ಬೆಳಗಾವಿ: ಹೆಲ್ಮೆಟ್ ಹಾಕದೇ ಇದ್ದಿದ್ದನ್ನು ಪ್ರಶ್ನಿಸುವ ನೆಪದಲ್ಲಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾಗಿ ಬೈಕ್ ಸವಾರ ಹೃಷಿಕೇಶ ಲಿಂಬಿಗಿಡದ ಅವರು ಪೊಲೀಸರ ಮೇಲೆ ಆರೋಪ ಮಾಡಿದ್ದಾರೆ. ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಅಂಕಲಿ ಠಾಣೆ ಪೊಲೀಸರ ಮೇಲೆ ಶುಕ್ರವಾರ ಆರೋಪಿಸಿದ್ದರು.
ಬೈಕ್ನಲ್ಲಿ ತಮ್ಮೊಂದಿಗೆ ಇದ್ದ ತಮ್ಮ ತಾಯಿ ಸುಶೀಲಾ ಲಿಂಬಿಗಿಡದ ಅವರ ಮೇಲೆ ಸಹಾ ಪೊಲೀಸರು ಹಲ್ಲೆ ಮಾಡಿದ್ದಾಗಿ ಆರೋಪಿಸಿದ್ದರು.
ಈ ಕುರಿತು ಸ್ಪಷ್ಟನೆ ನೀಡಿರುವ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ, ಬೈಕ್ ಸವಾರ ಹೃಷಿಕೇಶ ಅವರನ್ನು ತಡೆದ ಅಂಕಲಿ ಪೊಲೀಸರು
ಹೆಲ್ಮೆಟ್ ಇಲ್ಲದನ್ನು ಪ್ರಶ್ನಿಸಿದ್ದು, ರೂ. 500 ದಂಡ ಪಾವತಿಸಲು ಹೇಳಿದ್ದಾರೆ. ತಾನು ಕೇವಲ ರೂ. 200 ದಂಡ ಪಾವತಿಸುವುದಾಗಿ ಬೈಕ್ ಸವಾರ ಹೇಳಿದರು. ಆದ್ದರಿಂದ ಪೊಲೀಸರು ನ್ಯಾಯಾಲಯದ ದಂಡ ಬರೆದಿದ್ದಾರೆ ಎಂದು ತಿಳಿಸಿದರು.
ಅವರು ಕೆಟ್ಟದ್ದಾಗಿ ವರ್ತಿಸಲು ಪ್ರಾರಂಭಿಸಿದಾಗ ಬಿಎನ್ಎಸ್ಎಸ್ನ ಭದ್ರತಾ ವಿಭಾಗದ ಅಡಿಯಲ್ಲಿ ಚಿಕ್ಕೋಡಿ ತಹಶೀಲ್ದಾರ್ ಅವರ ಮುಂದೆ ಹಾಜರುಪಡಿಸಲಾಗಿದೆ. ಪೊಲೀಸರು ಅವರ ಮೇಲೆ ಹಲ್ಲೆ ನಡೆಸಿಲ್ಲ ಮತ್ತು ಅವರ ವಿರುದ್ಧ ಬೇರೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.
ನಡೆದಿದ್ದೇನು ?
ಹೃಷಿಕೇಶ್ ಲಿಂಬಿಗಿಡದ ಹಾಗೂ ಸುಶೀಲಾ ಎಂಬುವವರು ಬೈಕ್ನಲ್ಲಿ ಮಹಾರಾಷ್ಟ್ರ ಸಾಂಗ್ಲಿಯಿಂದ ಚಿಕ್ಕೋಡಿಗೆ ಬರುತ್ತಿದ್ದರು. ಈ ವೇಳೆ ಹೆಲ್ಮೆಟ್ ಹಾಕಿಲ್ಲ ಎಂಬ ಕಾರಣಕ್ಕೆ ಪೊಲೀಸರು ದರ್ಪ ತೋರಿದ್ದಾರೆ.
ಅಂಕಲಿ ಪೋಲಿಸರು ರಸ್ತೆ ಮಧ್ಯದಲ್ಲೇ ಯುವಕನಿಗೆ ಮನಬಂದಂತೆ ಥಳಿಸಿದ್ದು, ಮೈಮೇಲಿದ್ದ ಬಟ್ಟೆ ಹರಿದು ಲಾಠಿಯಿಂದ ಬಡಿದಿದ್ದಾರೆ. ಈ ವೇಳೆ ಮಗನ ಬಿಡಿಸಲು ಮುಂದಾದ ತಾಯಿಯ ಮೇಲೂ ಹಲ್ಲೆ ನಡೆಸಿದ್ದಾರೆ. ಮಹಿಳೆ ಎಂದು ಬಿಡದೆ ಪೊಲೀಸರು ರಸ್ತೆ ಮಧ್ಯದಲ್ಲೇ ಎಳೆದಾಡಿ ಬೂಟು ಕಾಲಿನಿಂದ ಒದ್ದಿದ್ದಾರೆ. ನಂತರ ಭಯದಿಂದ ಬಿಪಿ ಹೈ ಆಗಿ ಕೆಳಗೆ ಬಿದ್ದ ಯುವಕನನ್ನು ಪೊಲೀಸರೇ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಪೊಲೀಸರು ಹೊಸ ಟಿ-ಶರ್ಟ್ ಕೊಡಿಸಿ ಆಸ್ಪತ್ರೆಗೆ ದಾಖಲಿಸಿದ್ದು, ಈ ವಿಷಯ ತಿಳಿದು ಯುವಕನ ತಂದೆಯೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೀಗ ಅಂಕಲಿ ಪೊಲೀಸರ ವಿರುದ್ಧ ಸಾರ್ವಜನಿಕರ ಆಕ್ರೋಶ ಭುಗಿಲೆದ್ದಿತು.