ತಿರುವನಂತಪುರ: ಕೇರಳಂ ಮುಖ್ಯಮಂತ್ರಿ ಹುದ್ದೆ ಸ್ಪರ್ಧೆ ತೀವ್ರಗೊಂಡಿದೆ. ಸ್ಪರ್ಧಾ ಕಣದಲ್ಲಿರುವ ವಿ.ಡಿ. ಸತೀಶನ್, ಕೆ.ಸಿ. ವೇಣುಗೋಪಾಲ್ ಮತ್ತು ರಮೇಶ್ ಚೆನ್ನಿತ್ತಲ ಪರವಾಗಿ ಬೆಂಬಲಿಗರು ತೀವ್ರ ಲಾಬಿ ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕವೂ ಅಭ್ಯರ್ಥಿ ಪರವಾಗಿ ಅಭಿಯಾನ ಬಿರುಸುಗೊಂಡಿದೆ.
ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಹೆಸರನ್ನು ಇನ್ನೂ ಅಂತಿಮಗೊಳಿಸಿಲ್ಲ. ಪಕ್ಷದ ಹಿರಿಯ ಮುಖಂಡರಾದ ಮುಕುಲ್ ವಾಸ್ನಿಕ್ ಮತ್ತು ಅಜಯ್ ಮಾಕನ್ ಅವರನ್ನು ವೀಕ್ಷಕರನ್ನಾಗಿ ಹೈಕಮಾಂಡ್ ನೇಮಿಸಿದ್ದು, ಅವರು ಬುಧವಾರ ಸಂಜೆಯೇ ಕೇರಳಂಗೆ ಬಂದಿದ್ದಾರೆ.
‘ಎಐಸಿಸಿ ವೀಕ್ಷಕರು ಚುನಾಯಿತ ಸದಸ್ಯರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಬೇಕು, ಇದರಿಂದ ಅವರಿಗೆ ಮುಕ್ತವಾಗಿ ತಮ್ಮ ಆಯ್ಕೆಯನ್ನು ತಿಳಿಸಲು ಸಾಧ್ಯವಾಗುತ್ತದೆ’ ಎಂದು ಸತೀಶನ್ ಬೆಂಬಲಿಗರು ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಆಯ್ಕೆ ವಿಷಯದಲ್ಲಿ ವೇಣುಗೋಪಾಲ್ ರಾಜಕೀಯವಾಗಿ ಹೆಚ್ಚು ಪ್ರಭಾವಿಯಾಗಿದ್ದಾರೆ. ಆದರೆ, ಜನಪ್ರಿಯತೆ ವಿಷಯದಲ್ಲಿ ಸತೀಶನ್ ಒಂದು ಹೆಜ್ಜೆ ಮುಂದಿದ್ದಾರೆ. ಯುಡಿಎಫ್ ಗೆಲುವಿನ ಮೂಲಕ ಸತೀಶನ್ ಕೇರಳದ ‘ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ್ದಾರೆ. ಯುಡಿಎಫ್ ಮೈತ್ರಿಕೂಟದಲ್ಲಿರುವ ಮುಸ್ಲಿಂ ಲೀಗ್ನ ಬೆಂಬಲವೂ ಸತೀಶನ್ ಅವರಿಗೆ ಇದೆ’ ಎನ್ನುವುದು ಕಾಂಗ್ರೆಸ್ ಮುಖಂಡರ ಅಭಿಪ್ರಾಯ.
ನೆಹರು–ಗಾಂಧಿ ಕುಟುಂಬಕ್ಕೆ ನಿಷ್ಠರಾಗಿರುವ ಚೆನ್ನಿತ್ತಲ ಅವರು ಬುಧವಾರ ನವದೆಹಲಿಯಲ್ಲಿ ರಾಹುಲ್ ಗಾಂಧಿ ಸೇರಿ ಪಕ್ಷದ ಮುಖಂಡರನ್ನು ಭೇಟಿಯಾದರು. ಆದರೆ, ಈ ಭೇಟಿ ಕೇರಳಂ ಮುಖ್ಯಮಂತ್ರಿ ಆಯ್ಕೆಗೆ ಸಂಬಂಧಿಸಿದ್ದಲ್ಲ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಕಾಂಗ್ರೆಸ್ ಹಿರಿಯ ಮುಖಂಡ ಎ.ಕೆ. ಆ್ಯಂಟನಿ ಅವರ ಅಭಿಪ್ರಾಯವನ್ನೂ ವೀಕ್ಷಕರು ಪಡೆಯಲಿದ್ದಾರೆ.
ಮುಖ್ಯಮಂತ್ರಿ ಆಯ್ಕೆ ವಿಷಯದಲ್ಲಿ ಜನಪ್ರಿಯತೆ ಮತ್ತು ಜನ ಬೆಂಬಲ ಮಾತ್ರ ಮುಖ್ಯವಲ್ಲ, ಪಕ್ಷದ ಶಾಸಕರ ಬೆಂಬಲವೂ ನಿರ್ಣಾಯಕ’ ಎಂದು ವೇಣುಗೋಪಾಲ್ ಪರವಾಗಿ ಬೆಂಬಲಿಗರು ಧ್ವನಿ ಎತ್ತಿದ್ದಾರೆ. ರಾಹುಲ್ ಗಾಂಧಿ ಅವರ ಕಟ್ಟಾ ನಿಷ್ಠಾವಂತರಲ್ಲಿ ವೇಣುಗೋಪಾಲ್ ಒಬ್ಬರಾಗಿರುವುದರಿಂದ, ರಾಹುಲ್ ಅವರ ನಿರ್ಧಾರವೂ ಕೇರಳಂ ಮುಖ್ಯಮಂತ್ರಿ ಆಯ್ಕೆಯಲ್ಲಿ ಮಹತ್ತರ ಪಾತ್ರ ವಹಿಸಲಿದೆ ಎನ್ನಲಾಗುತ್ತಿದೆ.
ರಮೇಶ್ ಚೆನ್ನಿತ್ತಲ,
ಕೆ.ಸಿ. ವೇಣುಗೋಪಾಲ್
‘ಧರ್ಮ ಜಾತಿ ನಿರ್ಣಾಯಕ’
ಕೇರಳಂನ ಹೊಸ ಕಾಂಗ್ರೆಸ್ ಸರ್ಕಾರದ ರಚನೆಯಲ್ಲಿ ಧರ್ಮ ಮತ್ತು ಜಾತಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಮೂಲಗಳು ಹೇಳಿವೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಸ್ಪರ್ಧೆಯಲ್ಲಿರುವ ಚೆನ್ನಿತ್ತಲ ವೇಣುಗೋಪಾಲ್ ಮತ್ತು ಸತೀಶನ್ ಮೂವರೂ ನಾಯರ್ ಸಮುದಾಯಕ್ಕೆ ಸೇರಿದವರು. ಕುತೂಹಲಕಾರಿ ಸಂಗತಿ ಎಂದರೆ ಇವರು ಮೂವರೂ ಕಾಂಗ್ರೆಸ್ ಮುಖಂಡ ಮಾಜಿ ಮಖ್ಯಮಂತ್ರಿ ದಿವಂಗತ ಕರುಣಾಕರನ್ ಅವರ ಶಿಷ್ಯರು. ಚೆನ್ನಿತ್ತಲ ಮತ್ತು ಸತೀಶನ್ ಅವರು ಹರಿಪಾಡ್ ಮತ್ತು ಪರವೂರ್ ಕ್ಷೇತ್ರಗಳಿಂದ ಭಾರಿ ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ವೇಣುಗೋಪಾಲ್ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಮುಖ್ಯಮಂತ್ರಿ ಹೆಸರು ಅಂತಿಮಗೊಳಿಸಲು ಎಐಸಿಸಿ ವೀಕ್ಷಕರು ಗುರುವಾರ ಕಾಂಗ್ರೆಸ್ ಶಾಸಕರೊಂದಿಗೆ ಮಾತುಕತೆ ನಡೆಸಲಿದ್ದು ಬಲ ಪ್ರದರ್ಶನಕ್ಕೆ ಮುಖಂಡರು ಸಜ್ಜಾಗಿದ್ದಾರೆ. ವಿ.ಡಿ ಸತೀಶನ್ ಮತ್ತು ತಂಡವು ಹೆಚ್ಚಿನ ಶಾಸಕರ ಬೆಂಬಲ ತಮಗೆ ಲಭಿಸಬಹುದು ಎಂಬ ವಿಶ್ವಾಸದಲ್ಲಿದೆ. ‘ತಮಗೆ 50ರಿಂದ 63 ಚುನಾಯಿತ ಸದಸ್ಯರ ಬೆಂಬಲ ಇದೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಪುನರುಚ್ಚರಿಸಿದ್ದಾರೆ. ಆದರೆ ವೇಣುಗೋಪಾಲ್ ಅವರಿಗೆ ನಿಷ್ಠರು ಎಂದು ಹೇಳಲಾದ ಕೆಲವು ಸದಸ್ಯರು ಸತೀಶನ್ ಅವರೊಂದಿಗೂ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ಹೇಳಿವೆ.
ಪಶ್ಚಿಮ ಬಂಗಾಳ: 9ರಂದು ಪ್ರಮಾಣವಚನ
ಕೋಲ್ಕತ್ತ: ನೂತನ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭ ಮೇ 9ರ ಶನಿವಾರ ನಡೆಯಲಿದೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಬುಧವಾರ ತಿಳಿಸಿದ್ದಾರೆ. ಮಧ್ಯ ಕೋಲ್ಕತ್ತದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಬೆಳಿಗ್ಗೆ 10 ಗಂಟೆಗೆ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಅಸ್ಸಾಂ: ಹಿಮಂತ ರಾಜೀನಾಮೆ 11ಕ್ಕೆ ಹೊಸ ಸರ್ಕಾರ ಅಸ್ತಿತ್ವಕ್ಕೆ
ಗುವಾಹಟಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ತಮ್ಮ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ. ಇದೇ 11ರ ನಂತರ ಬಿಜೆಪಿ ನೇತೃತ್ವದ ಹೊಸ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆ ಇದೆ. ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ ಬಳಿಕ ಲೋಕಭವನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಶರ್ಮಾ ಅವರು ‘ಅಸ್ಸಾಂನಲ್ಲಿ ಐತಿಹಾಸಿಕ ಗೆಲುವು ಸಾಧಿಸಿರುವುದರಿಂದ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದ್ದೇವೆ’ ಎಂದು ಹೇಳಿದರು.
‘ಪಕ್ಷವು ಇಬ್ಬರು ಕೇಂದ್ರ ವೀಕ್ಷಕರನ್ನು ನೇಮಿಸಿದೆ. ಅವರ ಉಪಸ್ಥಿತಿಯಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು ಅಲ್ಲಿ ನೂತನ ನಾಯಕರ ಆಯ್ಕೆ ನಡೆಯಲಿದೆ. ಅಲ್ಲಿಯವರೆಗೂ ಕಾಯಬೇಕಿದೆ’ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ವೀಕ್ಷಕರಾಗಿ ಕೇಂದ್ರ ಸಚಿವ ಜೆ.ಪಿ. ನಡ್ಡಾ ಸಹ ವೀಕ್ಷಕರಾಗಿ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಮಂಗಳವಾರ ನೇಮಕಗೊಂಡಿದ್ದಾರೆ. ಬಿಜೆಪಿ ನೇತೃತ್ವದ ಎನ್ಡಿಎ ಈಚೆಗೆ ನಡೆದ ಚುನಾವಣೆಯಲ್ಲಿ 102 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ 82 ಕ್ಷೇತ್ರಗಳಲ್ಲಿ ವಿಜಯಿಯಾಗಿದೆ. ಅಸ್ಸಾಂ ವಿಧಾನಸಭೆಯ ಸದಸ್ಯ ಬಲ 126.
