ಬೆಳಗಾವಿ: ಸಂವಿಧಾನ ನಮಗೆ ನೀಡಿದ ಹಕ್ಕು ಹಾಗೂ ಕರ್ತವ್ಯಗಳನ್ನು ಪಾಲಿಸುವ ಮೂಲಕ ಭಾರತವನ್ನು ವಿಶ್ವದರ್ಜೆಗೆ ಏರಿಸಬೇಕು ಹಾಗೂ ರಾಷ್ಟ್ರದ ಒಳತಿಗಾಗಿ ಭಾರತೀಯರೆಲ್ಲರೂ ಒಗ್ಗಟ್ಟಾಗಬೇಕು ಎಂದು ಕುಮಾರಸ್ವಾಮಿ ರಹವಾಸಿ ಸಂಘದ ಅಧ್ಯಕ್ಷ ಹಾಗೂ ಬಾಲಾಜಿ ಹಾರ್ಡ್ವೇರ್ ಗ್ಯಾಲರಿ ಮಾಲೀಕ ರುದ್ರಣ್ಣ ಚಂದರಗಿ ಕರೆ ನೀಡಿದರು.
ನಗರದ ಕುಮಾರಸ್ವಾಮಿಯ ರವಾಸಿ ಸಂಘದ ವತಿಯಿಂದ 77ನೇ ಗಣರಾಜ್ಯೋತ್ಸವ ಆಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನಮ್ಮ ಸಂವಿಧಾನ ನಮಗೆ ಹಕ್ಕುಗಳನ್ನು ನೀಡಿದೆ. ಆದರೆ, ಆ ಹಕ್ಕಗಳ ಜೊತೆಗೆ ಜವಾಬ್ದಾರಿ ಮತ್ತು ಕರ್ತವ್ಯಗಳಿವೆ ಎಂಬುವುದನ್ನು ಯಾರು ಮರೆಯಬಾರದು. ಸಂವಿಧಾನದ ಮೌಲ್ಯಗಳಾದ ಸಮಾನತೆ, ಭಾತೃತ್ವ ಮತ್ತು ಸಾಮಾಜಿಕ ನ್ಯಾಯ ಪಾಲಿಸುವ ಜವಾಬ್ದಾರಿಯುತ ಪ್ರಜೆಗಳಾಗಬೇಕು ಎಂದು ಸಲಹೆ ನೀಡಿದರು.
ಗಣತಂತ್ರ, ಸಾರ್ವಭೌಮ, ಜಾತ್ಯಾತೀತ ಮತ್ತು ಪ್ರಜಾಪ್ರಭುತ್ವದ ಭಾರತವು ವಿವಿಧ ಕ್ಷೇತ್ರಗಳಲ್ಲಿ ವಿಶ್ವಮಟ್ಟದಲ್ಲಿ ಅಭಿವೃದ್ಧಿಯಾಗಿದೆ. ಇಂದು ವಿಶ್ವದಲ್ಲಿ ನಮ್ಮ ಭಾರತವು ಜ್ಞಾನ, ವಿಜ್ಞಾನ, ತಂತ್ರಜ್ಞಾನದಲ್ಲಿ ಹಾಗೂ ಆರ್ಥಿಕವಾಗಿ ಸಮರ್ಥ ಮತ್ತು ಬಲಿಷ್ಠ ದೇಶವಾಗಿದೆ. ನಮ್ಮ ದೇಶದ ಸಂವಿಧಾನವು ಕೇವಲ ಒಂದು ಪುಸ್ತಕವಲ್ಲ ಅದು 140 ಕೋಟಿ ಭಾರತೀಯರ ಆಶೋತ್ತರಗಳ ಪ್ರತಿಬಿಂಬವಾಗಿದೆ.
ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಸಂವಿಧಾನ ರಚನಾ ಸಮಿತಿಯ ಸರ್ವ ಗಣ್ಯರನ್ನು ಸ್ಮರಸಿ, ಗೌರವಿಸಬೇಕು ಎಂದು ಮನವಿ ಮಾಡಿದರು.
ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ವಿರೂಪಾಕ್ಷಿ ನೀರಲಗಿಮಠ, ಪಂಚ ಕಮಿಟಿ ಅರವಿಂದ ಜೋಶಿ, ಶಿವಾಲಯ ಕಮಿಟಿ ಅಧ್ಯಕ್ಷ ಬಸವರಾಜ ರೊಟ್ಟಿ, ರಹವಾಸಿ ಸಂಘದ ಉಪಾಧ್ಯಕ್ಷ ಲಕ್ಷ್ಮಣ ಅಕ್ಕೆಣ್ಣವರ, ಸದಸ್ಯರಾದ ಶಂಕರ ಕೋಬರ್, ಮಹಾದೇವ ಹೊಂಗಲ, ಶಿವಪುತ್ರ, ಶಿವಪುತ್ರ ಗಂಗಾಪುರ, ಕೃಷ್ಣಾ ಹಂದಿಗುಂದ ಹಾಗೂ ಸಂಘದ ಪದಾಧಿಕಾರಿಗಳು,ನಿವಾಸಿಗಳು ಉಪಸ್ಥಿತರಿದ್ದರು.
—-
ದೇಶದಲ್ಲಿ ಸಾಕಷ್ಟು ಧರ್ಮ, ಸಂಸ್ಕೃತಿಗಳು ಇದ್ದರೂ ನಾವೆಲ್ಲ ಭಾರತಿಯರು. ಒಂದೇ ತಾಯಿಯ ಮಕ್ಕಳು ನಾವೆಲ್ಲರು, ಒಂದೇ ಭಾವ ಇರಲಿ, ಇಂದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಎಲ್ಲ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿದೆ. ವಿಕಸಿತ ಭಾರತ ಪರಿಕಲ್ಪನೆಯಲ್ಲಿ ಶಕ್ತಿಶಾಲಿ ದೇಶ ಕಟ್ಟಲು ಎಲ್ಲರೂ ಭಾಗವಹಿಸುವಿಕೆ ಅಗತ್ಯವಾಗಿದೆ. ದೇಶ 2047ಕ್ಕೆ ಸದೃಢ ವಿಕಸಿತ ಭಾರತವಾಗಿ ನಿರ್ಮಾಣಗೊಳ್ಳಲಿದೆ.
-ರುದ್ರಣ್ಣ ಚಂದರಗಿ


