ಬೆಂಗಳೂರು: ಬೇಸಿಗೆ ರಜೆ ಬಳಿಕ ರಾಜ್ಯಾದ್ಯಂತ 2025-2026ನೇ ಸಾಲಿನ ಶೈಕ್ಷಣಿಕ ಅವಧಿಗೆ ಮೇ 29ರಿಂದ ಪ್ರಾಥಮಿಕ ಶಾಲೆಗಳು ಪ್ರಾರಂಭವಾಗುತ್ತಿದ್ದು, ಬಹುತೇಕ ಶಾಲೆಗಳು ಮಕ್ಕಳ ಆಗಮನಕ್ಕೆ ಸಿದ್ಧತೆ ಮಾಡಿಕೊಂಡಿವೆ.
ಹಲವು ಖಾಸಗಿ ಶಾಲೆಗಳು ಈಗಾಗಲೇ ತರಗತಿಗಳನ್ನು ಆರಂಭಿಸಿದ್ದು, ಸರ್ಕಾರಿ ಶಾಲೆಗಳು ಗುರುವಾರದಿಂದ ಅಧಿಕೃತವಾಗಿ ಪುನಾರಂಭ ಆಗಲಿವೆ. ಆದರೆ, ಮಳೆಯ ಕಾರಣದಿಂದ ಕೊಡಗಿನಲ್ಲಿ ಪ್ರಾಥಮಿಕ ಶಾಲೆಗಳಿಗೆ 2 ದಿನ ರಜೆ ನೀಡಲಾಗಿದ್ದು, ಜೂ.2 ರಿಂದ ಜಿಲ್ಲೆಯಲ್ಲಿ ಶಾಲೆಗಳು ಆರಂಭಗೊಳ್ಳುವ ಸಾಧ್ಯತೆಯಿದೆ.
ರಜೆಯಲ್ಲಿ ಬೇಸಿಗೆ ಶಿಬಿರ, ಪ್ರವಾಸ, ಅಜ್ಜಿ ಮನೆ, ನೆಂಟರಿಷ್ಟರ ಮನೆಗಳಿಗೆ ತೆರಳಿದ್ದ ಮಕ್ಕಳು ತಮ್ಮ ಊರುಗಳಿಗೆ ಮರಳಿದ್ದು, ಶಾಲೆಗೆ ತೆರಳುವ ಸಂಭ್ರಮದಲ್ಲಿದ್ದಾರೆ.
ಶಿಕ್ಷಣ ಇಲಾಖೆಯ ಸೂಚನೆಯಂತೆ ಬೇಸಿಗೆಯ ರಜೆ ಮುಗಿಸಿಕೊಂಡು ವಾಪಸ್ ಬರುತ್ತಿರುವ ಚಿಣ್ಣರಿಗೆ ಮೊದಲ ದಿನ ಬಿಸಿಯೂಟದಲ್ಲಿ ಸಿಹಿ ತಿನಿಸು ತಯಾರಿಸಿ ಬಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಶಾಲೆಗಳನ್ನು ಸ್ವಚ್ಛಗೊಳಿಸಲಾಗಿದ್ದು, ಕೆಲವೆಡೆ ತಳಿರು ತೋರಣ, ರಂಗೋಲಿ ಬಿಡಿಸಿ, ಚಿಣ್ಣರ ಸ್ವಾಗತಕ್ಕೆ ಕಾಯಲಾಗುತ್ತಿದೆ.
ಶಾಲೆಗಳು ಮಕ್ಕಳನ್ನು ಸ್ವಾಗತಿಸಲು ಸಿದ್ಧತೆ ಮಾಡಿಕೊಂಡಿವೆ. ಮೊದಲ ದಿನವೇ ತರಗತಿಗಳು ಸಹ ನಡೆಯಲಿದ್ದು ಮಧ್ಯಾಹ್ನದ ಬಿಸಿಯೂಟದ ಜತೆ ಸಿಹಿಯೂ ಇರಲಿದೆ. ಜತೆಗೆ ಉಚಿತ ಸಮವಸ್ತ್ರ ಮತ್ತು ಉಚಿತ ಪಠ್ಯ ಪುಸ್ತಕಗಳ ವಿತರಣೆಯೂ ನಡೆಯಲಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ನಗರದ ಆಡುಗೋಡಿಯ ಅಯ್ಯಪ್ಪ ಗಾರ್ಡನ್ನಲ್ಲಿರುವ ಪಟೇಲ್ ಮುನಿಚಿನ್ನಪ್ಪ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಆಯೋಜಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 11ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ.
ಒಂದರಿಂದ ಹತ್ತನೇ ತರಗತಿಯವರೆಗೆ ರಾಜ್ಯದಲ್ಲಿರುವ 46 ಸಾವಿರ ಶಾಲೆಗಳು ತಮ್ಮ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲಿವೆ. ಇದಕ್ಕೆ ಸಂಬಂಧಿಸಿದ ಶೈಕ್ಷಣಿಕ ವೇಳಾಪಟ್ಟಿ ಈಗಾಗಲೇ ಬಿಡುಗಡೆಯೂ ಆಗಿದೆ. ಇನ್ನು ಹಲವು ಖಾಸಗಿ ಶಾಲೆಗಳು ಈಗಾಗಲೇ ಶೈಕ್ಷಣಿಕ ಚಟುವಟಿಕೆ ಆರಂಭಿಸಿದ್ದು ಉಳಿದ ಶಾಲೆಗಳು ಸಹ ಗುರುವಾರದಿಂದ ಶೈಕ್ಷಣಿಕ ಚಟುವಟಿಕೆ ನಡೆಸಲಿದೆ.
ಈ ಮಧ್ಯೆ ಶಾಲಾ ಶಿಕ್ಷಣ ಇಲಾಖೆಯು ಸುತ್ತೋಲೆಯೊಂದನ್ನು ಹೊರಡಿಸಿದ್ದು ಶಾಲೆ ಪ್ರಾರಂಭವಾಗುವ ಮುಂಚಿತವಾಗಿ ಸಂಪೂರ್ಣ ಶಾಲೆಯ ಸ್ವಚ್ಛತೆ ಕಾರ್ಯ ಕೈಗೊಂಡು ಪೂರ್ಣಗೊಳಿಸಬೇಕು. ಶಾಲೆಯಲ್ಲಿ ಶುದ್ಧ ಕುಡಿಯುವ ನೀರು ಸೇರಿದಂತೆ ಎಲ್ಲ ಸೌಲಭ್ಯಗಳು ಸುಸ್ಥಿತಿಯಲ್ಲಿರಬೇಕು. ಶಿಥಿಲ ಕಟ್ಟಡಗಳು, ವಿದ್ಯುತ್ ತಂತಿಗಳಿಂದ ಅಪಾಯಕಾರಿ ಸನ್ನಿವೇಶ ಸೃಷ್ಟಿಯಾಗದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು. ಸ್ಥಳೀಯರ ಸಹಕಾರ ಪಡೆದು ಇಂತಹ ಸನ್ನಿವೇಶಗಳನ್ನು ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.