ಪ್ರೌಢ ಶಾಲೆಯ ಶಿಕ್ಷಕರಿಗೆ ಇದೀಗ ದ್ವಿತೀಯ ಪಿಯುಸಿ ಪರೀಕ್ಷೆಯ ಮೇಲ್ವಿಚಾರಕ ಜವಾಬ್ದಾರಿ ವಹಿಸಲಾಗಿದೆ. ಅದೇ ರೀತಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಉಪನ್ಯಾಸಕರು ಮೇಲ್ವಿಚಾರಕರಾಗಿ ಬರಲಿ ಎನ್ನುವುದು ಶಿಕ್ಷಕ ಸಂಘಟನೆಗಳ ಒತ್ತಾಯವಾಗಿದೆ.
ಬೆಳಗಾವಿ : ಪ್ರೌಢಶಾಲಾ ಶಿಕ್ಷಕರ ಭಾವನೆಗಳಿಗೆ ಇದೀಗ ರಾಜ್ಯದ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಬಹುದೊಡ್ಡ ರೀತಿಯಲ್ಲಿ ಧಕ್ಕೆ ತಂದಿದ್ದಾರೆ.
ಫೆಬ್ರವರಿ 28 ರಿಂದ ಮಾರ್ಚ್ 18ರವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿದೆ.
ದ್ವಿತೀಯ ಪರೀಕ್ಷೆಗಳಿಗೆ ಮೇಲ್ವಿಚಾರಕರಾಗಿ ಇದೀಗ ಶಾಲಾ ಶಿಕ್ಷಣ ಇಲಾಖೆ ಪ್ರೌಢಶಾಲೆಯ ಶಿಕ್ಷಕರನ್ನು ನಿಯೋಜನೆ ಮಾಡಿ ಆದೇಶ ಹೊರಡಿಸಿದೆ. ಅದರಲ್ಲೂ ಅನುದಾನಿತ ಶಿಕ್ಷಕರು ಪರೀಕ್ಷೆಯ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅದರಲ್ಲೂ ಅವರನ್ನು ಉತ್ತೀರ್ಣ ಮಾಡಲೇಬೇಕು ಎಂದು ಶತ ಪ್ರಯತ್ನದಲ್ಲಿ ತೊಡಗಿರುವ ಪ್ರೌಢಶಾಲಾ ಶಿಕ್ಷಕರು ಈಗ ಈ ಹೆಚ್ಚಿನ ಹೊರೆಯಿಂದ ತತ್ತರಿಸಿ ಹೋಗಿದ್ದಾರೆ.
ಪ್ರೌಢಶಾಲಾ ಶಿಕ್ಷಕರು ಬೆಳಗ್ಗೆಯಿಂದ ಸಂಜೆವರೆಗೆ ಪರೀಕ್ಷೆಯ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸಿ ಮತ್ತೆ ಶಾಲಾ ಅವಧಿಯಲ್ಲಿ ಹಾಜರಾಗಬೇಕಂತೆ…!
ಇವರು ಶಿಕ್ಷಕರು ಅಥವಾ ಕುರಿಗಳಂತೆ ತಲೆ ಆಡಿಸುವವರು ಎಂಬ ಪ್ರಶ್ನೆ ಈಗ ಎಲ್ಲರಲ್ಲೂ ಉದ್ಭವಗೊಂಡಿದೆ.
ಪಿಯುಸಿ ಪರೀಕ್ಷೆಗಳಿಗೆ ಪ್ರೌಢಶಾಲೆಗೆ ಯಾವ ಸಂಬಂಧವೂ ಇಲ್ಲ. ಆದರೆ ಪಿಯುಸಿ ಪರೀಕ್ಷೆಗಳಿಗೆ ಪ್ರೌಢ ಶಾಲೆಯ ಶಿಕ್ಷಕರನ್ನು ನಿಯೋಜಿಸುವಂತೆ ಉಪನ್ಯಾಸಕರು ತಮ್ಮ ಇಲಾಖೆ ಮೇಲೆ ಇನ್ನಿಲ್ಲದ ಒತ್ತಡ ಹೇರಿದ ಪರಿಣಾಮ ಈಗ ಸಮಸ್ಯೆ ಸೃಷ್ಟಿಗೊಂಡಿದೆ. ಪ್ರೌಢಶಾಲಾ ಪರೀಕ್ಷೆಗಳಿಗೆ ಸಹ ಪಿಯುಸಿ ಉಪನ್ಯಾಸಕರನ್ನು ಮೇಲ್ವಿಚಾರಕನಾಗಿ ನೇಮಿಸಲಿ ಎಂದು ಇದೀಗ ಡಿಡಿಪಿಐ ಅವರಿಗೆ ಪ್ರೌಢಶಾಲಾ ಶಿಕ್ಷಕರು ಮನವಿ ಮಾಡಲು ಮುಂದಾಗುತ್ತಿದ್ದಾರೆ. ಅದಕ್ಕೆ ದ್ವಿತೀಯ ಪಿಯುಸಿ ಉಪನ್ಯಾಸಕರು ಒಪ್ಪಿಗೆ ಕೊಟ್ಟರೆ ಪ್ರೌಢಶಾಲಾ ಶಿಕ್ಷಕರು ಪಿಯುಸಿ ಪರೀಕ್ಷೆಯ ಮೇಲ್ವಿಚಾರಣೆ ನಡೆಸುವುದರಲ್ಲಿ ಯಾವ ಅಭ್ಯಂತರವೂ ಇಲ್ಲ. ಆದರೆ ಪ್ರೌಢಶಾಲಾ ಪರೀಕ್ಷೆಯ ಜವಾಬ್ದಾರಿ ತಮಗೆ ಬೇಡ ಎಂದು ಮೇಲು-ಕೀಳು ಮಾಡುವಲ್ಲಿ ಉಪನ್ಯಾಸಕರು ಪ್ರಯತ್ನಿಸಿರುವುದು ಸುಳ್ಳಲ್ಲ.
ಈ ಬೆಳವಣಿಗೆಗಳಿಂದ ರೊಚ್ಚಿಗೆದ್ದಿರುವ ಶಿಕ್ಷಕ ಸಂಘಟನೆಗಳು ಇದೀಗ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡುತ್ತಿರುವ ಪಿಯುಸಿ ಉಪನ್ಯಾಸಕರ ನಿಲುವನ್ನು ಖಂಡಿಸಿ ಮನವಿ ನೀಡಲು ನಿರ್ಧರಿಸಿದ್ದಾರೆ.
—
ಪ್ರೌಢಶಾಲಾ ಶಿಕ್ಷಕರನ್ನು ದ್ವಿತೀಯ ಪಿಯುಸಿ ಪರೀಕ್ಷೆಯ ಮೇಲ್ವಿಚಾರಕರನ್ನಾಗಿ ನಿಯೋಜನೆ ಮಾಡುವ ನಿರ್ಧಾರ ತೀವ್ರ ಖಂಡನೀಯ.
-ಅಶೋಕ ಅಣ್ಣಿಗೇರಿ, ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ


