಕಾಡಲಿಲ್ಲ. ಅದು ಸಹಜ ಸ್ಥಿತಿಯಲ್ಲಿ ಇದ್ದಂತೆ ಕಂಡುಬರಲಿಲ್ಲ. ಇದೇವೇಳೆ ಚಾಕುವೂ ಮಾಯವಾಗಿತ್ತು. ಹೀಗಾಗಿ ಮನೆಯವರಿಗೆ ಇದು ಚಾಕುವನ್ನು ನುಂಗಿರಬಹುದೇ ಎಂಬ ಬಗ್ಗೆ ಅನುಮಾನ ಬಂತು. ಮನೆಯವರು ತಕ್ಷಣ ಉರಗ ತಜ್ಞ ಪವನ ನಾಯ್ಕ ಅವರಿಗೆ ಮಾಹಿತಿ ನೀಡಿದರು.
ಪವನ್ ನಾಯ್ಕ ಅವರು ತಕ್ಷಣವೇ ಸ್ಥಳಕ್ಕೆ ಬಂದು ಪರಿಶೀಲಿಸಿ ಅದು ಚಾಕು ನುಂಗಿರುವುದನ್ನು ಖಾತ್ರಿ ಪಡಿಸಿದರು. ಚಾಕುವಿನ ತುದಿ ಹಾವಿನ ಎದೆಯ ಗಂಟಲಿನ ಸಮೀಪದ ಎದೆಯ ಭಾಗಕ್ಕೆ ಸಿಲುಕಿತ್ತು. ಆದರೆ ಅದನ್ನು ಹೊರಹಾಕಲು ಅದು ಒದ್ದಾಡುತ್ತಿತ್ತು. ಚಾಕು ಹೊರ ತೆಗೆಯದಿದ್ದಾರೆ ಹಾವು ಸಾಯುತ್ತದೆ ಎಂದು ಅರಿತ ಪವನ್ ಅವರು ಹಾವನ್ನು ಹಿಡಿದುಕೊಂಡು ಪಶು ಆಸ್ಪತ್ರೆಯ ಸಹಾಯಕರಾದ ಅದ್ವೈತ ಭಟ್ ಅವರ ಮನೆಗೆ ಒಯ್ದರು. ಪಶು ವೈದ್ಯರು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಪ್ರಯತ್ನ ನಡೆಸಿದ ನಂತರ ಚಾಕುವನ್ನು ನಾಗರಹಾವಿನ ಹೊಟ್ಟೆಯಿಂದ ಹೊರ ತೆಗೆಯಲು ಯಶಸ್ವಿಯಾಗಿದ್ದಾರೆ. ಹಾವು ಪ್ರಾನಾಪಾಯದಿಂದ ಬಚಾವ್ ಆಗಿದೆ. ನಂತರ ಹಾವನ್ನು ಸುರಕ್ಷಿತ ಸ್ಥಳದಲ್ಲಿ ಬಿಟ್ಟು ಬರಲಾಯಿತು.