ಬೆಂಗಳೂರು: 5 ತಿಂಗಳ ಹಿಂದೆ ಕಚೇರಿಯಲ್ಲೇ ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸಿದ್ದ ಆರೋಪದ ಮೇರೆಗೆ ಅಮಾನತುಗೊಂಡಿದ್ದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್ಇ) ಪೊಲೀಸ್ ಮಹಾನಿರ್ದೇಶಕ ಕೆ.ರಾಮಚಂದ್ರರಾವ್ ಅವರನ್ನು ಇದೀಗ ರಾಜ್ಯ ಸರ್ಕಾರ ಅಮಾನತು ಆದೇಶ ಹಿಂಪಡೆದುಕೊಂಡಿದೆ. ಪೊಲೀಸ್ ಮ್ಯಾನುಯಲ್ (ಪೊಲೀಸ್ ಕೈಪಿಡಿ) ಡಿಜಿಪಿಯನ್ನಾಗಿ ನೇಮಿಸಿದೆ. ಮೇ 31ರಂದು ನಿವೃತ್ತಿಯಾಗಲಿರುವ ರಾಮಚಂದ್ರರಾವ್ಗೆ ಹುದ್ದೆ ನೀಡಿದೆ.
ಜನವರಿಯಲ್ಲಿ ರಾಮಚಂದ್ರರಾವ್ ಸಮವಸ್ತ್ರದಲ್ಲೇ ತಮ್ಮ ಕಚೇರಿಯಲ್ಲಿ ಮಹಿಳೆಯರ ಜತೆ ಅಶ್ಲೀಲವಾಗಿ ವರ್ತಿಸಿದ ವಿಡಿಯೋ ವೈರಲ್ ಆಗಿತ್ತು. ಪೊಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದ ರಾಮಚಂದ್ರ ರಾವ್ ನಡೆ ಸರ್ಕಾರಕ್ಕೆ ಮತ್ತು ರಾಜ್ಯ ಪೊಲೀಸ್ ಇಲಾಖೆಗೆ ಭಾರೀ ಮುಜುಗರವನ್ನುಂಟು ಮಾಡಿತ್ತು. ಈ ಹಿನ್ನೆಲೆಯಲ್ಲಿ ರಾಮಚಂದ್ರ ರಾವ್ ಅವರನ್ನು ಸರ್ಕಾರ ಜ.19ರಂದು ಅಮಾನತುಗೊಳಿಸಿ ಆದೇಶಿಸಿತ್ತು.
ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (ಪೊಲೀಸ್ ಮ್ಯಾನುಯಲ್) ಹುದ್ದೆಗೆ ನೇಮಿಸಲಾಗಿದೆ. ಈ ಹುದ್ದೆಯನ್ನು ಸಿಐಡಿ ಡಿಜಿಪಿ ಹುದ್ದೆಗೆ ಸಮಾನವೆಂದು ಪರಿಗಣಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಬಿ.ಎಸ್. ಸಂಜಯ್ ಆದೇಶಿಸಿದ್ದಾರೆ.
ವಿಡಿಯೋ ಸಂಬಂಧ ಹೆಚ್ಚಿನ ತನಿಖೆಗಾಗಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆರ್.ಹಿತೇಂದ್ರ ನೇತೃತ್ವದಲ್ಲಿ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ಸರ್ಕಾರ ರಚಿಸಿತ್ತು. ಈ ಸಮಿತಿ ತನಿಖೆ ನಡೆಸಿ, 100 ಪುಟಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ವಿಡಿಯೋ ಅಸಲಿ, ವಿಡಿಯೋದಲ್ಲಿ ಯಾವುದೇ ಮಾರ್ಪಾಟಾಗಿಲ್ಲ ಎಂದು ಎಫ್ಎಸ್ಎಲ್ ವರದಿಯನ್ನು ಉಲ್ಲೇಖಿಸಿ ವರದಿ ನೀಡಲಾಗಿತ್ತು. ಬಳಿಕ ಅವರ ಮೇಲೆ ಇಲಾಖಾ ತನಿಖೆ ಆರಂಭಿಸಿತ್ತು. ಮೂಲಗಳ ಪ್ರಕಾರ, ಇಲಾಖಾ ತನಿಖೆ ಮುಕ್ತಾಯಗೊಂಡಿದ್ದು, ಅದರಲ್ಲೂ ಕ್ಲೀನ್ ಚೀಟ್ ಕೊಡಲಾಗಿದೆ ಎನ್ನಲಾಗಿದೆ.
ಕಳೆದ ವರ್ಷ ವಿದೇಶದಿಂದ ಅಕ್ರಮವಾಗಿ ಚಿನ್ನ ಸಾಗಾಟ ಪ್ರಕರಣದಲ್ಲಿ ಡಿಆರ್ಐ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದ ಪುತ್ರಿ ರನ್ಯಾರಾವ್ ಪ್ರಕರಣದಲ್ಲೂ ಶಿಷ್ಟಚಾರ ಉಲ್ಲಂಘನೆ ಆರೋಪದ ಮೇರೆಗೆ ರಾಮಚಂದ್ರರಾವ್ ವಿಚಾರಣೆ ಎದುರಿಸಿದ್ದರು. ಒಂದೆರಡು ತಿಂಗಳು ಕಡ್ಡಾಯ ರಜೆ ಮೇಲೆ ಕಳುಹಿಸಿ, ಬಳಿಕ ಡಿಸಿಆರ್ಇ ಹುದ್ದೆ ನೀಡಲಾಗಿತ್ತು.
1993 ನೇ ಬ್ಯಾಚ್ನ ಐಪಿಎಸ್ ಅಧಿಕಾರಿ ರಾಮಚಂದ್ರರಾವ್ ಮೇ ಅಂತ್ಯಕ್ಕೆ ಸೇವಾ ನಿವೃತ್ತಿ ಹೊಂದಲಿದ್ದಾರೆ. ಅಮಾನತಿನಲ್ಲಿದ್ದರೆ, ಅವರ ನಿವೃತ್ತಿ ಜೀವನದಲ್ಲಿ ಸಿಗಬೇಕಾದ ಪಿಂಚಣಿ ಹಾಗೂ ಇತರೆ ಸೌಲಭ್ಯಕ್ಕೆ ಕುತ್ತು ಬರುತ್ತದೆ. ಹೀಗಾಗಿ ಅವರಿಗೆ ಹುದ್ದೆ ಕೊಡಲಾಗಿದೆ ಎಂಬ ಚರ್ಚೆಗಳು ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿದೆ.
ಕಳೆದ ವರ್ಷ ವಿದೇಶದಿಂದ ಅಕ್ರಮವಾಗಿ ಚಿನ್ನ ಸಾಗಾಟ ಪ್ರಕರಣದಲ್ಲಿ ಡಿಆರ್ಐ ಅಧಿಕಾರಿಗಳಿಂದ ಬಂಧನಕ್ಕೊಳಾಗಿದ್ದ ಪುತ್ರಿ ರನ್ಯಾರಾವ್ ಪ್ರಕರಣದಲ್ಲೂ ಶಿಷ್ಟಚಾರ ಉಲ್ಲಂಘನೆ ಆರೋಪದ ಮೇರೆಗೆ ರಾಮಚಂದ್ರರಾವ್ ವಿರುದ್ಧ ವಿಚಾರಣೆ ನಡೆಸಲು ಹಿರಿಯ ಐಎಎಸ್ ಅಧಿಕಾರಿ ಗೌರವ್ ಗುಪ್ತಾ ನೇತೃತ್ವದಲ್ಲಿ ಆಂತರಿಕಾ ವಿಚಾರಣಾ ಸಮಿತಿ ರಚಿಸಲಾಗಿತ್ತು. ನಂತರ ರಾಮಚಂದ್ರರಾವ್ ಅವರನ್ನು ಒಂದೆರಡು ತಿಂಗಳು ಕಡ್ಡಾಯ ರಜೆ ಮೇಲೆ ಕಳುಹಿಸಿ, ನಂತರ ಡಿಸಿಆರ್ಇ ಹುದ್ದೆ ನೀಡಲಾಗಿತ್ತು. ಡಿಆರ್ಐ ಅಧಿಕಾರಿಗಳಿಂದಲೂ ರಾಮಚಂದ್ರರಾವ್ ವಿಚಾರಣೆಗೆ ಒಳಗಾಗಿದ್ದರು.
