ಭಾವನಗರ (ಗುಜರಾತ್): ದೇಶದ ಮೊದಲ ಬುಲೆಟ್ ರೈಲು ಸೇವೆ ಶೀಘ್ರದಲ್ಲೇ ಆರಂಭವಾಗಲಿದೆ. ಇದರಿಂದ, ಮುಂಬೈ ಹಾಗೂ ಅಹಮದಾಬಾದ್ ನಡುವಣ ಪ್ರಯಾಣದ ಅವಧಿಯು ಎರಡು ಗಂಟೆ ಏಳು ನಿಮಿಷಕ್ಕೆ ಇಳಿಯಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭಾನುವಾರ ಹೇಳಿದ್ದಾರೆ.
ಭಾವನಗರ ಟರ್ಮಿನಲ್ನಿಂದ ವರ್ಚುವಲ್ ಆಗಿ ಆಯೋಧ್ಯಾ ಎಕ್ಸ್ಪ್ರೆಸ್, ರೇವಾ–ಪುಣೆ ಎಕ್ಸ್ಪ್ರೆಸ್ ಮತ್ತು ಜಬಲ್ಪುರ–ರಾಯ್ಪುರ ಎಕ್ಸ್ಪ್ರೆಸ್ ರೈಲುಗಳಿಗೆ ಚಾಲನೆ ನೀಡಿದರು. ಅವರಿಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್, ಛತ್ತೀಸಗಢ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಸಾಥ್ ನೀಡಿದರು.
ಬಳಿಕ ಮಾತನಾಡಿದ ವೈಷ್ಣವ್, ‘ಮುಂಬೈನಿಂದ ಅಹಮದಾಬಾದ್ಗೆ ಮೊದಲ ಬುಲೆಟ್ ರೈಲು ಶೀಘ್ರದಲ್ಲೇ ಆರಂಭವಾಗಲಿದೆ. ಈ ಯೋಜನೆಯ ಕಾರ್ಯವು ಬಹಳ ವೇಗವಾಗಿ ನಡೆಯುತ್ತಿದೆ. ರೈಲು ಚಾಲನೆ ಪ್ರಾರಂಭವಾದಾಗ ಈ ಎರಡೂ ನಗರಗಳ ನಡುವಣ ಪ್ರಯಾಣಕ್ಕೆ ಕೇವಲ ಎರಡು ಗಂಟೆ, ಏಳು ನಿಮಿಷ ತೆಗೆದುಕೊಳ್ಳುತ್ತದೆ’ ಎಂದು ತಿಳಿಸಿದ್ದಾರೆ.
ಬುಲೆಟ್ ರೈಲು, ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನಿಂದ (ಬಿಕೆಸಿ) ಆರಂಭವಾಗಿ ಗುಜರಾತಿನ ವಾಪಿ, ಸೂರತ್, ಆನಂದ್, ವಡೋದರಾ ಮಾರ್ಗವಾಗಿ ಸಂಚರಿಸಿ ಅಹಮದಾಬಾದ್ ಸಂಪರ್ಕಿಸುತ್ತದೆ. ಈ ಮಾರ್ಗವಾಗಿ 508 ಕಿ.ಮೀ. ಸಂಚರಿಸುವ ಈ ರೈಲು, ಪ್ರತಿ ಗಂಟೆಗೆ ಗರಿಷ್ಠ 320 ಕಿ.ಮೀ. ವೇಗದಲ್ಲಿ ಚಲಿಸಬಲ್ಲದು.