ಬೆಳಗಾವಿ: ನಾನಾಗಲಿ, ನನ್ನ ಸಹೋದರ ಚನ್ನರಾಜ ಹಟ್ಟಿಹೊಳಿ ಆಗಲಿ ಅಭಿವೃದ್ಧಿ ವಿಚಾರದಲ್ಲಿ ಎಂದೂ ದ್ವೇಷ ರಾಜಕಾರಣ ಮಾಡಿಲ್ಲ, ಮಾಡುವುದೂ ಇಲ್ಲ. ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವುದೇ ನನ್ನ ಕನಸು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬಾಳೇಕುಂದ್ರಿ ಬಿ.ಕೆ ಗ್ರಾಮದ ಶ್ರೀ ರಾಮೇಶ್ವರ ದೇವಸ್ಥಾನದ ನೂತನ ಕಟ್ಟಡ ಕಾಮಗಾರಿಗೆ ಇಂದು ಗ್ರಾಮಸ್ಥರ ಸಮ್ಮುಖದಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಸಚಿವರು, ಅಧಿಕಾರವಿದ್ದಾಗ ಜನ ಸಾಮಾನ್ಯರ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕು, ನನಗೆ ತೊಂದರೆ ಕೊಟ್ಟ ಜನರಿಗೆ ತೊಂದರೆ ಕೊಡುವಂಥ ವಿಕೃತ ಮನಸ್ಸು ನನ್ನದಲ್ಲ ಎಂದರು.
ನನಗೆ ಒಂದು ಅವಕಾಶ ಕೊಡಿ, ನಿಮ್ಮ ಮನೆ ಮಗಳಾಗಿ ಈ ಊರಿನ ಸೇವೆ ಮಾಡುತ್ತೇನೆ ಎಂದು ಚುನಾವಣೆ ವೇಳೆ ವಚನ ಕೊಟ್ಟಿದ್ದೆ. ಇವತ್ತು ನಾನು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದೇನೆ. ಈ ಊರಿನ ಸಮಗ್ರ ಅಭಿವೃದ್ಧಿ ಹಾಗೂ ಸುಧಾರಣೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಚುನಾವಣೆ ವೇಳೆ ಮಾತ್ರ ರಾಜಕಾರಣ, ಚುನಾವಣೆ ಬಳಿಕ ಅಭಿವೃದ್ಧಿಯೇ ಮೂಲ ಮಂತ್ರ, ಅಧಿಕಾರ ಎಂದಿಗೂ ಶಾಶ್ವತ ಅಲ್ಲ. ಜನರಿಗಾಗಿ ನಾವು ಮಾಡುವ ಕೆಲಸ ಕಾರ್ಯಗಳೇ ಎಂದಿಗೂ ಶಾಶ್ವತ ಎಂದು ಸಚಿವರು ಹೇಳಿದರು.
ಜನರು ಆಶೀರ್ವಾದ ಮಾಡಿದ ಫಲವಾಗಿ ಇಂದು ಸಚಿವೆಯಾಗಿರುವೆ. ಕ್ಷೇತ್ರದ ವ್ಯಾಪ್ತಿಗೆ ಬರುವ 114 ಹಳ್ಳಿಗಳಲ್ಲಿ 140 ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿದ್ದೇನೆ. ಮಾತಿಗಿಂತ ನನಗೆ ಕೆಲಸಗಳು ಮುಖ್ಯ. ಗುಡಿ ಕಟ್ಟಿದರಷ್ಟೇ ಅಭಿವೃದ್ಧಿಯಲ್ಲ. ನಾಳೆ ನಮ್ಮ ಮಕ್ಕಳಿಗೆ ಆ ಸಂಸ್ಕೃತಿ ತಿಳಿಯಬೇಕೆಂದರೆ ಗುಡಿಗಳನ್ನು ಅಭಿವೃದ್ಧಿ ಪಡಿಸಬೇಕು ಎಂದು ಹೇಳಿದರು.
ನಮ್ಮ ಮನೆತನ ದಾನ ಧರ್ಮ, ದೇಶದ ಸಂಸ್ಕೃತಿಯಲ್ಲಿ ವಿಶ್ವಾಸ ಇಟ್ಟುಕೊಂಡಿರುವ ಮನೆತನ. ನಮ್ಮ ತಂದೆ, ತಾಯಿ, ನಮ್ಮ ತಾತ ಅದೇ ಸಂಸ್ಕೃತಿಯನ್ನು ನಮಗೆ ಕಲಿಸಿಕೊಟ್ಟಿದ್ದಾರೆ. ಅದೇ ಹಾದಿಯಲ್ಲಿ ನಾವು ಸಾಗುತ್ತಿದ್ದೇವೆ ಎಂದರು.
ಸುಮಾರು 1.25 ಕೋಟಿ ರೂಪಾಯಿ ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣಗೊಳ್ಳಲಿದ್ದು, ಸ್ಥಳೀಯರ ಸಲಹೆ ಸೂಚನೆ ಪಡೆದು, ಸಾರ್ವಜನಿಕರಿಗೆ ಯಾವುದೇ ತೊಂದರೆಗಳಾಗದಂತೆ ನಿಗಾವಹಿಸಿ, ದೇವಸ್ಥಾನ ನಿರ್ಮಾಣ ಮಾಡಲು ಗುತ್ತಿಗೆದಾರರಿಗೆ ಸಚಿವರು ಸೂಚಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಶಂಕರಗೌಡ ಪಾಟೀಲ, ಹೊನಗೌಡ ಪಾಟೀಲ, ಸುರೇಶ ಕಾಳೋಜಿ, ಉಮೇಶರಾವ್ ಜಾಧವ್, ವಿನಯಗೌಡ ಪಾಟೀಲ, ನಾಗೇಶ ದೇಸಾಯಿ, ಪ್ರವೀಣ ಪಾಟೀಲ, ರಾಮನಗೌಡ ಪಾಟೀಲ, ಚರಂತಯ್ಯ ಹಿರೇಮಠ, ರುದ್ರಗೌಡ ಪಾಟೀಲ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗುಲಾಬಿ ಕೋಲಕಾರ ಹಾಗೂ ಸರ್ವ ಸದಸ್ಯರು, ಗ್ರಾಮದ ಅನೇಕರು ಉಪಸ್ಥಿತರಿದ್ದರು.
ಬಾಬಾ ಸಾಹೇಬ್ ಅಂಬೇಡ್ಕರ್ ಜೀವನಚರಿತ್ರೆ ಎಲ್ಲರಿಗೂ ಸ್ಫೂರ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ -ಬಿಜಗರಣಿ ಗ್ರಾಮದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೂತನ ಮೂರ್ತಿ ಅನಾವರಣ
ಬಿಜಗರಣಿ : ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಮಾತನಾಡಲು ನಿಂತರೆ ಒಂದು ದಿನ ಸಾಲುವುದಿಲ್ಲ. ಪ್ರತಿಯೊಬ್ಬರು ಅವರ ಜೀವನ ಚರಿತ್ರೆಯನ್ನು ಓದಬೇಕು. ಅವರ ಸಾಧನೆಯನ್ನು ತಿಳಿದುಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬಿಜಗರಣಿ ಗ್ರಾಮದಲ್ಲಿ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೂತನ ಮೂರ್ತಿಯನ್ನು ಅನಾವರಣಗೊಳಿಸಿ ಮಾತನಾಡಿದ ಸಚಿವರು, ಇಂದಿನ ಯುವಕರು ಅಂಬೇಡ್ಕರ್ ಅವರ ಆದರ್ಶವನ್ನು ಇಟ್ಟುಕೊಂಡು ಓದಬೇಕು, ಬೆಳೆಯಬೇಕು, ಜೀವಿಸಬೇಕು.
ಇದೇ ಅವರಿಗೆ ನಿಜವಾಗಿ ನಾವು ನೀಡಬಹುದಾದ ಕೊಡುಗೆ ಎಂದರು.
ಲಕ್ಷ್ಮೀ ತಾಯಿ ಪೌಂಡೇಷನ್ ವತಿಯಿಂದ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ದೇಶಕ್ಕಾಗಿ ಸೇವೆ ಸಲ್ಲಿಸಿರುವ ಮಹನೀಯರ ಬಗ್ಗೆ ಇಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಕ್ಷೇತ್ರದಲ್ಲಿ ಅನೇಕ ಮಹನೀಯರ ಮೂರ್ತಿಗಳನ್ನು ಪ್ರತಿಷ್ಟಾಪನೆ ಮಾಡಲಾಗುತ್ತಿದೆ ಎಂದು ಹೇಳಿದರು.
ಅಂಬೇಡ್ಕರ್ ಅವರ ಬದುಕು, ತತ್ವ, ಆದರ್ಶಗಳು ನಮ್ಮೆಲ್ಲರ ಪಾಲಿಗೆ ಮಾರ್ಗದರ್ಶನ ವಾಗಿವೆ. ಸಮಾನತೆ ಮತ್ತು ಪ್ರಗತಿಯ ಕನಸು ಕಂಡ ಮೇರು ನಾಯಕ ಅವರು. ಅವರ ಆದರ್ಶ ಎಲ್ಲರ ಜೀವನಕ್ಕೆ ದಾರಿದೀಪ. ಬಾಬಾ ಸಾಹೇಬರ ಚಿಂತೆನೆಗಳು ಇಂದಿಗೂ, ಎಂದಿಗೂ ಯುವಜನತೆಗೆ ಸ್ಫೂರ್ತಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಈ ಸಂದರ್ಭದಲ್ಲಿ ಯುವರಾಜ್ ಕದಂ, ಮಾವಳ್ಳಿ ಶಂಕರ್, ಸಿದ್ದಪ್ಪ ಕಾಂಬಳೆ, ಮನೋಹರ್ ಬೆಳಗಾಂವ್ಕರ್, ಸಂತೋಷ ಕಾಂಬಳೆ, ಸುತಾರಿ ಜಾಧವ್, ಮಹೇಶ ಕೋಲಕಾರ್, ನಿಂಗಪ್ಪ ಜಾಧವ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೇಖಾ ನಾಯ್ಕ್, ನಾಮದೇವ್ ಮೊರೆ, ಯಲ್ಲಪ್ಪ ಬೆಳಗಾಂವ್ಕರ್, ಬಾಳು ದೇಸೂರಕರ್, ತೆರಸೆ ಕುಟುಂಬದವರು ಸೇರಿದಂತೆ ಗ್ರಾಮದ ಮಹಿಳೆಯರು ಉಪಸ್ಥಿತರಿದ್ದರು.