ಧಾರವಾಡ: ಸರಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ರಾಜ್ಯ ಸರ್ಕಾರದಿಂದ ಇತ್ತೀಚೆಗೆ ಹೊರಡಿಸಲಾದ ಒಂದು ಆದೇಶದಲ್ಲಿ, ಆರ್ಎಸ್ಎಸ್ ಪಥಸಂಚಲನ ಸೇರಿದಂತೆ ಯಾವುದೇ ಖಾಸಗಿ ಸಂಸ್ಥೆಗಳು ಸರಕಾರಿ ಆವರಣದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಬಾರದು ಎಂಬ ನಿರ್ದೇಶನ ನೀಡಲಾಗಿತ್ತು. ಆದರೆ ಈ ಆದೇಶಕ್ಕೆ ಇದೀಗ ಹೈಕೋರ್ಟ್ನಿಂದ ಮಧ್ಯಂತರ ತಡೆ ನೀಡಲಾಗಿದೆ.
ಈ ಆದೇಶವನ್ನು ಪ್ರಶ್ನಿಸಿ ಪುನಶ್ಚೇತನ ಸೇವಾ ಸಂಸ್ಥೆ ಹೈಕೋರ್ಟ್ನ ಧಾರವಾಡ ಪೀಠವನ್ನು ಸಂಪರ್ಕಿಸಿತ್ತು. ಮಂಗಳವಾರ ನಡೆದ ವಿಚಾರಣೆಯಲ್ಲಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಅಧ್ಯಕ್ಷತೆಯ ಪೀಠ, ಸರ್ಕಾರದ ಆದೇಶವು ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆ ಆಗುತ್ತದೆ ಎಂದು ಅಭಿಪ್ರಾಯಪಟ್ಟಿತು.
ಸಂವಿಧಾನಾತ್ಮಕ ಹಕ್ಕಿನ ವ್ಯಾಪ್ತಿಯೊಳಗೆ ಬರುವ ಧಾರ್ಮಿಕ, ಸಾಂಸ್ಕೃತಿಕ ಅಥವಾ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಸ್ವಾತಂತ್ರ್ಯವನ್ನು ಸರಕಾರ ತಡೆಹಿಡಿಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದ್ದು, ಸರ್ಕಾರದ ಆದೇಶದ ಜಾರಿಗೊಳಿಸುವಿಕೆಗೆ ತಾತ್ಕಾಲಿಕ ತಡೆ ನೀಡಿದೆ.
ಇದರಿಂದಾಗಿ ಸರಕಾರದ ನಿರ್ಬಂಧಾತ್ಮಕ ಆದೇಶವು ತಾತ್ಕಾಲಿಕವಾಗಿ ಅಮಲಿನಲ್ಲಿ ಇರುವುದಿಲ್ಲ. ಮುಂದಿನ ವಿಚಾರಣೆಯಲ್ಲಿ ಸರ್ಕಾರದ ವಾದಗಳನ್ನು ಆಲಿಸಿದ ನಂತರ ಅಂತಿಮ ತೀರ್ಪು ನೀಡಲಾಗುವ ನಿರೀಕ್ಷೆ ಇದೆ.


