ಬೆಂಗಳೂರು: ಬಿಗ್ ಬಾಸ್ ಸೀಸನ್ -12 ಆರಂಭವಾದ ದಿನದಿಂದ ಕೋಟ್ಯಂತರ ವೀಕ್ಷಕರ ಮನಗೆದ್ದು, ಫಿನಾಲೆವರೆಗೂ ಗೆದ್ದೇ ಗೆಲ್ಲುತ್ತಾರೆ ಎನ್ನುವ ಅಪಾರವಾದ ಬೆಂಬಲವನ್ನು ಪಡೆದುಕೊಂಡು ಬಂದಿದ್ದ ಗಿಲ್ಲಿನಟ ವೀಕ್ಷಕರ ಕನಸಿನಂತೆ ʼಬಿಗ್ ಬಾಸ್ ಟ್ರೋಫಿʼ ಗೆದ್ದುಕೊಂಡಿದ್ದಾರೆ.
ಗಿಲ್ಲಿ ಅವರ ಗೆಲುವನ್ನು ಇಡೀ ಕರುನಾಡಿನ ಜನರೇ ಹಬ್ಬದಂತೆ ಸಂಭ್ರಮಿಸಿದೆ.. ಗಿಲ್ಲಿಯೇ ಗೆಲ್ಲುತ್ತಾರೆ ಎನ್ನುವ ಕೋಟ್ಯಂತರ ಜನರ ಮಾತು, ಕನಸು ಈಗ ನನಸಾಗಿದೆ. ಗಿಲ್ಲಿ ಅವರು 37 ಕೋಟಿಗೂ ಅಧಿಕ ದಾಖಲೆಯ ಪ್ರಮಾಣದ ಮತವನ್ನು ಪಡೆದು ʼಬಿಗ್ ಬಾಸ್ ಸೀಸನ್ -12ʼ ಟ್ರೋಫಿ ಗೆದ್ದುಕೊಂಡಿದ್ದಾರೆ.
ಕನ್ನಡದ ಅತಿದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದಾದ ಬಿಗ್ ಬಾಸ್ – 12ನೇ ಆವೃತ್ತಿಯಲ್ಲಿ ಕುತೂಹಲಕ್ಕೆ ತೆರೆ ಬಿದ್ದಿದೆ.
ಕನ್ನಡದ ಬಿಗ್ಬಾಸ್ ಸೀಸನ್ 12ರ ವಿಜೇತರು ಯಾರಾಗಲಿದ್ದಾರೆ ಎಂದು ವೀಕ್ಷಕರು ಕಾತರದಿಂದ ಕಾಯುತ್ತಿದ್ದರು. ಇದೀಗ ಈ ಬಾರಿಯ ಬಿಗ್ಬಾಸ್ 12ರ ವಿಜೇತರ ಹೆಸರನ್ನು ಕಿಚ್ಚ ಸುದೀಪ್ ಅವರು ವೇದಿಕೆ ಮೇಲೆ ಘೋಷಿಸಿದ್ದಾರೆ.
ಬರೋಬ್ಬರಿ 37 ಕೋಟಿಗೂ ಅಧಿಕ ವೋಟ್ಗಳನ್ನು ಪಡೆಯುವ ಮೂಲಕ ಗಿಲ್ಲಿ ನಟ ಅವರು ಈ ಬಾರಿಯ ಬಿಗ್ಬಾಸ್ ಸೀಸನ್ 12ರ ವಿಜೇತರಾಗಿ ಹೊರಹೊಮ್ಮಿದ್ದಾರೆ. ರಕ್ಷಿತಾ ಶೆಟ್ಟಿ ಅವರು ರನ್ನರ್ ಅಪ್ ಆಗಿದ್ದಾರೆ.
ಈ ಬಾರಿ ಟಾಪ್ 5 ಸ್ಥಾನದಲ್ಲಿ ಕಾವ್ಯ, ರಘು, ಅಶ್ವಿನಿ ಗೌಡ, ಗಿಲ್ಲಿ ನಟ ಹಾಗೂ ರಕ್ಷಿತಾ ಇದ್ದರು. ಈ ಟಾಪ್ 5 ಫೈನಲಿಸ್ಟ್ಗಳ ಪೈಕಿ ಗಿಲ್ಲಿ ನಟ ಬಿಗ್ಬಾಸ್ ಸೀಸನ್ 12ರ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ. ಅಂತಿಮವಾಗಿ ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿ ಇಬ್ಬರ ಮಧ್ಯೆ ಪೈಪೋಟಿ ಜೋರಾಗಿತ್ತು.
ಕೊನೆಗೂ ಗಿಲ್ಲಿ ನಟ ಬಿಗ್ಬಾಸ್ ಗೆದ್ದು ಬೀಗಿದ್ದಾರೆ. ಇನ್ನು, ಗಿಲ್ಲಿ ನಟ ಅವರು ಟ್ರೋಫಿಯೊಂದಿಗೆ ₹50 ಲಕ್ಷ ಹಾಗೂ ಮಾರುತಿ ಸುಜುಕಿ ಎಸ್ಯುವಿ ವಿಕ್ಟೋರಿಯಸ್ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ. ತಮ್ಮ ಕಾಮಿಡಿ ಮೂಲಕವೇ ವೀಕ್ಷಕರ ಮನಸ್ಸನ್ನು ಗೆದ್ದುಕೊಂಡಿದ್ದರು. ಇದೀಗ ಕೊನೆಯದಾಗಿ ಬಿಗ್ಬಾಸ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಬಿಗ್ ಬಾಸ್ – 12ನೇ ಆವೃತ್ತಿಯ ಕಿರೀಟವನ್ನು ನಟರಾಜ್ ಅಲಿಯಾಸ್ ಗಿಲ್ಲಿ ನಟ ಮುಡಿಗೇರಿಸಿಕೊಂಡಿದ್ದಾರೆ.
ಫಿನಾಲೆ ಶುರುವಾಗುವುದಕ್ಕೂ ಮೊದಲೇ ಸಾಮಾಜಿಕ ಮಾಧ್ಯಮಗಳಲ್ಲಿ ಗಿಲ್ಲಿ ಗೆಲುವಿನ ಅಲೆ ಎದ್ದಿತ್ತು. ಆದರೆ, ಅಧಿಕೃತವಾಗಿ ಘೋಷಣೆಯಾಗಲು ಈ ಹೊತ್ತಿನ ವರೆಗೆ ಕಾಯಲೇ ಬೇಕಿತ್ತು.
ಅಂತಿಮ ಸುತ್ತಿನಲ್ಲಿ ಗಿಲ್ಲಿಗೆ ರಕ್ಷಿತಾ ಪೈಪೋಟಿ ನೀಡಿದ್ದರು.
ನಟ, ನಿರೂಪಕ ಕಿಚ್ಚ ಸುದೀಪ್ ಅವರು ಅಂತಿಮವಾಗಿ ಗಿಲ್ಲಿಯವರ ಕೈಯನ್ನು ಮೇಲೆತ್ತುವುದರೊಂದಿಗೆ ಗೆಲುವನ್ನು ಘೋಷಿಸಿದ್ದಾರೆ. ಇದರೊಂದಿಗೆ, ರಾಜ್ಯದಾದ್ಯಂತ ಇರುವ ಗಿಲ್ಲಿಯ ಅಪಾರ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿದೆ.
ಗಿಲ್ಲಿ ವಿಜಯದ ಬೆನ್ನಲ್ಲೇ, ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಫಿನಾಲೆಗೂ ಮೊದಲೇ ಪ್ರಿಂಟ್ ಮಾಡಿಸಿಕೊಂಡಿದ್ದ ಬ್ಯಾನರ್ಗಳನ್ನು ಕಟ್ಟಿ ಅಭಿಮಾನ ಮೆರೆದಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಡದಪುರ ಗಿಲ್ಲಿ ನಟನ ಊರು. ವಿಜಯಿ ಯಾರೆಂಬುದು ಘೋಷಣೆಯಾಗುತ್ತಿದ್ದಂತೆ ದಡದಪುರದಲ್ಲಿ ವಿಜಯ ಪತಾಕೆ ಮೊಳಗಿದೆ. ಗ್ರಾಮದ ತುಂಬೆಲ್ಲ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಜೊತೆಯಲ್ಲಿ ಒಡನಾಡಿದವರು, ಕಷ್ಟಕ್ಕೆ ಹೆಗಲಾದವರು, ನೆರೆಹೊರೆಯವರೆಲ್ಲ ಪರಸ್ಪರ ಸಿಹಿ ತಿನ್ನಿಸಿ ಖುಷಿಯನ್ನು ಹಂಚಿಕೊಂಡಿದ್ದಾರೆ. ಗಿಲ್ಲಿ ಫೋಟೊಗಳಿಗೆ ಹಾಲೆರೆದು ಸಂಭ್ರಮಿಸಿದ್ದಾರೆ.
ಊರಿನ ಪ್ರಮುಖ ವೃತ್ತಗಳಲ್ಲೆಲ್ಲಾ ಗಿಲ್ಲಿಯ ದೊಡ್ಡ ದೊಡ್ಡ ಕಟೌಟ್ಗಳು ರಾರಾಜಿಸುತ್ತಿವೆ.
‘ದ್ವಂದ್ವಾರ್ಥವೇ ಹಾಸ್ಯವೆನ್ನುವಂತಾಗಿರುವ ಹೊತ್ತಿನಲ್ಲಿ, ನಿಜವಾದ ಹಾಸ್ಯವನ್ನು ತೋರಿದವನು ಗಿಲ್ಲಿ. ಆ ಕಾರಣಕ್ಕೆ ಸದ್ಯದ ಹಾಸ್ಯ ಕಲಾವಿದರ ನಡುವೆ ನಮ್ಮೂರಿನ ಯುವಕ ವಿಶೇಷವಾಗಿ ಕಾಣುತ್ತಾನೆ. ಚಿಕ್ಕ-ಪುಟ್ಟ ವಿಚಾರಗಳಲ್ಲೂ ಹಾಸ್ಯ ಹುಡುಕುವ, ಸಣ್ಣ ಎಳೆಯನ್ನು ಇಟ್ಟುಕೊಂಡು ನಗೆ ಚಟಾಕಿ ಹಾರಿಸಿ ಹೊಟ್ಟೆ ಹುಣ್ಣಾಗುವಂತೆ ಮಾಡುವ ಗಿಲ್ಲಿ ಗೆಲುವಿಗೆ ನಿಜವಾಗಿಯೂ ಅರ್ಹ’ ಎಂದು ಗ್ರಾಮದ ನಿವಾಸಿ ಹಾಗೂ ಸದ್ಯ ಪೊಲೀಸ್ ಇಲಾಖೆಯಲ್ಲಿರುವ ದೇವರಾಜು ಎನ್. ಹೇಳಿದ್ದಾರೆ.
ಎಲ್ಇಡಿ ಪರದೆಯಲ್ಲಿ ನೇರಪ್ರಸಾರ
ದಡದಪುರದ ಬಸ್ಸ್ಟ್ಯಾಂಡ್ ಬಳಿ ಇರುವ ಬಸವೇಶ್ವರ ದೇವಾಲಯದ ಆವರಣದಲ್ಲಿ ದೊಡ್ಡ ಎಲ್ಇಡಿ ಪರದೆ ಅಳವಡಿಸಿ, ಬಿಗ್ ಬಾಸ್ ಫಿನಾಲೆಯ ನೇರಪ್ರಸಾರ ಮಾಡಿಸಲಾಗಿದೆ. ಮಧ್ಯರಾತ್ರಿಯವರೆಗೆ ನೂರಾರು ಮಂದಿ ಕುಳಿತು ಕಾರ್ಯಕ್ರಮವನ್ನು ವೀಕ್ಷಿಸಿರುವುದು, ಇಡೀ ಊರಿನವರು ಗಿಲ್ಲಿ ಮೇಲೆ ಇಟ್ಟಿರುವ ಅಭಿಮಾನ ಹಾಗೂ ತೋರಿಸುತ್ತಿರುವ ಪ್ರೀತಿಗೆ ಸಾಕ್ಷಿ.
ಮಳವಳ್ಳಿಯಿಂದ ಮೆರವಣಿಗೆ
ತಾಲೂಕು ಕೇಂದ್ರ ಮಳವಳ್ಳಿಯಲ್ಲಿರುವ ದಂಡಿನ ಮಾರಮ್ಮನ ದೇವಾಲಯದಿಂದ ದಡದಪುರದ ವರೆಗೆ ಅಂದರೆ (ಸುಮಾರು 10 ಕಿ.ಮೀ.) ಬಿಗ್ ಬಾಸ್ ಟ್ರೋಫಿಯೊಂದಿಗೆ ಗಿಲ್ಲಿ ಅವರ ಮೆರವಣಿಗೆ ನಡೆಸಲು ಇಂದು (ಸೋಮವಾರ) ಸಿದ್ಧತೆ ಮಾಡಿಕೊಂಡಿರುವುದಾಗಿ ಗ್ರಾಮದ ಯುವಕ ಕಾಳೇಗೌಡ ತಿಳಿಸಿದ್ದಾರೆ.
‘ಸಣ್ಣ ಹಳ್ಳಿಯಿಂದ ಹೋಗಿ, ರಾಜ್ಯದಾದ್ಯಂತ ಊರಿನ ಕೀರ್ತಿ ಪತಾಕೆ ಹಾರಿಸಿರುವ ಗಿಲ್ಲಿಗೆ ಇಷ್ಟಾದರೂ ಮಾಡದಿದ್ದರೆ ಹೇಗೆ?’ ಎಂಬುದು ಅವರ ಸ್ಪಷ್ಟೋಕ್ತಿ.
ದೇವರಾಜು ಎನ್., ಡಾ. ಶಂಕರ್ ಸಿ
ಹಳ್ಳಿಯ ಬಡ ಕುಟುಂಬದಿಂದ ಬಂದು ತನ್ನ ಹಾಸ್ಯದ ಮೂಲಕ ಇಡೀ ಕರ್ನಾಟಕದ ಮನೆ ಮಗನಾಗಿ, ಪ್ರತಿಯೊಬ್ಬರ ಹೃದಯ ಗೆದ್ದು ನಮ್ಮೂರಿಗೆ ಕೀರ್ತಿ ತಂದ ಅತ್ಯುತ್ತಮ ಕಲಾವಿದನಾಗಿದ್ದಾನೆ. ಬಿಗ್ ಬಾಸ್ ಸೀಸನ್ – 12ರಲ್ಲಿ ಕೋಟಿ ಕೋಟಿ ಮತಗಳಿಂದ ವಿಜಯಶಾಲಿಯಾದ ನಮ್ಮಗಿಲ್ಲಿ ನಟರಾಜನಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
– ಡಾ. ಶಂಕರ್ ಸಿ., ದಡದಪುರ (ಪ್ರಾಧ್ಯಾಪಕರು ಸರ್ಕಾರಿ ಪಾಲಿಟೆಕ್ನಿಕ್, ಮಳವಳ್ಳಿ)
ಒಟ್ಟಾರೆ ಈಗ ಎಲ್ಲಾ ಕುತೂಹಲಗಳಿಗೆ ತೆರೆ ಬಿದ್ದಂತಾಗಿದೆ.


