ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲೇ ಮಮತಾ ಬ್ಯಾನರ್ಜಿ ಅವರು ಅತ್ಯಂತ ದೊಡ್ಡರಾಜಕೀಯ ಸೋಲನ್ನು ಅನುಭವಿಸಿದ್ದಾರೆ. ಹೈಪ್ರೊಫೈಲ್ ಕ್ಷೇತ್ರವೆಂದೇ ಗುರುತಿಸಲ್ಪಟ್ಟಿದ್ದ ಭವಾನಿಪುರ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಹಾಗೂ ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಅವರು ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಸುಮಾರು 15,105 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.
ಮಮತಾ ಬ್ಯಾನರ್ಜಿ ಅವರ ಭದ್ರಕೋಟೆಯೆಂದೇ ಪರಿಗಣಿಸಲ್ಪಟ್ಟಿದ್ದ ಭವಾನಿಪುರದಲ್ಲಿ ಎದುರಾದ ಈ ಸೋಲು, ತೃಣಮೂಲ ಕಾಂಗ್ರೆಸ್ಗೆ (TMC) ನೀಡಿದ ದೊಡ್ಡ ಹಿನ್ನಡೆಯಾಗಿದೆ.
ಒಮ್ಮೆ ಸುವೆಂದು ಒಮ್ಮೆ ಮಮತಾ ಮುನ್ನಡೆ ಸಾಧಿಸುತ್ತ ಹಾವು ಏಣಿಯಾಟ ನಡೆದಿದ್ದ ಈ ಕ್ಷೇತ್ರದಲ್ಲಿ ಸುವೇಂದು ಅಧಿಕಾರಿ 17ನೇ ಸುತ್ತಿನಿಂದ ಲೀಡ್ ಪಡೆಯುತ್ತ ಹೋಗಿದ್ದಾರೆ. ಒಟ್ಟು 20 ಸುತ್ತುಗಳಲ್ಲಿ ನಡೆದ ಮತ ಎಣಿಕೆಯಲ್ಲಿ ಅಂತಿಮವಾಗಿ ಬಿಜೆಪಿಯ ಸುವೇಂದು ಅಧಿಕಾರಿ 73,917 ಮತಗಳನ್ನು ಪಡೆದರೆ ಮಮತಾ ಬ್ಯಾನರ್ಜಿ (ಟಿಎಂಸಿ) 58,812 ಮತಗಳನ್ನು ಪಡೆದಿದ್ದು, 15,105 ಮತಗಳ ಅಂತರದಿಂದ ಮಮತಾ ಸೋತಿದ್ದಾರೆ.
ಅಂತಿಮ ಸುತ್ತಿನ ಎಣಿಕೆಯ ನಂತರ ಸುವೇಂದು ಅಧಿಕಾರಿ ಅವರು ಸ್ಪಷ್ಟ ಬಹುಮತದೊಂದಿಗೆ ವಿಜಯಶಾಲಿಯಾಗಿ ಹೊರಹೊಮ್ಮಿದ್ದು, ಬಂಗಾಳದ ರಾಜಕಾರಣದಲ್ಲಿ ಬಿಜೆಪಿಯ ಈ ಸಾಧನೆಯು ಐತಿಹಾಸಿಕ ಮೈಲಿಗಲ್ಲಾಗಿದೆ.
ನಂದಿಗ್ರಾಮ ಇತಿಹಾಸ ಮರುಕಳಿಸಿತೇ?
2021ರ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರದಲ್ಲಿ ನಡೆದಿದ್ದ ತೀವ್ರ ಹಣಾಹಣಿಯಲ್ಲಿ ಸುವೇಂದು ಅವರು ಮಮತಾ ಬ್ಯಾನರ್ಜಿ ಅವರನ್ನು 1,956 ಮತಗಳ ಅಂತರದಿಂದ ಸೋಲಿಸಿದ್ದರು. ಈಗ 2026ರಲ್ಲಿಯೂ ಸಹ ಮಮತಾ ಅವರನ್ನು ಸೋಲಿಸುವ ಮೂಲಕ ಸುವೇಂದು ಅಧಿಕಾರಿ ಅವರು ತಮ್ಮ ಮೇಲುಗೈಯನ್ನು ಸಾಬೀತುಪಡಿಸಿದ್ದಾರೆ. ಆದರೆ ಈ ಬಾರಿ ಮಮತಾ ಅವರ ಕ್ಷೇತ್ರದಲ್ಲೇ ಅವರನ್ನು 15 ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಸೋಲಿಸಿದ್ದಾರೆ.
ಭವಾನಿಪುರ ಕ್ಷೇತ್ರವು ಇಡೀ ದೇಶದ ಗಮನ ಸೆಳೆದಿತ್ತು. ಬಿಜೆಪಿ ವರಿಷ್ಠರು ರೂಪಿಸಿದ ತಂತ್ರಗಾರಿಕೆ ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಸ್ವಂತ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಅವರು ಸೋಲನುಭವಿಸಿರುವುದು ಬಂಗಾಳದ ರಾಜಕೀಯ ಚಿತ್ರಣವನ್ನು ಬದಲಿಸುವ ಮುನ್ಸೂಚನೆ ನೀಡಿದೆ.
