ಮುಂಬೈ/ನಾಸಿಕ್: ಬಹುರಾಷ್ಟ್ರೀಯ ಐಟಿ ಕಂಪನಿ ಟಿಸಿಎಸ್ (TCS) ನಲ್ಲಿ ನಡೆದಿದೆ ಎನ್ನಲಾದ ‘ಬಲವಂತದ ಮತಾಂತರ’ ಜಾಲಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಉದ್ಯೋಗಿ ನಿದಾ ಖಾನ್ ನನ್ನು ಗುರುವಾರ ರಾತ್ರಿ ಛತ್ರಪತಿ ಸಂಭಾಜಿನಗರದಲ್ಲಿ ಬಂಧಿಸಲಾಗಿದೆ.
ಖಾನ್ ಕಳೆದ ನಾಲ್ಕು ದಿನಗಳಿಂದ ನರೇಗಾಂವ್ನ ಕೈಸರ್ ಕಾಲೋನಿಯಲ್ಲಿರುವ ಫ್ಲಾಟ್ನಲ್ಲಿ ವಾಸಿಸುತ್ತಿದ್ದು, ಪೊಲೀಸರು ಫ್ಲಾಟ್ ಮೇಲೆ ನಿಗಾ ಇಟ್ಟಿದ್ದರು. ಪ್ಲಾಟ್ನಲ್ಲಿ ನಿದಾ ತನ್ನ ಪೋಷಕರು, ಸಹೋದರ ಮತ್ತು ಚಿಕ್ಕಮ್ಮನೊಂದಿಗೆ ವಾಸವಿದ್ದಳು ಎಂದು ತಿಳಿದು ಬಂದಿದೆ. ಬಂಧನದ ಬಳಿಕ ಆಕೆಯನ್ನು ನ್ಯಾಯಾಧೀಶರ ನಿವಾಸದಲ್ಲಿ ಜೆಎಂಎಫ್ಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.
ನಾಸಿಕ್ ವಿಶೇಷ ನ್ಯಾಯಾಲಯವು ಮೇ 2 ರಂದು ನಿದಾ ಖಾನ್ ನಿಬಂಧನಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
ಪ್ರಕರಣದ ಹಿನ್ನೆಲೆ ಏನು?
ನಾಸಿಕ್ನ ಟಿಸಿಎಸ್ ಕಚೇರಿಯ ಎಂಟು ಮಂದಿ ಉದ್ಯೋಗಿಗಳು ಒಂಬತ್ತು ಸಹೋದ್ಯೋಗಿಗಳಿಗೆ ಲೈಂಗಿಕ ಕಿರುಕುಳ ಮತ್ತು ಮತಾಂತರಕ್ಕೆ ಒತ್ತಡ ಹೇರುತ್ತಿದ್ದಾರೆ ಎಂದು ಮಾರ್ಚ್ 26 ರಂದು ಮೊದಲ ಎಫ್ಐಆರ್ ದಾಖಲಾಗಿತ್ತು. ಈ ಪೈಕಿ 26 ವರ್ಷದ ನಿದಾ ಖಾನ್ ವಿರುದ್ಧ ಸಂತ್ರಸ್ತೆಯ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲು ಪ್ರಚೋದಿಸಿದ ಗಂಭೀರ ಆರೋಪಗಳಿವೆ.
ತನಿಖೆಯಲ್ಲಿ ಬಯಲಾದ ಆಘಾತಕಾರಿ ಅಂಶಗಳು:
ವಿಶೇಷ ತನಿಖಾ ತಂಡ (SIT) ಮತ್ತು ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ನೀಡಿರುವ ಮಾಹಿತಿ ಪ್ರಕಾರ ಈ ಪ್ರಕರಣದ ಆಳ ಅಚ್ಚರಿ ಮೂಡಿಸುವಂತಿದೆ.
ಸಂತ್ರಸ್ತೆಯ ಹೆಸರನ್ನು ಬದಲಾಯಿಸಿ ಅವಳನ್ನು ಮಲೇಷ್ಯಾಕ್ಕೆ ಕಳುಹಿಸುವ ಪಿತೂರಿ ನಡೆದಿತ್ತು. ಅಲ್ಲಿ ‘ಇಮ್ರಾನ್’ ಎಂಬ ವ್ಯಕ್ತಿ ಅವಳನ್ನು ಸ್ವಾಗತಿಸಲು ಸಿದ್ಧನಿದ್ದ ಎನ್ನಲಾಗಿದೆ. ಈ ಕೃತ್ಯದ ಹಿಂದೆ ಅಂತಾರಾಷ್ಟ್ರೀಯ ಸಿಂಡಿಕೇಟ್ ಇರುವ ಸಾಧ್ಯತೆಯಿದ್ದು, ವಿದೇಶಿ ಹಣದ ಹರಿವಿನ ಬಗ್ಗೆ ತನಿಖೆ ನಡೆಯುತ್ತಿದೆ.
ನಿದಾ ಖಾನ್ ಸಂತ್ರಸ್ತೆಗೆ ಬುರ್ಖಾ ನೀಡಿರುವುದು, ಧಾರ್ಮಿಕ ಸಾಹಿತ್ಯ ಹಂಚಿರುವುದು ಮತ್ತು ಮೊಬೈಲ್ನಲ್ಲಿ ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದ ಆ್ಯಪ್ಗಳನ್ನು ಇನ್ಸ್ಟಾಲ್ ಮಾಡಿ ಇಸ್ಲಾಂ ಪದ್ಧತಿ ಪಾಲಿಸುವಂತೆ ಒತ್ತಾಯಿಸಿರುವುದು ಪತ್ತೆಯಾಗಿದೆ.
ಈ ಪ್ರಕರಣದ ಇತರ ಆರೋಪಿಗಳಾದ ಡ್ಯಾನಿಶ್ ಶೇಖ್ ಮತ್ತು ತೌಸಿಫ್ ಅತ್ತಾರ್ ಮದುವೆಯ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿದ್ದಾರೆ.
ಟಿಸಿಎಸ್ ಸ್ಪಷ್ಟನೆ:
ಈ ಮೊದಲು ನಿದಾ ಖಾನ್ ಅವರು ಎಚ್ಆರ್ ಮ್ಯಾನೇಜರ್ ಎಂದು ವರದಿಯಾಗಿತ್ತು. ಆದರೆ ಇದನ್ನು ನಿರಾಕರಿಸಿರುವ ಟಿಸಿಎಸ್ ಸಿಇಒ ಕೆ. ಕೃತಿವಾಸನ್, “ನಿದಾ ಖಾನ್ ಪ್ರೊಸೆಸ್ ಅಸೋಸಿಯೇಟ್ ಆಗಿ ಕೆಲಸ ಮಾಡುತ್ತಿದ್ದಳು, ಯಾವುದೇ ನಾಯಕತ್ವದ ಜವಾಬ್ದಾರಿ ಇರಲಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯ ಕಂಪನಿಯು ಆರೋಪಿಗಳನ್ನು ಅಮಾನತುಗೊಳಿಸಿ ಆಂತರಿಕ ತನಿಖೆ ಆರಂಭಿಸಿದೆ.
ಸಂತ್ರಸ್ತೆ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದರಿಂದ, ಆರೋಪಿಗಳ ವಿರುದ್ಧ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
