ಬೆಳಗಾವಿ : ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾಸ್ಥಳವಾಗಿರುವ ಸವದತ್ತಿಯ ಯಲ್ಲಮ್ಮ ದೇವಸ್ಥಾನದಲ್ಲಿ ಗುರುವಾರ ಹುಂಡಿ ಎಣಿಕೆ ಮುಗಿದಿದೆ. ರೂ. 3.68 ಕೋಟಿ ಕಾಣಿಕೆ ಸಂಗ್ರಹವಾಗಿದೆ. ಪ್ರತಿಬಾರಿ ಎಣಿಕೆ ನಡೆದಾಗ ರೂ. 1 ಕೋಟಿಯಿಂದ ರೂ. 1.5 ಕೋಟಿಯವರೆಗೆ ಸಂಗ್ರಹವಾಗುತ್ತಿತ್ತು. ಆದರೆ, ಈ ಬಾರಿ ದುಪ್ಪಟ್ಟು ಕಾಣಿಕೆ ಸಂಗ್ರಹವಾಗಿದೆ.
2024 ರ ಡಿಸೆಂಬರ್ 14 ರಿಂದ 2025 ರ ಮಾರ್ಚ್ 12ರವರೆಗೆ (89 ದಿನ) ಕಾಣಿಕೆ ಎಣಿಕೆ ಮಾಡಲಾಗಿದೆ. ಹುಂಡಿಗಳಲ್ಲಿ ರೂ. 3.40 ಕೋಟಿ ನಗದು, ರೂ. 20.82 ಲಕ್ಷ ಮೌಲ್ಯದ ಚಿನ್ನಾಭರಣ, ರೂ. 6.39 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಸಂಗ್ರಹವಾಗಿವೆ. ಅಮೆರಿಕ, ನೆದರ್ಲೆಂಡ್ ಮುಂತಾದ ದೇಶಗಳ ಕರೆನ್ಸಿ ಗಳು ಹುಂಡಿಯಲ್ಲಿ ಸಿಕ್ಕಿವೆ.
ಬನದ ಹುಣ್ಣಿಮೆ ಹಾಗೂ ಭರತ ಹುಣ್ಣಿಮೆ ಅವಧಿಯಲ್ಲಿ ಅಪಾರ ಪ್ರಮಾಣದಲ್ಲಿ ಕಾಣಿಕೆ ಹರಿದುಬಂದಿದೆ. ಕಳೆದ ವರ್ಷ ಹೆಚ್ಚಿನ ಭಕ್ತರು ಬಂದಿರಲಿಲ್ಲ. ನಿರೀಕ್ಷೆಯಷ್ಟು ಕಾಣಿಕೆ ಬಂದಿರಲಿಲ್ಲ.
ಆದರೆ, ಈ ಬಾರಿ ಸಮೃದ್ಧ ಮಳೆಯಾಗಿ ಉತ್ತಮ ಫಸಲು ಬಂದಿದ್ದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಹಣವನ್ನು ದೇವಸ್ಥಾನದ ಉಳಿತಾಯ ಖಾತೆಗೆ ಜಮೆ ಮಾಡಲಾಗಿದೆ. ಅಭಿವೃದ್ಧಿ ಕೆಲಸಕ್ಕೆ, ಭಕ್ತರಿಗೆ ಸೌಕರ್ಯ ಕಲ್ಪಿಸಲು ಅದನ್ನು ಬಳಸಲಾಗುವುದು ಎಂದು
ಸವದತ್ತಿ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಅಶೋಕ ದುಡಗುಂಟಿ ತಿಳಿಸಿದ್ದಾರೆ.
ಯಲ್ಲಮ್ಮನಗುಡ್ಡದ ಅಭಿವೃದ್ಧಿಗೆ ಕ್ರಮ ವಹಿಸಿದ್ದೇವೆ. ಭಕ್ತರಿಗೆ ಹೆಚ್ಚು ಸೌಕರ್ಯ ಒದಗಿಸಿ ಗುಡ್ಡದ ಆದಾಯ ಇನ್ನಷ್ಟು ಹೆಚ್ಚಿಸಲಾಗುವುದು ಎಂದು
ಸವದತ್ತಿ ಶಾಸಕ ವಿಶ್ವಾಸ ವೈದ್ಯ ತಿಳಿಸಿದ್ದಾರೆ.
ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗಣ್ಣವರ, ಮುಜರಾಯಿ ಇಲಾಖೆ ಅಧಿಕಾರಿ ಬಾಳೇಶ ಅಬ್ಬಾಯಿ, ದೇವಸ್ಥಾನ ಉಪಕಾರ್ಯದರ್ಶಿ ನಾಗರತ್ನಾ ಚೋಳಿನ, ಡಿ.ಆರ್. ಚವ್ಹಾಣ, ಅಣ್ಣಪೂರ್ಣಾ ಬ್ಯಾಹಟ್ಟಿ, ಎಎಸ್ಐ ಬಿ.ಆರ್. ಸಣ್ಣಮಳಗೆ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಚಾಣಾಕ್ಷ್ಯ, ಅಲ್ಲಮಪ್ರಭು ಪ್ರಭುನವರ, ಆರ್.ಚಾಣಾಕ್ಷ್ಯ್ಸಿ, ರಾಜು ಬೆಳವಡಿ, ಪ್ರಭು ಹಂಜಗಿ, ಡಿ.ಡಿ. ನಾಗನಗೌಡರ, ಯೋಗೇಶ ಶೀರಾಳೆ, ವಿ.ಆರ್. ನಿಲಗುಂದ, ಮಲ್ಲಯ್ಯ ತೋರಗಲ್ಲಮಠ ಉಪಸ್ಥಿತರಿದ್ದರು.
ಪೌರಾಣಿಕ ಕ್ಷೇತ್ರ :
ರೇಣುಕಾ ದೇವಸ್ಥಾನ ಎಂದೂ ಕರೆಯಲ್ಪಡುವ ಯಲ್ಲಮ್ಮ ದೇವಸ್ಥಾನ ರೇಣುಕಾ ದೇವಿಯ ದೇವಾಲಯವಾಗಿದೆ. ಸವದತ್ತಿ ಪಟ್ಟಣದಿಂದ ಐದು ಕಿ.ಮೀ ದೂರದಲ್ಲಿರುವ ಯಾತ್ರಾಸ್ಥಳವಾಗಿದೆ. ಇದು ಹಿಂದೆ ಸಿದ್ಧಾಚಲ ಪರ್ವತ ಎಂದು ಕರೆಯಲ್ಪಡುವ ಬೆಟ್ಟದ ಮೇಲೆ ನೆಲೆಗೊಂಡಿತ್ತು, ಈಗ ಇದನ್ನು “ಯಲ್ಲಮ್ಮ ಗುಡ್ಡ” ಎಂದು ಕರೆಯಲಾಗುತ್ತದೆ. ದೇವಸ್ಥಾನದಲ್ಲಿರುವ ದೇವತೆ ಯಲ್ಲಮ್ಮ ಅಥವಾ ಎಲ್ಲಮ್ಮ ಅಥವಾ ರೇಣುಕಾ ದೇವಿ ಎಂದು ಪೂಜಿಸಲ್ಪಡುತ್ತಾರೆ.