ಅಹ್ಮದಾಬಾದ್ನ:
ಅಹ್ಮದಾಬಾದ್ನ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್ಗಳ ಭಾರಿ ಅಂತರದ ಸೋಲು ಅನುಭವಿಸಿದ ಸೂರ್ಯಕುಮಾರ ಯಾದವ್ ನೇತೃತ್ವದ ಭಾರತ ತಂಡಕ್ಕೆ ಈಗ ಮಾಡು ಇಲ್ಲವೇ ಮಡಿ ಪರಿಸ್ಥಿತಿ ಎದುರಾಗಿದೆ. ಈ ಸೋಲು ಕೇವಲ ಒಂದು ಪಂದ್ಯದ ಸೋಲಲ್ಲ, ಬದಲಾಗಿ ಭಾರತದ ನೆಟ್ ರನ್ ರೇಟ್ ಅನ್ನು ಪಾತಾಳಕ್ಕೆ (-3.800) ತಳ್ಳಿದ ಆಘಾತಕಾರಿ ಫಲಿತಾಂಶವಾಗಿದೆ.
ಎಲ್ಲಿ ತಪ್ಪಿತು ಲೆಕ್ಕಾಚಾರ?
ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಮಾಡಿ 187/7 ರನ್ ಕಲೆಹಾಕಿತು. ಡೇವಿಡ್ ಮಿಲ್ಲರ್ (63) ಮತ್ತು ಯುವ ಬ್ಯಾಟರ್ ಡೆವಾಲ್ಡ್ ಬ್ರೆವಿಸ್ (45) ಅವರ ಸ್ಫೋಟಕ ಆಟ ಭಾರತೀಯ ಸ್ಪಿನ್ನರ್ಗಳನ್ನು ಹಳಿ ತಪ್ಪಿಸಿತು. ಜಸ್ಪ್ರೀತ್ ಬುಮ್ರಾ (3/15) ತಮ್ಮ ಶ್ರೇಷ್ಠ ಪ್ರದರ್ಶನ ನೀಡಿದರೂ, ಉಳಿದ ಬೌಲರ್ಗಳಿಂದ ನಿರೀಕ್ಷಿತ ಸಾಥ್ ಸಿಗಲಿಲ್ಲ. 188 ರನ್ಗಳ ಗುರಿ ಬೆನ್ನಟ್ಟಿದ ಭಾರತ, ಮಾರ್ಕೊ ಜಾನ್ಸೆನ್ (4 ವಿಕೆಟ್) ದಾಳಿಗೆ ಸಿಲುಕಿ ಕೇವಲ 111 ರನ್ಗಳಿಗೆ ಆಲೌಟ್ ಆಯಿತು.
ಸೆಮಿಫೈನಲ್ ಹಾದಿ: ಭಾರತದ ಮುಂದಿರುವ ಲೆಕ್ಕಾಚಾರಗಳು
ಭಾರತ ಈಗ ತನ್ನ ಉಳಿದಿರುವ ಎರಡು ಪಂದ್ಯಗಳನ್ನು (ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧ) ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ.
ಸನ್ನಿವೇಶ 1: ಎರಡೂ ಪಂದ್ಯಗಳಲ್ಲಿ ಜಯ
ಭಾರತ ಮುಂದಿನ ಎರಡೂ ಪಂದ್ಯಗಳನ್ನು ಗೆದ್ದರೆ 4 ಅಂಕಗಳನ್ನು ಪಡೆಯುತ್ತದೆ.
ಇತರ ಎರಡು ತಂಡಗಳು ಸಹ 4 ಅಂಕಗಳನ್ನು ಪಡೆಯದಿದ್ದರೆ ಇದು ಸೆಮಿಫೈನಲ್ ತಲುಪಲು ಸಾಕು. ಆದರೆ ದಕ್ಷಿಣ ಆಫ್ರಿಕಾ ತಮ್ಮ ಉಳಿದಿರುವ ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದರೆ ಮತ್ತು ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ನಡುವಿನ ಪಂದ್ಯದ ವಿಜೇತ ತಂಡವು ದಕ್ಷಿಣ ಆಫ್ರಿಕಾವನ್ನೂ ಸೋಲಿಸಿದರೆ ಅದು ಸಂಭವಿಸಬಹುದು. ಆ ಸಂದರ್ಭದಲ್ಲಿ, ಅಂಕಗಳು ಸಮನಾಗಿ ಭಾರತದ ಅರ್ಹತೆಯು ನಿವ್ವಳ ರನ್ ರೇಟ್ ಮೇಲೆ ಅವಲಂಬಿತವಾಗಿರುತ್ತದೆ.
ಒಂದು ವೇಳೆ ದಕ್ಷಿಣ ಆಫ್ರಿಕಾ ತನ್ನ ಉಳಿದ ಎರಡು ಪಂದ್ಯಗಳಲ್ಲಿಯೂ ಸೋತು, ವೆಸ್ಟ್ ಇಂಡೀಸ್ ಅಥವಾ ಜಿಂಬಾಬ್ವೆ ಕೂಡ 4 ಅಂಕಗಳನ್ನು ಪಡೆದರೆ, ಆಗ ನೆಟ್ ರನ್ ರೇಟ್ ಮತ್ತೆ ನಿರ್ಣಾಯಕವಾಗಲಿದೆ. ಹೀಗಾಗಿ ಸದ್ಯದ ಮೈನಸ್ ರನ್ ರೇಟ್ ಸರಿಪಡಿಸಲು ಭಾರತ ಕನಿಷ್ಠ ಒಂದು ಪಂದ್ಯವನ್ನಾದರೂ ಭಾರಿ ಅಂತರದಿಂದ ಗೆಲ್ಲಲೇಬೇಕು.
ಸನ್ನಿವೇಶ 2: ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆದ್ದರೆ…
ಭಾರತ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದರೆ, ಆಗ ದಕ್ಷಿಣ ಆಫ್ರಿಕಾ ತಮ್ಮ ಎಲ್ಲಾ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಮಾತ್ರ ಭಾರತವು ಸೆಮಿಫೈನಲ್ಗೆ ಅರ್ಹತೆ ಪಡೆಯುವ ಸಾಧ್ಯತೆ ಇದೆ. ಈ ಸನ್ನಿವೇಶದಲ್ಲಿ ಇನ್ನೊಂದು ಷರತ್ತು ಎಂದರೆ ಭಾರತದ ಗೆಲುವು ವೆಸ್ಟ್ ಇಂಡೀಸ್-ಜಿಂಬಾಬ್ವೆ ಪಂದ್ಯದ ವಿಜೇತರ ವಿರುದ್ಧವೇ ಬರಬೇಕಾಗುತ್ತದೆ. ಆ ಸಂದರ್ಭದಲ್ಲಿ, ಭಾರತ, ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ತಲಾ 2 ಅಂಕಗಳನ್ನು ಹೊಂದಿರಬೇಕಾಗುತ್ತದೆ. ಅಂದರೆ ವೆಸ್ಟ್ ಇಂಡೀಸ್ ಹಾಗೂ ಜಿಂಬಾಬ್ವೆ ಸಹ ಒಂದು ಪಂದ್ಯದಲ್ಲಿ ಮಾತ್ರ ಜಯಗಳಿಸಿರಬೇಕಾಗುತ್ತದೆ. ಆಗ ಪುನಃ, ಭಾರತದ ಸೆಮಿ ಫೈನಲ್ ಅರ್ಹತೆಯು ಸಂಪೂರ್ಣವಾಗಿ ನೆಟ್ ರನ್ ರೇಟ್ ಮೇಲೆ ಅಲಂಬಿತವಾಗಿರುತ್ತದೆ.
ಐಸಿಸಿ ನಿಯಮಾವಳಿ ಮತ್ತು ಭಾರತದ ಸವಾಲು
ಅಂಕಗಳು ಸಮನಾದಾಗ ಐಸಿಸಿ ಈ ಕೆಳಗಿನ ಕ್ರಮವನ್ನು ಅನುಸರಿಸುತ್ತದೆ:
ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ತಂಡ.
ನೆಟ್ ರನ್ ರೇಟ್ .
ಮುಖಾಮುಖಿ ಫಲಿತಾಂಶ.
ಫೆಬ್ರವರಿ 6, 2026ರ ಐಸಿಸಿ ಶ್ರೇಯಾಂಕ ಇವುಗಳನ್ನು ಅದು ಪರಿಗಣಿಸಲಿದೆ.
ಉಳಿದ ಪಂದ್ಯಗಳು –
ಫೆಬ್ರವರಿ 23: ವೆಸ್ಟ್ ಇಂಡೀಸ್ vs ಜಿಂಬಾಬ್ವೆ (ಮುಂಬೈ)
ಫೆಬ್ರವರಿ 26: ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್ (ಅಹಮದಾಬಾದ್)
ಫೆಬ್ರವರಿ 26: ಭಾರತ vs ಜಿಂಬಾಬ್ವೆ (ಚೆನ್ನೈ)
ಮಾರ್ಚ್ 1: ದಕ್ಷಿಣ ಆಫ್ರಿಕಾ vs ಜಿಂಬಾಬ್ವೆ (ದೆಹಲಿ)
ಮಾರ್ಚ್ 1: ಭಾರತ vs ವೆಸ್ಟ್ ಇಂಡೀಸ್ (ಕೋಲ್ಕತ್ತಾ)
ಭಾರತಕ್ಕೆ ಮುಂದಿನ ನಿರ್ಣಾಯಕ ಪಂದ್ಯಗಳು:
ಫೆಬ್ರವರಿ 26: ಭಾರತ vs ಜಿಂಬಾಬ್ವೆ (ಚೆನ್ನೈ)
ಮಾರ್ಚ್ 1: ಭಾರತ vs ವೆಸ್ಟ್ ಇಂಡೀಸ್ (ಕೋಲ್ಕತ್ತಾ)
ಭಾರತಕ್ಕೆ ಈಗ ಕೇವಲ ಗೆಲುವು ಸಾಲದು, ದೊಡ್ಡ ಗೆಲುವು ಬೇಕು. ಚೆನ್ನೈನ ಸ್ಪಿನ್ ಪಿಚ್ ಮತ್ತು ಈಡನ್ ಗಾರ್ಡನ್ನ ಒತ್ತಡದ ನಡುವೆ ಸೂರ್ಯಕುಮಾರ ಪಡೆ ಹೇಗೆ ಪುಟಿದೇಳಲಿದೆ ಎಂಬುದು ಮುಖ್ಯವಾಗುತ್ತದೆ.
ಸೋಲಿಗೆ ಆ ವಿಭಾಗದ ವೈಫಲ್ಯವೇ ಕಾರಣ: ನಾಯಕ ಸೂರ್ಯಕುಮಾರ್
ಭಾನುವಾರ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಟಿ20 ವಿಶ್ವಕಪ್ನ ಸೂಪರ್–8ರ ಪಂದ್ಯದಲ್ಲಿ ಭಾರತ ತಂಡವು 76 ರನ್ಗಳ ಹೀನಾಯ ಸೋಲು ಅನುಭವಿಸಿದೆ. ಪಂದ್ಯದ ಬಳಿಕ ಮಾತನಾಡಿದ ನಾಯಕ ಸೂರ್ಯಕುಮಾರ್ ಯಾದವ್ ಸೋಲಿಗೆ ಕಾರಣ ಏನು ಎಂಬುದನ್ನು ಬಹಿರಂಗಪಡಿಸಿದ್ದಾರೆ.
188 ರನ್ಗಳ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಬ್ಯಾಟರ್ಗಳು ಬಂದಷ್ಟೇ ವೇಗವಾಗಿ ಪವಿಲಿಯನ್ ಸೇರಿಕೊಂಡರು. ಯಾವುದೇ ಹಂತದಲ್ಲೂ ಬ್ಯಾಟರ್ಗಳು ಪ್ರತಿರೋಧ ತೋರಲಿಲ್ಲ. ಪರಿಣಾಮ 18.5 ಓವರ್ಗಳಲ್ಲಿ 111 ರನ್ಗಳಿಗೆ ಆಲೌಟ್ ಆಗುವ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ ತನ್ನ ಅತೀ ದೊಡ್ಡ ಅಂತರದ ಸೋಲಿಗೆ ಒಳಗಾಯಿತು.
ಈ ಕುರಿತು ಮಾತನಾಡಿದ ನಾಯಕ ಸೂರ್ಯಕುಮಾರ್ ಯಾದವ್ ‘ಕೆಲವೊಮ್ಮೆ ಪವರ್ಪ್ಲೇನಲ್ಲಿ ಪಂದ್ಯ ಗೆಲ್ಲಲು ಸಾಧ್ಯವಿಲ್ಲ ಎಂದುಕೊಳ್ಳಬಹುದು. ಆದರೆ, ನೀವು ಸೋಲುವುದಿಲ್ಲ ಎಂದು ಹೇಳಲಾಗದು’ ಎಂದರು.
ಉತ್ತಮ ಜೊತೆಯಾಟ ಬೇಕಿತ್ತು
‘188 ರನ್ಗಳ ಬೃಹತ್ ಗುರಿ ಬೆನ್ನಟ್ಟುವಾಗ ನಮಗೆ ಉತ್ತಮ ಜೊತೆಯಾಟದ ಅಗತ್ಯವಿತ್ತು. ಆದರೆ, ನಮಗೆ ಅದು ಸಿಗಲಿಲ್ಲ. ನಾವು ಉತ್ತಮವಾಗಿ ಬ್ಯಾಟಿಂಗ್ ಮಾಡಬಹುದಿತ್ತು. ಅದು ಸಾಧ್ಯವಾಗದಿರುವುದೇ ನಮ್ಮ ಸೋಲಿಗೆ ಪ್ರಮುಖ ಕಾರಣ ಎಂದರು.
ಭಾರತವು ಪವರ್ ಪ್ಲೇನಲ್ಲಿ ಪ್ರಮುಖ ಬ್ಯಾಟರ್ಗಳಾದ ಇಶಾನ್ ಕಿಶನ್ (0), ಅಭಿಷೇಕ್ ಶರ್ಮಾ (15) ಮತ್ತು ತಿಲಕ್ ವರ್ಮಾ (1) ಅವರ ವಿಕೆಟ್ ಕಳದುಕೊಂಡಿತು.
ನಮ್ಮ ಬೌಲರ್ಗಳು ಆರಂಭದಲ್ಲಿ ಉತ್ತಮ ಬೌಲಿಂಗ್ ಮಾಡಿದರು. ಮಾತ್ರವಲ್ಲ, 15 ಓವರ್ ವೇಳೆಗೆ ದಕ್ಷಿಣ ಆಫ್ರಿಕಾ 200ಕ್ಕೂ ಅಧಿಕ ರನ್ ಗಳಿಸುವ ಸಾಧ್ಯತೆ ಇತ್ತು. ಆದರೆ, ಕೊನೆಯಲ್ಲಿ ನಮ್ಮ ಬೌಲರ್ಗಳು ಮೇಲುಗೈ ಸಾಧಿಸಿ 188ಕ್ಕೆ ಕಟ್ಟಿಹಾಕಿದರ. ಆದರೆ, 7ರಿಂದ 15 ಓವರ್ಗಳು ನಮ್ಮದಾಗಿರಲಿಲ್ಲ ಎಂದರು.
ಬೃಹತ್ ಅಂತರದ ಸೋಲಿನೊಂದಿಗೆ ಭಾರತದ ರನ್ ರೇಟ್ (-3.800) ಕುಸಿದಿರುವುದರಿಂದಾಗಿ ಸೂಪರ್–8ರಲ್ಲಿ ಮುಂದಿನ ಎರಡು ಪಂದ್ಯಗಳು ಟೀಂ ಇಂಡಿಯಾಗೆ ಅನಿವಾರ್ಯ ಎನಿಸಿವೆ.
‘ಸೋಲು ಗೆಲುವು ಆಟದ ಒಂದು ಭಾಗ. ನಾವು ಅದರಿಂದ ಕಲಿಯುತ್ತೇವೆ, ಸೋಲಿನಿಂದ ಮರಳಿ ಬರುತ್ತೇವೆ. ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿ ಸೆಮಿಫೈನಲ್ ಪ್ರವೇಶಿಸಲು ಶ್ರಮಿಸುತ್ತೇವೆ’ ಎಂದರು.


