ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ (ಮಾರ್ಚ್ 7) ಬೆಳಿಗ್ಗೆ 10:15ಕ್ಕೆ 2025-26ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿದ್ದಾರೆ. ಅವರು ದಾಖಲೆಯ 16ನೇ ಬಜೆಟ್ ಮಂಡಿಸಿದ್ದಾರೆ.
ಕುವೆಂಪು ಅವರ ಕವನವನ್ನು ವಾಚಿಸುವ ಮೂಲಕ ಬಜೆಟ್ ಮಂಡನೆ ಶುರು ಮಾಡಿದ ಅವರು ₹4 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸಿದ್ದಾರೆ.
2025-26ನೇ ಸಾಲಿನ ಕರ್ನಾಟಕ ಬಜೆಟ್ ಗಾತ್ರ 4,09,549 ಕೋಟಿ ರೂ.ಗಳಾಗಿದೆ. ಕಳೆದ ಬಾರಿ ಇದು ₹3,71,383 ಕೋಟಿ ರೂ.ಗಳಷ್ಟು ಇತ್ತು. ಈ ಬಾರಿಯ 38,166 ಕೋಟಿ ರೂ.ಗಳಷ್ಟು ಬಜೆಟ್ ಗಾತ್ರದಲ್ಲಿ ಹೆಚ್ಚಳವಾಗಿದೆ.
4,09,549 ಕೋಟಿ ರೂ. ಗಾತ್ರದ ಬಜೆಟ್ ಮಂಡನೆ
ರಾಜಸ್ವ ವೆಚ್ಚ ಅಂದಾಜು 3,11,739 ಕೋಟಿ ರೂ.
ಒಟ್ಟು ರಾಜಸ್ವ ಸ್ವೀಕೃತಿ ಅಂದಾಜು 2,92,477 ಕೋಟಿ ರೂ.
19,262 ಕೋಟಿ ರೂ. ರಾಜಸ್ವ ಕೊರತೆಯ ಬಜೆಟ್ ಮಂಡನೆ
2025-26 ಸಾಲಿನಲ್ಲಿ ಪಂಚ ಗ್ಯಾರಂಟಿಗೆ 51,034 ಕೋಟಿ ರೂ. ಅನುದಾನ
ತೆರಿಗೆ ಸಂಗ್ರಹ ಗುರಿ
ವಾಣಿಜ್ಯ ತೆರಿಗೆ: 2025-26ರಲ್ಲಿ 1,20,000 ಕೋಟಿ ರೂ. ಸಂಗ್ರಹ ಗುರಿ, 2024-25ರಲ್ಲಿ 1,05,000 ಕೋಟಿ ರೂ. ಸಂಗ್ರಹವಾಗುವ ನಿರೀಕ್ಷೆ
ಅಬಕಾರಿ: 2025-26 ಸಾಲಿನಲ್ಲಿ 40,000 ಕೋಟಿ ಸಂಗ್ರಹದ ಗುರಿ, 2024-25 ಸಾಲಿನ ಮಾರ್ಚ್ ಅಂತ್ಯಕ್ಕೆ 36,500 ಕೋಟಿ ರೂ. ಸಂಗ್ರಹದ ನಿರೀಕ್ಷೆ ಹೊಂದಲಾಗಿದೆ.
ನೋಂದಣಿ ಮತ್ತು ಮುದ್ರಾಂಕ ಶುಲ್ಕ : ನೋಂದಣಿ ಮತ್ತು ಮುದ್ರಾಂಕ ಶುಲ್ಕದಿಂದ 2025-26 ಸಾಲಿನಲ್ಲಿ 28,000 ಕೋಟಿ ರೂ. ಸಂಗ್ರಹದ ಗುರಿ ನಿಗದಿಪಡಿಸಲಾಗಿದೆ. ಇದರಿಂದ 2024-25ರಲ್ಲಿ 24,000 ಕೋಟಿ ರೂ. ಸಂಗ್ರಹದ ನಿರೀಕ್ಷೆಯಿದೆ.
ಗಣಿ ಮತ್ತು ಭೂ ವಿಜ್ಞಾನ: 2025-26ರಲ್ಲಿ 3,000 ಕೋಟಿ ರೂ. ಖನಿಜ ತೆರಿಗೆ ಸಂಗ್ರಹದ ಗುರಿ. ಒಟ್ಟು 9,000 ಕೋಟಿ ರೂ. ತೆರಿಗೆಯೇತರ ರಾಜಸ್ವ ಸಂಗ್ರಹದ ಗುರಿ.
ಮೋಟಾರು ವಾಹನ ತೆರಿಗೆ : 2025-26 ಸಾಲಿನಲ್ಲಿ 15,000 ಕೋಟಿ ರೂ. ಸಂಗ್ರಹದ ಗುರಿ, 2024-25 ಸಾಲಿನಲ್ಲಿ 12,500 ಕೋಟಿ ರೂ. ಸಂಗ್ರಹದ ನಿರೀಕ್ಷೆಯಿದೆ.
ಶಿಕ್ಷಣ : 45886 ಕೋಟಿ ರೂ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ : 34955 ಕೋಟಿ ರೂ.
ಇಂಧನ : 26896 ಕೋಟಿ ರೂ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ : 26735 ಕೋಟಿ ರೂ.
ನೀರಾವರಿ : 22181 ಕೋಟಿ ರೂ.
ನಗರಾಭಿವೃದ್ಧಿ ಮತ್ತು ವಸತಿ: 21405 ಕೋಟಿ ರೂ.
ಒಳಾಡಳಿತ ಮತ್ತು ಸಾರಿಗೆ : 20625 ಕೋಟಿ ರೂ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ : 17473 ಕೋಟಿ ರೂ.
ಕಂದಾಯ : 17201 ಕೋಟಿ ರೂ.
ಸಮಾಜ ಕಲ್ಯಾಣ : 16955 ಕೋಟಿ ರೂ.
ಲೋಕೋಪಯೋಗಿ : 11,841 ಕೋಟಿ ರೂ.
ಆಹಾರ ಮತ್ತು ನಾಗರೀಕ ಪೂರೈಕೆ : 8275 ಕೋಟಿ ರೂ.
ಕೃಷಿ ಮತ್ತು ತೋಟಗಾರಿಕೆ: 7145 ಕೋಟಿ ರೂ.
ಪಶುಸಂಗೋಪನೆ ಮತ್ತು ಮೀನುಗಾರಿಕೆ :3,977 ಕೋಟಿ ರೂ.
ಇತರೆ : 1,49,857 ಕೋಟಿ ರೂ.
ಬಜೆಟ್ನಲ್ಲಿ ಬಿಸಿಯೂಟ ಕಾರ್ಯಕರ್ತೆಯರಿಗೆ ಗೌರವಧನ 1 ಸಾವಿರ ಹೆಚ್ಚಳ ಮಾಡಿದ್ದಾರೆ. ಸರ್ಕಾರಿ-ಪ್ರೌಢ ಶಾಲೆ ಅತಿಥಿ ಶಿಕ್ಷಕರ ಗೌರವಧನವನ್ನು 2 ಸಾವಿರ ರೂ. ಹೆಚ್ಚಳ ಮಾಡಿದ್ದಾರೆ.
ಎಸ್ಸಿ-ಎಸ್ಟಿ ಸಮುದಾಯಕ್ಕೆ ಕಾಮಗಾರಿಗಳಲ್ಲಿ ಮೀಸಲಾತಿ
2 ಕೋಟಿ ರೂಪಾಯಿಯವರೆಗಿನ ಕಾಮಗಾರಿಗಳಲ್ಲಿ ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾತಿ ನೀಡಲಾಗುವುದು ಎಂದು ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ. ಎಸ್ಸಿಪಿ ಟಿಎಸ್ಪಿ ಯೋಜನೆಗೆ 42018 ಕೋಟಿ ರೂ. ಮೀಸಲು ಇಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ತೊಗರಿ ಬೆಳೆಗಾರರಿಗೆ 450 ರೂ. ಪ್ರೋತ್ಸಾಹಧನ
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕ್ವಿಂಟಾಲ್ಗೆ 7,550 ರೂ.ಗಳಿಗೆ ತೊಗರಿ ಖರೀದಿಗೆ ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಜೊತೆಗೆ ರಾಜ್ಯ ಸರ್ಕಾರದಿಂದ 450 ರೂ. ಪ್ರೋತ್ಸಾಹಧನ ನೀಡುವುದಾಗಿ ಸರ್ಕಾರ ತಿಳಿಸಿದೆ. ಇದರಿಂದಾಗಿ ಕಲಬುರಗಿ, ಬೀದರ, ಯಾದಗಿರಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ ಮೊದಲಾದ ಜಿಲ್ಲೆಗಳ ರೈತರಿಗೆ ಅನುಕೂಲವಾಗಲಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ಮಹಿಳಾ ಉದ್ದೇಶಿತ ಕಾರ್ಯಕ್ರಮಗಳಿಗೆ ಒಟ್ಟು 94,084 ಕೋಟಿ ರೂ. ಅನುದಾನ ಹಾಗೂ ಮಕ್ಕಳ ಉದ್ದೇಶಿತ ಕಾರ್ಯಕ್ರಮಗಳಿಗೆ 62,033 ಕೋಟಿ ರೂ. ಅನುದಾನ ಘೋಷಣೆ. ಅಂಗನವಾಡಿ ಕಾರ್ಯಕರ್ತೆಯರ ಗೌರವಧನ 1,000 ರೂ., ಸಹಾಯಕಿಯರಿಗೆ 750 ರೂ. ಗೌರವಧನ ಹೆಚ್ಚಳ. ಗೃಹ ಲಕ್ಷ್ಮಿ ಯೋಜನೆಗೆ 2025-26 ಸಾಲಿನಲ್ಲಿ 28,608 ಕೋಟಿ ರೂ. ಅನುದಾನ ನೀಡುವುದಾಗಿ ಬಜೆಟ್ನಲ್ಲಿ ಘೋಷಣೆ.
2030ರ ವೇಳೆಗೆ 20 ಲಕ್ಷ ಉದ್ಯೋಗ ಸೃಷ್ಟಿ ಗುರಿ
ರಾಜ್ಯ ಸರ್ಕಾರವು ಕೈಗಾರಿಕಾ ಮತ್ತು ಉತ್ಪಾದನಾ ವಲಯದ ಅಭಿವೃದ್ಧಿಗೆ ಬದ್ಧತೆಯನ್ನು ಘೋಷಿಸಿದ್ದು, 2030ರ ವೇಳೆಗೆ 20 ಲಕ್ಷ ಉದ್ಯೋಗ ಸೃಷ್ಟಿ ಗುರಿ ಹೊಂದಿದೆ. ಸರ್ಕಾರದ ವಿವಿಧ ಫಲಾನುಭವಿಗಳಿಗೆ ಮಧ್ಯವರ್ತಿಗಳಿಲ್ಲದೆ 1 ಲಕ್ಷ ಕೋಟಿ ರೂ.ಹಣವನ್ನು ವರ್ಗಾಯಿಸಲಾಗಿದೆ. ಕಲ್ಯಾಣ ಇಲಾಖೆಗಳ ಮೂಲಕ ಅಸಾಹಯಕರನ್ನು ಬಲಗೊಳಿಸಲು ಈ ಆಯವ್ಯಯವೂ ನೆರವಾಗಲಿದೆ.
ಅಬಕಾರಿ ಇಲಾಖೆಗೆ ಗುರಿ
ರಾಜ್ಯ ಸರ್ಕಾರ ಅಬಕಾರಿ ಸ್ಲ್ಯಾಬ್ ಪರಿಷ್ಕರಣೆಗೆ ನಿರ್ಧರಿಸಿದೆ. ಹಾಗೂ ಅಬಕಾರಿ ಇಲಾಖೆಗೆ 36,500 ಕೋಟಿ ರೂ. ಆದಾಯದ ಗುರಿ ನೀಡಿದೆ. ಹೀಗಾಗಿ ರಾಜ್ಯದಲ್ಲಿ ಮದ್ಯದ ಬೆಲೆ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ.
ಮಲ್ಟಿಫ್ಲೆಕ್ಸ್ಗಳಲ್ಲಿ ಸಿನಿಮಾ ಟಿಕೆಟ್ಗೆ ದರ ನಿಗದಿ
ಸಿನಿಮಾ ಕ್ಷೇತ್ರವನ್ನ ಸಿನಿಮಾ ಉದ್ಯಮ ಎಂದು ಪರಿಗಣಿಸಿ ಕೈಗಾರಿಕಾ ನೀತಿಯಡಿ ತರಲು ನಿರ್ಧಾರ ಮಾಡಲಾಗಿದೆ. ಕನ್ನಡ ಸಿನಿಮಾಗಳಿಗೆ OTT ವೇದಿಕೆ ಸೃಷ್ಟಿಸಲು ನಿರ್ಧಾರ. ಎಲ್ಲ ಚಿತ್ರಮಂದಿರಗಳಲ್ಲೂ ಸಿನಿಮಾ ಟಿಕೆಟ್ ದರ 200 ರೂ.ಗೆ ನಿಗದಿಗೆ ನಿರ್ಧರಿಸಲಾಗಿದ್ದು ಈ ಮೂಲಕ ಸರ್ಕಾರ ಮಲ್ಟಿಫ್ಲೆಕ್ಸ್ಗಳಲ್ಲಿ ಏಕರೂಪದ ದರನಿಗದಿಗೊಳಿಸಲು ಮುಂದಾಗಿದೆ.
ಧಾರ್ಮಿಕ ದತ್ತಿ ಇಲಾಖೆ ಅರ್ಚಕರಿಗೆ ತಸ್ತೀಕ್ ಮೊತ್ತದ ಏರಿಕೆ
ಧಾರ್ಮಿಕ ದತ್ತಿ ಇಲಾಖೆ ಅರ್ಚಕರಿಗೆ ತಸ್ತೀಕ್ ಮೊತ್ತದ ಏರಿಕೆ ಮಾಡಲು ನಿರ್ಧರಿಸಲಾಗಿದ್ದು, 60 ಸಾವಿರ ರೂ.ಗಳಿಂದ 72 ಸಾವಿರ ರೂ.ಗಳಿಗೆ ಹೆಚ್ಚಳ ಮಾಡಲಾಗುತ್ತದೆ. ಅಲ್ಲದೆ, ಕರ್ನಾಟಕ ದೇವಾಲಯ ವಸತಿ ಕೋಶ ಸ್ಥಾಪನೆಗೆ ನಿರ್ಧಾರ ಮಾಡಲಾಗಿದೆ. ದೇವಾಲಯಗಳ ಛತ್ರಗಳಲ್ಲಿ ರೂಮ್ ಬುಕಿಂಗ್ಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ರಾಜ್ಯದಲ್ಲಿ ಒತ್ತುವರಿಯಾಗಿರುವ ದೇಗುಲಗಳ ಆಸ್ತಿ ರಕ್ಷಣೆಗೆ ಭೂವರಾಹ ಯೋಜನೆಯಡಿ ಸ್ಥಿರಾಸ್ತಿ ದಾಖಲೀಕರಣಗೊಳಿಸಲು ಕ್ರಮವಹಿಸಲಾಗುತ್ತದೆ.
ಪ್ರವಾಸೋದ್ಯೋಮ ತಾಣವಾಗಿ ಚಂದ್ರಗುತ್ತಿ ಅಭಿವೃದ್ಧಿಗೆ ಕ್ರಮ
ನೀರಾವರಿ ಯೋಜನೆಗೆ ಒತ್ತು
ಕೃಷ್ಣ ಮೇಲ್ದಂಡೆ ಯೋಜನೆ 3ನೇ ಹಂತ ವ್ಯಾಪ್ತಿಯ ಆಲಮಟ್ಟಿ ಅಣೆಕಟ್ಟಿನ ಗೇಟ್ ಅನ್ನು 524.256 ಮೀಟರ್ ವರೆಗೆ ಎತ್ತರಿಸಲು ಕ್ರಮ. ಇದರಿಂದ ಬಾಧಿತ ರೈತರಿಗೆ ಪರಿಹಾರ ವಿತರಣೆಗೆ ಕ್ರಮ.
ಕೃಷ್ಣಾ ಕಣಿವೆ, ಕಾವೇರಿ ಕಣಿವೆ ಹಾಗೂ ಇತರ ನದಿಗಳ ಕಣಿವೆಯ ವಿವಿಧ ಯೋಜನೆಗಳಡಿ ಬಾಕಿ ಕಾಮಗಾರಿಗಳ ಪೂರ್ಣಗೊಳಿಸಲು ಕ್ರಮ
ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಕಾಲಮಿತಿಯೊಳಗೆ ಪೂರ್ಣ.
ಕಳಸಾ – ಬಂಡೂರಾ ನಾಲಾ ತಿರುವು ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ದೊರೆತ ತಕ್ಷಣ ಕಾಮಗಾರಿ.
1.77 ಲಕ್ಷ ಎಕರೆ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಸಾಮರ್ಥ್ಯ ಅಳವಡಿಕೆ
2.01 ಲಕ್ಷ ಎಕರೆ ನೀರಾವರಿ ಸಾಮರ್ಥ್ಯ ಕಲ್ಪಿಸುವ ಬಾಕಿ ಕಾಮಗಾರಿ ಅನುಷ್ಠಾನಕ್ಕೆ ಕ್ರಮ.
ಮೇಕೆದಾಟು ಸಮತೋಲನ ಜಲಾಶಯ ಯೋಜನೆಯ ಪೂರ್ವ ಸಿದ್ಧತಾ ಕಾರ್ಯ ಅಂತಿಮ.
ಜಲಸಂಪನ್ಮೂಲ ಇಲಾಖೆಯಲ್ಲಿ ಕಾಮಗಾರಿಗಳ ಅಂದಾಜು ತಯಾರಿಕೆಯಲ್ಲಿ ಏಕರೂಪದ ತಾಂತ್ರಿಕ ಮಾನದಂಡ ಜಾರಿ.
ಸಣ್ಣ ನೀರಾವರಿ ಯೋಜನೆಗಳಿಗೆ 2 ಸಾವಿರ ಕೋಟಿ ರೂ.
ಸಣ್ಣ ನೀರಾವರಿ: ಎತ್ತಿನಹೊಳೆ ಯೋಜನೆಯಿಂದ ಮಧುಗಿರಿ ತಾಲೂಕಿನ 45 ಕೆರೆಗಳು, ಕೊರಟಗೆರೆ ತಾಲೂಕಿನ 62 ಕೆರೆಗಳಿಗೆ ನೀರು ತುಂಬಿಸಲು 553 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಕ್ರಮ.
1,080 ಕೋಟಿ ರೂ. ವೆಚ್ಚದ ವೃಷಭಾವತಿ ವ್ಯಾಲಿ ಮೊದಲನೇ ಹಂತದ 70 ಕೆರೆ ತುಂಬಿಸುವ ಯೋಜನೆಗೆ ಕ್ರಮ
ರೇಷ್ಮೆ ಕೃಷಿ
ರಾಮನಗರ ಮತ್ತು ಶಿಡ್ಲಘಟ್ಟ ಹೈಟೆಕ್ ರೇಷ್ಮೆ ಗೂಡಿನ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದರಿಂದ ಎರಡನೇ ಹಂತದ ಕಾಮಗಾರಿಗೆ 250 ಕೋಟಿ ರೂ. ವೆಚ್ಚ.
ನಬಾರ್ಡ್ ಸಹಯೋಗದಲ್ಲಿ ಮೈಸೂರಿನಲ್ಲಿ ರೇಷ್ಮೆಗೂಡಿನ ಮಾರುಕಟ್ಟೆ ಸ್ಥಾಪನೆ.
ರೇಷ್ಮೆ ಬೆಳೆ ವಿಸ್ತರಿಸಲು 55 ಕೋಟಿ ರೂ. ಅನುದಾನ.
ಮಧ್ಯಮ ವರ್ಗದ ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ 120 ಕೊನೆಗಳ ಸ್ವಯಂಚಾಲಿತ ರೀಲಿಂಗ್ ಘಟಕಗಳ ಸ್ಥಾಪನೆ.
ಪಶುಸಂಗೋಪನೆ
2025-26 ನೇ ಸಾಲಿನಲ್ಲಿ 50 ನೂತನ ಪಶು ಚಿಕಿತ್ಸಾಲಯ ಪ್ರಾರಂಭ. ನಬಾರ್ಡ್ ಸಹಯೋಗದಲ್ಲಿ 100 ಪಶು ವೈದ್ಯಕೀಯ ಸಂಸ್ಥೆಗಳ ನೂತನ ಕಟ್ಟಡ ನಿರ್ಮಾಣ. ಅರಣ್ಯ ಇಲಾಖೆ ಹಾಗೂ ನರೇಗಾ ಸಹಯೋಗದೊಂದಿಗೆ ಮೇವಿನ ಮರಗಳ ನೆಡುತೋಪು ಅಭಿವೃದ್ಧಿ.
ಹೊಸ ಯೋಜನೆ ಘೋಷಿಸಿದ ಸಿದ್ದರಾಮಯ್ಯ
500 ಹೊಸ ಕರ್ನಾಟಕ ಪಬ್ಲಿಕ್ ಶಾಲೆ ಆರಂಭ
ಎತ್ತಿನಹೊಳೆ ಯೋಜನೆಗೆ 553 ಕೋಟಿ ರೂಪಾಯಿ ಮೀಸಲು
ಗುತ್ತಿಗೆ ಕಾಮಗಾರಿಯಲ್ಲಿ ಮುಸ್ಲಿಮರಿಗೆ ಮೀಸಲಾತಿ
ಪ್ರವರ್ಗ 1, 2ಎ, 2ಬಿ (ಮುಸ್ಲಿಂ) ಸಮುದಾಯದವರಿಗೆ 2 ಕೋಟಿ ರೂ.ವರೆಗೆ ಕಾಮಗಾರಿ ಗುತ್ತಿಗೆಯಲ್ಲಿ ಮೀಸಲಾತಿ ನೀಡಲು ನಿರ್ಧಾರ.
ಕೈಗಾರಿಕ ಪ್ರದೇಶ ಭೂಮಿ ಹಂಚಿಕೆಯಲ್ಲೂ ಪ್ರವರ್ಗ1, 2ಎ, ಜತೆ ೨ಬಿ (ಮುಸ್ಲಿಂ) ಗೆ ಮೀಸಲಾತಿ ಘೋಷಣೆ
ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆ
ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಬ್ಯಾಸಕ್ಕೆ ಪ್ರೋತ್ಸಾಹಿಸಲು ರಾಜ್ಯದ 31 ಜಿಲ್ಲೆಗಳಲ್ಲಿ 6 ರಿಂದ 12ನೇ ತರಗತಿಯವರೆಗೂ ವಸತಿ ಶಾಲೆಗಳ ಪ್ರಾರಂಭಕ್ಕೆ 750 ಕೋಟಿ ರೂ.ಗಳ ನಿಗದಿ.
ನೋಂದಾಯಿತ ಕಾರ್ಮಿಕರಿಗೆ ಶೈಕ್ಷಣಿಕ, ವೈದ್ಯಕೀಯ ಸೌಲಭ್ಯಕ್ಕಾಗಿ ನೀಡುವ ಸಹಾಯಧನ ದ್ವಿಗುಣ
ಸಹಜ ಮರಣ ಹೊಂದಿದಲ್ಲಿ 1.5 ಲಕ್ಷ ಪರಿಹಾರ, ಕೆಲಸದ ಸ್ಥಳದಲ್ಲಿ ಮರಣಹೊಂದಿದರೆ 8 ಲಕ್ಷ ರೂ.ಗಳ ಪರಿಹಾರ ಘೋಷಣೆ.
ಆಯುಷ್ಮಾನ್ ಭಾರತ ಆರೋಗ್ಯ ಯೋಜನೆಯಡಿ 5 ಲಕ್ಷ ಮಿತಿ ಪೂರ್ಣಗೊಂಡಲ್ಲಿ ಹೃದ್ರೋಗ, ಕ್ಯಾನ್ಸ್ರಗೆ 5 ಲಕ್ಷ ರೂ. ಇತರೆ ಕಾಯಿಲೆಗಳಿಗೆ 2 ಲಕ್ಷ ರೂ.ಗಳನ್ನು ಪಾವತಿ.
ಇಎಸ್ಐ ಆಸ್ಪತ್ರೆ ಮೂಲಸೌಲಭ್ಯ ಹೆಚ್ಚಳ ಮಾಡಲು 51 ಕೋಟಿ ರೂ.ಗಳ ನಿಗದಿ
ಜೈನ, ಬೌದ್ಧ, ಸಿಖ್ಖ್ ಸಮುದಾಯಗಳ ಅಭಿವೃದ್ಧಿಗೆ 100 ಕೋಟಿ ರೂ.
ಜೈನ, ಬೌದ್ಧ ಹಾಗೂ ಸಿಖ್ಖ್ ಸಮುದಾಯಗಳ ಅಭಿವೃದ್ಧಿಗಾಗಿ 100 ಕೋಟಿ ರೂ. ನಿಗದಿ.
ಕ್ರೈಸ್ತ ಸಮುದಾಯದ ಅಭಿವೃದ್ಧಿಗಾಗಿ 250 ಕೋಟಿ ರೂ. ಮೀಸಲು
ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ರಾಷ್ಟ್ರೀಯ ವಿದೇಶಿ ವಿದ್ಯಾರ್ಥಿ ವೇತನ 20 ಲಕ್ಷದಿಂದ 30 ಲಕ್ಷಕ್ಕೆ ಹೆಚ್ಚಿಸಲಾಗುವುದು.