ಚೆನ್ನೈ: ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಅಧ್ಯಕ್ಷ ಚಂದ್ರಶೇಖರ ಜೋಸೆಫ್ ವಿಜಯ ಅವರು ಭಾನುವಾರ (ಮೇ 10) ತಮಿಳುನಾಡಿನ ಒಂಬತ್ತನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.ಚೆನ್ನೈನ ನೆಹರು ಕ್ರೀಡಾಂಗಣದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅವರು ವಿಜಯ ಅವರಿಗೆ ಅಧಿಕಾರ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು
ದೇವರ ಹೆಸರಿನಲ್ಲಿ ಪ್ರಮಾಣ ವಚನ
ಟಿವಿಕೆ ಕಾರ್ಯಕರ್ತರ ಹರ್ಷೋದ್ಗಾರ ಮತ್ತು ಸೀಟಿಗಳ ನಡುವೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ವಿಜಯ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ನಿರ್ಗಮಿತ ಡಿಎಂಕೆ ಸರ್ಕಾರದ ಬಹುತೇಕ ಸಚಿವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿರಲಿಲ್ಲ, ಆದರೆ ವಿಜಯ ಮತ್ತು ಅವರ ಸಂಪುಟದ ಸಚಿವರು ದೇವರ ಹೆಸರಿನಲ್ಲೇ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು.
ವಿಜಯ ಅವರ ಜೊತೆಗೆ ಇತರ ಒಂಬತ್ತು ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದವ್ ಅರ್ಜುನ, ಕೆ.ಜಿ. ಅರುಣರಾಜ, ಕೆ.ಎ. ಸೆಂಗೋಟ್ಟಯನ್, ಪಿ. ವೆಂಕಟರಮಣನ್, ಆರ್. ನಿರ್ಮಲಕುಮಾರ, ರಾಜಮೋಹನ, ಟಿ.ಕೆ. ಪ್ರಭು ಹಾಗೂ ಎಸ್. ಕೀರ್ತನಾ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
51 ವರ್ಷದ ವಿಜಯ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ತಂದೆ ಎಸ್.ಎ. ಚಂದ್ರಶೇಖರ ಮತ್ತು ತಾಯಿ ಶೋಭಾ, ಖ್ಯಾತ ನಟಿ ತ್ರಿಷಾ ಮತ್ತು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮೊದಲಾದವರು ಉಪಸ್ಥಿತರಿದ್ದರು.
ಎರಡು ವರ್ಷಗಳ ಹಿಂದೆಯಷ್ಟೇ ರೂಪುಗೊಂಡ ಟಿವಿಕೆ ಪಕ್ಷವು ಕಳೆದ ತಿಂಗಳು ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 234 ಸ್ಥಾನಗಳಲ್ಲಿ 108 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದಾಗ್ಯೂ, ಪಕ್ಷವು ಬಹುಮತದ 118 ಅಂಕಗಳನ್ನು ಪಡೆಯಲು ವಿಫಲವಾಯಿತು.
