ಬೆಳಗಾವಿ: ಬೆಳಗಾವಿ ನಗರದಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಪಥಸಂಚಲನದಲ್ಲಿ ಭಾಗವಹಿಸಿದ್ದಕ್ಕಾಗಿ ವಿದ್ಯಾರ್ಥಿಗೆ ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರು ಶಿಕ್ಷೆ ನೀಡಿರುವ ಘಟನೆ ಈಗ ವಿವಾದಕ್ಕೆ ಕಾರಣವಾಗಿದೆ.
ಬೆಳಗಾವಿ ಕ್ಯಾಂಪ್ ಪ್ರದೇಶದ ಖಾಸಗಿ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿ ಪಥಸಂಚಲನದಲ್ಲಿ ಭಾಗವಹಿಸಿದ್ದಾನೆಂಬ ಕಾರಣಕ್ಕೆ ಕಾವೇರಿ ಎಂಬ ಶಿಕ್ಷಕಿ ಸೋಮವಾರ ಶಾಲೆಯಲ್ಲಿ ತರಗತಿಯೊಳಗೆ ಮತ್ತು ಹೊರಗೆ ನಿಲ್ಲಿಸುವ ಶಿಕ್ಷೆ ನೀಡಿದ್ದಾರೆ ಎಂದು ವಿದ್ಯಾರ್ಥಿ ಪಾಲಕರಿಗೆ ತಿಳಿಸಿದ್ದಾನೆ.
ಆ ವಿದ್ಯಾರ್ಥಿಯ ಗಣವೇಷದ ಫೋಟೋ ಮತ್ತು ಫೇಸ್ಬುಕ್ ವಿಡಿಯೋವನ್ನು ತರಗತಿಯಲ್ಲಿ ತೋರಿಸಿ ಸಾರ್ವಜನಿಕವಾಗಿ ನಿಂದಿಸಿದ್ದಾರೆ ಎಂದು ಪೋಷಕರು ದೂರಿದ್ದಾರೆ. ಭಾನುವಾರ ರಜೆ ದಿನವಾಗಿರುವುದರಿಂದ ಪಥಸಂಚಲನದಲ್ಲಿ ಭಾಗವಹಿಸುವುದು ವೈಯಕ್ತಿಕ ವಿಚಾರ. ಆದರೆ, ಶಿಕ್ಷಕಿಯು ಅದನ್ನು ರಾಜಕೀಯ ದೃಷ್ಟಿಯಿಂದ ತೆಗೆದುಕೊಂಡು, ವಿದ್ಯಾರ್ಥಿಯ ಮನೋಭಾವನೆಗೆ ಧಕ್ಕೆಯುಂಟುಮಾಡಿದ್ದಾರೆ.
ಸಾರ್ವಜನಿಕವಾಗಿ ಕ್ಷಮೆಯಾಚನೆಗೆ ಒತ್ತಾಯ
ಈ ಬಗ್ಗೆ ಶಾಲೆಯ ಆಡಳಿತ ಸ್ಪಷ್ಟನೆ ನೀಡಬೇಕು ಹಾಗೂ ಶಿಕ್ಷಕಿಯಾಗಿ ಸಾರ್ವಜನಿಕವಾಗಿ ಕ್ಷಮೆಯಾಚನೆ ಮಾಡಬೇಕು ಇಲ್ಲವಾದರೆ, ಶಾಲೆಯ ವಿರುದ್ಧ ಪ್ರತಿಭಟಿಸಬೇಕಾಗುತ್ತದೆ ಎಂದು ಬಿಜೆಪಿ ಎಚ್ಚರಿಕೆ ನೀಡಿದೆ.