ಬೆಳಗಾವಿ: ಪ್ರತಿ ವರ್ಷದಂತೆ ಈ ವರ್ಷವೂ ಬೆಳಗಾವಿಯಲ್ಲಿ ಅಧಿವೇಶನದ ಸಂದರ್ಭದಲ್ಲಿ ರೈತರ ಪ್ರತಿಭಟನೆ ಮತ್ತೆ ರಾಜ್ಯದ ಗಮನ ಸೆಳೆದಿದೆ. ಅದರಲ್ಲೂ ಸೋಮವಾರದಿಂದ ಆರಂಭವಾಗಿರುವ ವಿಧಾನ ಮಂಡಲದ ಅಧಿವೇಶನದ ಮೊದಲ ದಿನವೇ ರೈತರು ಪ್ರತಿಭಟನೆ ಮೂಲಕ ಗಮನ ಸೆಳೆದಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಸೋಮವಾರ ಇಲ್ಲಿನ ಸುವರ್ಣ ವಿಧಾನಸೌಧ ಮಾರ್ಗದ ಹಲಗಾ ಬಳಿ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಕನಿಷ್ಠ ಬೆಂಬಲ ಬೆಲೆ, ಕಬ್ಬಿಗೆ ಸೂಕ್ತ ದರ ನಿಗದಿ, ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವುದು, ಕಳಸಾ- ಬಂಡೂರಿ ಯೋಜನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘದ ಮುಖಂಡರು ರಸ್ತೆ ತಡೆ ಆರಂಭಿಸಿದ್ದಾರೆ. ಈ ವೇಳೆ ಎರಡು ಸರ್ಕಾರಿ ಬಸ್ಸುಗಳು ಪ್ರತಿಭಟನಾಕಾರರನ್ನು ದಾಟಿ ಮುಂದೆ ಬಂದವು. ಓಡಿ ಬಂದು ಅದನ್ನು ಅಡ್ಡಗಟ್ಟಿದ ರೈತರು, ಹಸಿರು ಟವಲುಗಳಿಂದ ಬಸ್ ಚಾಲಕರ ಕೈಗಳನ್ನು ಸ್ಟೇರಿಂಗ್ಗೆ ಕಟ್ಟಿ ಹಾಕಿದರು ಎಂದು ವರದಿಯಾಗಿದೆ.
ಅಧಿವೇಶನದ ಮೊದಲ ದಿನವೇ ರೈತರು ತೀವ್ರ ಸ್ವರೂಪದ ಹೋರಾಟಕ್ಕೆ ಇಳಿದರು. ಅವರನ್ನು ಚೆದುರಿಸಲು ಪೊಲೀಸರು ಮುಂದಾದರು. ಆಗ ತೀವ್ರ ವಾಗ್ವಾದ ನಡೆಯಿತು. ಹಲವು ವಾಹನಗಳು ಸಾಲಾಗಿ ನಿಂತವು. ಇದರ ಮಧ್ಯೆ ಎರಡು ಬಸ್ಸುಗಳನ್ನು ಚಾಲಕರು ಪಕ್ಕದಲ್ಲಿ ದಾಟಿಸಿಕೊಡು ಮುಂದೆ ಸಾಗಿದರು. ಆಗ ಬಸ್ಸನ್ನು ಬೆನ್ನಟ್ಟಿ ಬಂದ ರೈತರು ಅದನ್ನು ಅಡ್ಡಗಟ್ಟಿದರು. ಬಸ್ ಒಳಗೆ ಹತ್ತಿ ಬಸ್ ಚಾಲಕರ ಕೈಗಳನ್ನು ಹಸಿರು ಟವಲ್ ನಿಂದ ಕಟ್ಟಿದರು. ಅದೇ ಕೈಗಳನ್ನು ಬಸ್ಸಿನ ಸ್ಟೇರಿಂಗ್ಗೂ ಕಟ್ಟಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮಂಗಳವಾರದಿಂದ ರೈತರು ಮತ್ತು ಇತರ ಸಂಘಟನೆಗಳ ಪ್ರತಿಭಟನೆ ಯಾವ ರೀತಿಯಲ್ಲಿ ನಡೆಯಲಿದೆ ಎನ್ನುವುದು ಕಾದು ನೋಡಬೇಕಾಗಿದೆ.