ಬೆಳಗಾವಿ: ಎಂಇಎಸ್ ಮುಖಂಡ ಶುಭಂ ಶೆಳಕೆ ಅವರನ್ನು ಪೊಲೀಸರು ಸೋಮವಾರ ಬಂಧಿಸಿದರು.
ಮೇಲಿಂದ ಮೇಲೆ ಕನ್ನಡ ವಿರೋಧಿ, ಭಾಷಾ ಸಾಮರಸ್ಯ ಕದಡುವ ಹೇಳಿಕೆ ನೀಡಿದ್ದಾರೆ ಎಂಬ ಆರೋಪ ಇದೆ. ಜತೆಗೆ ಬೆಳಗಾವಿಯಲ್ಲಿ ಭಾಷಾ ಸಾಮರಸ್ಯ ಕದಡುವ ಹೇಳಿಕೆ ನೀಡಿದ್ದಲ್ಲದೇ ಕನ್ನಡ ವಿರೋಧಿಗಳನ್ನು ಸನ್ಮಾನಿಸಿದ ಆರೋಪದ ಮೇಲೆ ಬಂಧಿಸಲಾಗಿದೆ.
ಈಚೆಗೆ ಬೆಳಗಾವಿ ಬಳಿ ಬಸ್ ನಿರ್ವಾಹಕನ ಮೇಲೆ ನಡೆದ ಹಲ್ಲೆಯ ಘಟನೆಯನ್ನು ಶುಭಂ ತನ್ನ ಫೇಸ್ಬುಕ್ ಖಾತೆಯಲ್ಲಿ ಸಮರ್ಥಿಸಿಕೊಂಡದ್ದರು. ಕರ್ನಾಟಕದಲ್ಲಿರುವ ಕನ್ನಡ ಸಂಘಟನೆಗಳು ನಾಲಾಯಕ್’ ಎಂದು ವಿವಾದಾತ್ಮಕವಾಗಿ ಹೇಳಿಕೆ ಕೊಟ್ಟಿದ್ದಲ್ಲದೇ ಕನ್ನಡಿಗರು ಮತ್ತು ಮರಾಠಿಗರ ನಡುವಿನ ಸೌಹಾರ್ದತೆ ಕದಡಲು ಯತ್ನಿಸಿದ್ದರು ಎಂಬ ಆರೋಪದಡಿ ಮಾಳಮಾರುತಿ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿತ್ತು.
ಮರಾಠಿ ಭಾಷೆಯಲ್ಲೇ ಮಾತನಾಡುವಂತೆ ಕಿಣಿಯೆ ಗ್ರಾಮದ ಪಿಡಿಒಗೆ ಬೆದರಿಕೆ ಹಾಕಿದ ತಿಪ್ಪಣ್ಣ ಡೋಕ್ರೆ ಎಂಬಾತನನ್ನು ಸನ್ಮಾನಿಸಿದ್ದರು.