ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೊಮ್ಮಗ ಧವನ್ ರಾಕೇಶ್ ಭವಿಷ್ಯದ ದಿನಗಳಲ್ಲಿ ರಾಜಕಾರಣ ಪ್ರವೇಶ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ನಡೆದ ಆರ್ಸಿಬಿ ವಿಜಯೋತ್ಸವ, ಗದಗ ತಾಲೂಕು ಕುರುಬರ ಸಂಘದ ಬೆಳ್ಳಿ ಮಹೋತ್ಸವ, ಕನಕೋತ್ಸವ ಮುಂತಾದ ಕಾರ್ಯಕ್ರಮಗಳಲ್ಲಿ ರಾಜಕೀಯ ರಣರಂಗದಲ್ಲಿ ಪಾರಂಗತರಾಗಿರುವ ತಮ್ಮ ತಾತ ಸಿದ್ದರಾಮಯ್ಯ ಅವರ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ. ಈ ಬಗ್ಗೆ ತಾನು ವೇದಿಕೆ ಹಂಚಿಕೊಂಡಿರುವ ಫೋಟೋಗಳ ಜೊತೆಗೆ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಜೊತೆಗೆ ಇರುವ ಫೋಟೋಗಳನ್ನು ಸಹ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಹಂಚಿಕೊಂಡಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಆಗಸ್ಟ್ 8 ರಂದು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದರು. ಈ ಬಗ್ಗೆ ಅವರು ಇದೀಗ ಪೋಸ್ಟ್ ಮಾಡಿರುವುದು ರಾಜಕೀಯ ವಲಯದಲ್ಲಿ ನಾನಾ ವದಂತಿಗೆ ಕಾರಣವಾಗಿದೆ.
ಧವನ್ ರಾಕೇಶ್ ಪೋಸ್ಟ್ನಲ್ಲೇನಿದೆ?
ಕಳೆದ ಆಗಸ್ಟ್ 8ರಂದು ನಮ್ಮ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗುವ ಸದವಕಾಶ ನನಗೆ ದೊರೆಯಿತು. ಪ್ರಾಮಾಣಿಕ ನಾಯಕರನ್ನು ನಾನು ಎಷ್ಟರ ಮಟ್ಟಿಗೆ ಗೌರವಿಸುತ್ತೇನೆ. ಅವರನ್ನು ಭೇಟಿಯಾಗಲು ಬಯಸುತ್ತೇನೆ ಎಂಬುದನ್ನು ನನ್ನ ತಾತ ಗುರುತಿಸಿದ್ದರಿಂದ ಇದು ಸಾಧ್ಯವಾಯಿತು. ಈ ರಾಜಕೀಯ ವಲಯದಲ್ಲಿ ಪ್ರಾಮಾಣಿಕತೆಯನ್ನು ಬಹುತೇಕವಾಗಿ ಕಡೆಗಣಿಸಲಾಗಿದೆ. ಆದರೆ, ಇದೇ ವಲಯದಲ್ಲಿ ಪ್ರಾಮಾಣಿಕವಾಗಿರಲು ಯತ್ನಿಸುವ, ತನ್ನ ನಂಬಿಕೆಗೆ ಬದ್ಧವಾಗಿರುವ ನಾಯಕರನ್ನು ಭೇಟಿಯಾಗಲು ನಾನು ಇಚ್ಛಿಸುತ್ತೇನೆ. ವಿದ್ಯಾರ್ಥಿಯಾಗಿ, ವಕೀಲನಾಗಿ ಜತೆ ನಿಲ್ಲುತ್ತೇನೆ.
ರಾಜಕಾರಣವು ನನ್ನ ಬದುಕಿನ ಹಿನ್ನೆಲೆಯ ಒಂದು ಭಾಗವಾಗಿರುವುದು ನಿಜ. ಆದರೆ, ನಿರಂತರ ವಿರೋಧದ ನಡುವೆಯೂ ತನ್ನ ನಂಬಿಕೆ ಹಾಗೂ ಸಿದ್ಧಾಂತದ ಪರ ನಿಲ್ಲಲು ರಾಹುಲ್ ಗಾಂಧಿ ನಿರ್ಧರಿಸಿದರು. ಇಂತಹ ನಾಯಕನನ್ನು ಭೇಟಿಯಾಗಿದ್ದು ನಿಜವಾಗಿಯೂ ವಿಭಿನ್ನ ಅನುಭವವಾಗಿತ್ತು. ಅವರೊಂದಿನ ಸ್ವಲ್ಪ ಕ್ಷಣಗಳ ಕಾಲ ಮಾತನಾಡಿದೆ. ಅವರ ಕುರಿತು ನನ್ನಲ್ಲಿರುವ ಅಪಾರ ಗೌರವದ ಬಗ್ಗೆ ತಿಳಿಸಿದೆ. ಈಗ ವಿದ್ಯಾರ್ಥಿಯಾಗಿ, ಮುಂದೆ ವಕೀಲನಾಗಿ ನಾನು ಅವರ ಜೊತೆ ನಿಲ್ಲಲು, ಅವರೊಂದಿಗೆ ಹೆಜ್ಜೆ ಹಾಕಲು ಬಯಸುತ್ತೇನೆಂದು ಹೇಳಿದೆ.
ನಾವೂ ಸಂವಾದಕ್ಕೆ ಮುಂದಾಗಬೇಕು:
ಈಗ ನಾವೆಲ್ಲರೂ ಸ್ವಲ್ಪ ಹೆಚ್ಚು ಮುನ್ನೆಚ್ಚರಿಕೆಯಿಂದ ಯೋಚಿಸಬೇಕಿದೆ. ಹೆಚ್ಚು ಜಾಗೃತರಾಗಬೇಕಿದೆ. ಸತ್ಯ, ನಿಷ್ಠೆ ಹಾಗೂ ಪಾರದರ್ಶಕತೆಯ ಮೂಲಕ ದೇಶವನ್ನು ಮುನ್ನಡೆಸುವ ನಾಯಕರನ್ನು ಗೌರವಿಸಬೇಕಿದೆ. ರಾಹುಲ್ ಗಾಂಧಿ ಅವರು ಸಾರ್ವಜನಿಕರು ಹಾಗೂ ಮಾಧ್ಯಮಗಳೊಂದಿಗೆ ಮುಕ್ತವಾಗಿ ಸಂವಾದ ನಡೆಸುತ್ತಾರೆ. ಅದೇ ರೀತಿ, ನಾವು ಸಹ ಸಂವಾದಕ್ಕೆ ಮುಂದಾಗಬೇಕಿದೆ. ಪ್ರಾಮಾಣಿಕ ಸಂವಾದವನ್ನು ನಾನು ಯಾವಾಗಲೂ ಸ್ವಾಗತಿಸುತ್ತೇನೆ ಎಂದು ಧವನ್ ಪೋಸ್ಟ್ ಹಾಕಿದ್ದಾರೆ.