ಅಹಮದಾಬಾದ್ : ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಏರ್ ಇಂಡಿಯಾ ವಿಮಾನ AI 171 ಅಪಘಾತಕ್ಕೀಡಾದ ದೃಶ್ಯವನ್ನು ವೀಕ್ಷಿಸಿದ ಸ್ಥಳೀಯ ನಿವಾಸಿಯೊಬ್ಬರು, ವಿಮಾನವೇನಾದರೂ ವಸತಿ ಪ್ರದೇಶಕ್ಕೆ ಡಿಕ್ಕಿ ಹೊಡೆದಿದ್ದರೆ 1,500 ರಿಂದ 2,000 ಜನರು ಸಾಯಬಹದಿತ್ತು ಎಂದು ಹೇಳಿದ್ದಾರೆ. ದೊಡ್ಡ ದುರಂತವನ್ನು ಸ್ವಲ್ಪದರಲ್ಲೇ ತಪ್ಪಿಸಲಾಯಿತು ಎಂದು ಅವರು ಹೇಳಿದ್ದಾರೆ.
ಜೂನ್ 12 ರಂದು ಮಧ್ಯಾಹ್ನ 1:38 ಕ್ಕೆ ಅಹಮದಾಬಾದ್ನಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ 171 ವಿಮಾನವು ಟೇಕ್ ಆಫ್ ಆದ ನಿಮಿಷದಲ್ಲೇ, ವಿಮಾನ ನಿಲ್ದಾಣದ ಸಮೀಪದ ಮೇಘಾನಿ ನಗರ ಪ್ರದೇಶದ ಬಳಿಯ ವೈದ್ಯಕೀಯ ಹಾಸ್ಟೆಲ್ಗೆ ಅಪ್ಪಳಿಸಿತು.
“ಅಪಘಾತ ಸಂಭವಿಸಿದಾಗ ನಾವು ಕ್ರಿಕೆಟ್ ಆಡುತ್ತಿದ್ದೆವು. ವಿಮಾನವು ನಮ್ಮ ಮೇಲೆಯೇ ಹಾರಿತು. ಅದು ತುಂಬಾ ಹತ್ತಿರದಲ್ಲಿತ್ತು” ಎಂದು ಘಟನೆ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದನ್ನು ಸಿಎನ್ಎನ್ ನ್ಯೂಸ್ 18 ವರದಿ ಉಲ್ಲೇಖಿಸಿದೆ.
“ಅಪಘಾತದ ನಂತರ ಸಂಪೂರ್ಣ ಅವ್ಯವಸ್ಥೆ ಇತ್ತು. ನಾವು ಸ್ಥಳಕ್ಕೆ ಧಾವಿಸಿ ಸುಮಾರು 15 ರಿಂದ 20 ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದೇವೆ. ಸಾಮಾನ್ಯವಾಗಿ, ವಿಮಾನಗಳು ಹೆಚ್ಚು ಎತ್ತರಕ್ಕೆ ಹಾರುತ್ತವೆ, ಆದರೆ ಇದು ಮನೆಗಳಿಗೆ ಅಪಾಯಕಾರಿಯಾಗುವಷ್ಟು ಹತ್ತಿರದಲ್ಲಿತ್ತು. ವಸತಿ ಪ್ರದೇಶದಿಂದ ಸ್ವಲ್ಪ ದೂರದಲ್ಲಿ ವಿಮಾನ ಬೀಳುವಂತೆ ಮಾಡಿದ್ದಕ್ಕಾಗಿ ಪೈಲಟ್ಗೆ ಸಲ್ಯೂಟ್. ಇಲ್ಲದಿದ್ದರೆ, 1,500 ರಿಂದ 2,000 ಜನರು ಸಾಯಬಹುದಿತ್ತು” ಎಂದು ಅವರು ಹೇಳಿದ್ದಾರೆ.
ಈ ಹಿಂದೆ, 825 ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನವು ಏರುವಿಕೆಯನ್ನು ಕಳೆದುಕೊಂಡು ವಸತಿ ವಲಯಕ್ಕೆ ಬಿದ್ದಾಗ ಕಿವಿಗಡಚಿಕ್ಕುವ ಸ್ಫೋಟ ಮತ್ತು ಆಕಾಶಕ್ಕೆ ಬೆಂಕಿಯ ಚೆಂಡಿನ ಉಂಡೆ ನೆಗೆದಿದ್ದನ್ನು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದರು.ನೆಲದ ದೃಶ್ಯಗಳು ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆ ಪ್ರಕಾರ, ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರಬೋಯಿಂಗ್ 787 ಡ್ರೀಮ್ಲೈನರ್ ಮೇಲಕ್ಕೆ ಹೋಗಲು ಕಷ್ಟಪಟ್ಟು ನಂತರ ಕೆಳಗೆ ಬಿದ್ದು ಬೆಂಕಿಗೆ ಆಹುತಿಯಾಯಿತು.
ಈ ವಿಮಾನವು 169 ಭಾರತೀಯ ಪ್ರಜೆಗಳು, 53 ಬ್ರಿಟನ್ನಿನ ಪ್ರಜೆಗಳು, 7 ಪೋರ್ಚುಗೀಸ್ ನಾಗರಿಕರು ಮತ್ತು ಒಬ್ಬರು ಕೆನಡಾದ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ಒಟ್ಟು 230 ಪ್ರಯಾಣಿಕರು ಮತ್ತು 12 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಈ ವಿಮಾನದಲ್ಲಿದ್ದ ಒಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲರೂ ಸಾವಿಗೀಡಾಗಿದ್ದಾರೆ. ವಿಮಾನದಿಂದ ಹೊರಬರುವ ಬಾಗಿಲು ಇರುವ ಸಾಲು 11A ನಲ್ಲಿ ಕುಳಿತಿದ್ದ 40 ವರ್ಷದ ಬ್ರಿಟಿಷ್ ಪ್ರಜೆ ವಿಶ್ವಾಸಕುಮಾರ ರಮೇಶ ಅವರು ಗಾಯಗಳಾಗಿದ್ದರೂ ಪವಾಡಸದೃಶ ರೀತಿಯಲ್ಲಿ ಬದುಕುಳಿದಿದ್ದಾರೆ. ಈ ಅಪಘಾತವು ವಿಮಾನ ಬಿದ್ದ ವೈದ್ಯಕೀಯ ವಿದ್ಯಾರ್ಥಿಗಳ ಹಾಸ್ಟೆಲ್ ಮೇಲೆಯೂ ಪರಿಣಾಮ ಬೀರಿತು. ನಾಲ್ವರು ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ ಹಾಸ್ಟೆಲಿಗೆ ಸಂಬಂಧಿಸಿದ ಐವರು ಸಾವಿಗೀಡಾದರು. ಕಟ್ಟಡ ಸುಟ್ಟು ಹೋಯಿತು. ಅಲ್ಲದೆ ವಿಮಾನ ಅಪ್ಪಳಿಸಿದ ಸ್ಥಳದಲ್ಲಿದ್ದ ಇನ್ನೂ ಅನೇಕರು ಸಾವಿಗೀಡಾದರು.