ಜತ್ತ : ಸಾಂಗ್ಲಿ ಜಿಲ್ಲೆಯಲ್ಲಿ ಮಂಗಳವಾರ ಸುರಿದ ಭಾರಿ ಮಳೆ ಹಾಗೂ ಜೋರಾಗಿ ಬೀಸಿದ ಗಾಳಿಯಿಂದಾಗಿ ದೇವಸ್ಥಾನವೊಂದರ ಗೋಡೆ ಹಾಗೂ ತಗಡುಗಳು ಕುಸಿದ ಪರಿಣಾಮ ಆರು ಭಕ್ತರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜತ್ತ ತಾಲ್ಲೂಕಿನ ಮೋಥೆವಾಡಿ ಗ್ರಾಮದ ಮಾರ್ಗುದೇವಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ 12ರಿಂದ 14 ಜನರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಮಂಗಳವಾರ ಈ ದೇವಸ್ಥಾನಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ.
'ದೇವಸ್ಥಾನ ಆವರಣದಲ್ಲಿ 350 ಭಕ್ತರಿದ್ದರು. ಜೋರಾದ ಗಾಳಿಯೊಂದಿಗೆ ಭಾರಿ ಮಳೆ ಸುರಿಯಲಾರಂಭಿಸಿದಾಗ, ಭಕ್ತರು ಗೋಡೆ ಉದ್ದಕ್ಕೂ ನಿಂತು ಆಶ್ರಯ ಪಡೆದಿದ್ದಾರೆ. ಈ ವೇಳೆ ಗೋಡೆ ಹಾಗೂ ತಗಡಿನ ಶೀಟುಗಳು ದಿಢೀರ್ನೆ ಕುಸಿದ ಪರಿಣಾಮ ದುರ್ಘಟನೆ ಸಂಭವಿಸಿದೆ' ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತುಷಾರ್ ದೋಷಿ ತಿಳಿಸಿದ್ದಾರೆ.
