ಬೆಳಗಾವಿ : ಮಾಜಿ ಪ್ರಧಾನ ಮಂತ್ರಿಗಳಾದ ಗೌರವಾನ್ವಿತ ರಾಜಕೀಯ ಮುತ್ಸದ್ದಿ ಶ್ರೀ ಹೆಚ್.ಡಿ.ದೇವೇಗೌಡರು ತಮ್ಮ ಬದುಕಿನ ೯೩ ಸಾರ್ಥಕ ವರ್ಷಗಳನ್ನು ಪೂರೈಸಿ, ಅಭಿಮಾನಿಗಳಿಂದ “ಗಂಗ ಸಾಮ್ರಾಟ ಶ್ರೀಪುರುಷ” ಪ್ರಶಸ್ತಿಗೆ ಭಾಜನರಾದ ನಿಮಿತ್ತ ವಿವಿಧ ರಂಗಗಳಲ್ಲಿ ಸಾಧನೆಗೈದಿರುವ ೯೩ ಕೀರ್ತಿಸಂಪನ್ನರಿಗೆ ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ ಡಾ.ಬಾಬು ಜಗಜೀವನ್ರಾಮ್ ಭವನದಲ್ಲಿ ದಿನಾಂಕ ೨೨ ಜೂನ ೨೦೨೫ ರಂದು ಜರುಗಿತು. ಶ್ರೀ ಹೆಚ್.ಡಿ.ದೇವೇಗೌಡ ಅಭಿನಂದನಾ ಸಮಿತಿಯು ಡಾ.ಪ್ರಭಾಕರ ಕೋರೆಯವರಿಗೆ ‘ಶ್ರೀ ಹೆಚ್.ಡಿ.ದೇವೇಗೌಡ ಪ್ರಶಸ್ತಿ’ಯನ್ನು ಪ್ರದಾನ ಮಾಡಿದೆ.
ಸನ್ಮಾನ್ಯ ಡಾ.ಪ್ರಭಾಕರ ಕೋರೆಯವರು ಶಿಕ್ಷಣ, ಕೃಷಿ, ಸಹಕಾರ, ರಾಜಕೀಯ, ಸಮುದಾಯದ ಕ್ಷೇಮಾಭಿವೃದ್ಧಿ ಕ್ಷೇತ್ರದಲ್ಲಿನ ‘ನ ಭೂತೋ ನ ಭವಿಷ್ಯತಿ’ ಎಂಬ ಮಟ್ಟದಲ್ಲಿ ಅಗಾಧವಾದ ಸೇವೆಯನ್ನು ಸಲ್ಲಿಸುತ್ತಾ, ಕರ್ನಾಟಕ ರಾಜ್ಯ ಬಹುದೊಡ್ಡ ಆಸ್ತಿಯಾಗಿ ದೇಶ ವಿದೇಶಗಳಲ್ಲೂ ಜನಮನ್ನಣೆ ಗಳಿಸಿರುವ ಡಾ.ಪ್ರಭಾಕರ ಕೋರೆಯವರು ಬೆಳಗಾವಿಯ ಕೆಎಲ್ಇ ಸೊಸೈಟಿಯ ಹೆಸರನ್ನು ಇಡೀ ವಿಶ್ವದಲ್ಲಿ ಪ್ರಸಿದ್ಧಿ ಪಡಿಸಿರುವುದು ಹೆಮ್ಮೆಯ ಸಂಗತಿ. ಈ ನಾಡಿಗೆ ದೇಶಕ್ಕೆ ಅಪಾರ ಕೀರ್ತಿ ತಂದಿರುವ ಸಾಧನೆಯ ಶಿಖರ ಡಾ.ಕೋರೆಯವರಿಗೆ ‘ಶ್ರೀ ಹೆಚ್.ಡಿ.ದೇವೇಗೌಡ ಪ್ರಶಸ್ತಿ’ಯನ್ನು ನೀಡಿ ಅಭಿನಂದಿಸಲಾಗಿದೆ. ಈ ಪ್ರಶಸ್ತಿಗೆ ಪುರಸ್ಕೃತರಾದ ಡಾ.ಪ್ರಭಾಕರ ಕೋರೆಯವರನ್ನು ಕೆಎಲ್ಇ ಆಡಳಿತ ಮಂಡಳಿ ಸರ್ವ ಸದಸ್ಯರು ಅಭಿನಂದಿಸಿದ್ದಾರೆ.
ಡಾ.ಪ್ರಭಾಕರ ಕೋರೆಯವರಿಗೆ ಶ್ರೀ ಎಚ್. ಡಿ. ದೇವೇಗೌಡ ಪ್ರಶಸ್ತಿ
