Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ರಾಜ್ಯಸಭೆಗೆ ನಾಲ್ವರ ನಾಮನಿರ್ದೇಶನ: ಶೃಂಗ್ಲಾ, ನಿಕಮ್‌‌, ಇತಿಹಾಸಕಾರ್ತಿ ಮೀನಾಕ್ಷಿ, ಹಲ್ಲೆಯಲ್ಲಿ ಕಾಲು ಕಳೆದುಕೊಂಡಿರುವ ಸದಾನಂದನ್‌ ಮೇಲ್ಮನೆಗೆ

ನವದೆಹಲಿ: ಮಾಜಿ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ ಶೃಂಗ್ಲಾ, ಹಿರಿಯ ವಕೀಲ ಉಜ್ವಲ್‌ ನಿಕಮ್‌, ಇತಿಹಾಸಕಾರ್ತಿ ಡಾ.ಮೀನಾಕ್ಷಿ ಜೈನ್‌ ಹಾಗೂ ಕೇರಳದ ಬಿಜೆಪಿ ನಾಯಕ ಸಿ.ಸದಾನಂದನ್‌ ಮಾಸ್ಟರ್‌ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ.

ಈ ಕುರಿತ ಅಧಿಸೂಚನೆಯನ್ನು ಗೃಹ ಸಚಿವಾಲಯ ಶನಿವಾರ ರಾತ್ರಿ ಪ್ರಕಟಿಸಿದೆ. ಇದರೊಂದಿಗೆ, ನಾಮನಿರ್ದೇಶನ ಕೋಟಾ ಅಡಿಯ ಎಲ್ಲ 12 ಸ್ಥಾನಗಳನ್ನು ಭರ್ತಿ ಮಾಡಿದಂತಾಗಿದೆ. ಜಮ್ಮು–ಕಾಶ್ಮೀರದಿಂದ ನಾಲ್ಕು ಹಾಗೂ ಹರಿಯಾಣದ ಒಂದು ಸ್ಥಾನ ಖಾಲಿ ಉಳಿದಿವೆ.

ಒಟ್ಟು 240 ಸದಸ್ಯ ಬಲದ ರಾಜ್ಯಸಭೆಯಲ್ಲಿ, ಬಿಜೆಪಿ ನೇತೃತ್ವದ ಎನ್‌ಡಿಎ ಈಗ 135 ಸಂಸದರ ಬೆಂಬಲ ಹೊಂದಿದಂತಾಗಿದೆ.

ಹೊಸದಾಗಿ ನಾಮನಿರ್ದೇಶನಗೊಂಡಿರುವ ಈ ಸಂಸದರ ಅಧಿಕಾರಾವಧಿ ಆರು ವರ್ಷ. ಸಂಸತ್‌ ಮುಂಗಾರು ಅಧಿವೇಶ ಆರಂಭಗೊಳ್ಳುವುದಕ್ಕೂ ಒಂದು ವಾರ ಮುಂಚೆ ಈ ಪ್ರಕ್ರಿಯೆ ನಡೆದಿದೆ. ಈ ಸಂಸದರು, ನಾಮನಿರ್ದೇಶನಗೊಂಡ ಆರು ತಿಂಗಳ ಒಳಗಾಗಿ ಯಾವುದಾದರೂ ಪಕ್ಷಕ್ಕೆ ಸೇರಬಹುದಾಗಿದೆ.

ಮೋದಿ ಪ್ರತಿಕ್ರಿಯೆ:
ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ನಾಲ್ವರ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಕ್ರಿಯಿಸಿ, ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ಶೃಂಗ್ಲಾ ಅವರು ಸಂಸತ್‌ ಕಾರ್ಯಕಲಾಪಗಳಿಗೆ ಮತ್ತಷ್ಟು ಮೆರುಗು ತರಲಿದ್ದರೆ, ನಿಕಮ್‌ ಅವರು ಸಾಂವಿಧಾನಿಕ ಮೌಲ್ಯಗಳನ್ನು ಬಲಪಡಿಸಲು ಶ್ರಮಿಸಿದವರು. ಸಾಮಾನ್ಯ ಪ್ರಜೆಗಳನ್ನು ಕೂಡ ಘನತೆಯಿಂದ ನೋಡಬೇಕು ಎಂಬುದನ್ನು ಖಾತ್ರಿಪಡಿಸುವುದಕ್ಕಾಗಿಯೂ ನಿಕಮ್‌ ಹೋರಾಡಿದ್ದಾರೆ’ ಎಂದು ಹೇಳಿದ್ದಾರೆ.

‘ಶಿಕ್ಷಣ, ಸಾಹಿತ್ಯ, ಇತಿಹಾಸ, ರಾಜಕೀಯವಿಜ್ಞಾನ ಕ್ಷೇತ್ರಕ್ಕೆ ಮೀನಾಕ್ಷಿ ಜೈನ್‌ ಅವರ ಕೊಡುಗೆ ಅನನ್ಯ. ಸದಾನಂದನ್‌ ಅವರು ಧೈರ್ಯ ಹಾಗೂ ಅನ್ಯಾಯಕ್ಕೆ ತಲೆಬಾಗುವುದಿಲ್ಲ ಎಂಬುದರ ಪ್ರತೀಕದಂತಿದ್ದಾರೆ. ರಾಷ್ಟ್ರದ ಪ್ರಗತಿಗಾಗಿ ಅವರು ಹೊಂದಿರುವ ಬದ್ಧತೆಯು ಹಿಂಸೆ ಮತ್ತು ಬೆದರಿಕೆಯಿಂದ ಕುಗ್ಗಿಲ್ಲ’ ಎಂದು ಬರೆದುಕೊಂಡಿದ್ದಾರೆ.

ವಿದೇಶಾಂಗ ಪರಿಣಿತಗೆ ಮಣೆ
ಹರ್ಷವರ್ಧನ ಶೃಂಗ್ಲಾ ಅವರು ವಿದೇಶಾಂಗ ವ್ಯವಹಾರಗಳ ಕ್ಷೇತ್ರದಲ್ಲಿ ಹೊಂದಿರುವ ಪರಿಣತಿ ಅಗಾಧ. ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕಗೊಳ್ಳುವುದಕ್ಕೂ ಮುನ್ನ ಅವರು ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿದ್ದರು. 2023ರಲ್ಲಿ ಭಾರತ ಜಿ–20 ಅಧ್ಯಕ್ಷ ಸ್ಥಾನದಲ್ಲಿದ್ದ ವೇಳೆ ಶೃಂಗ್ಲಾ ಅವರು ಮುಖ್ಯ ಸಮನ್ವಯಕಾರರಾಗಿದ್ದರು. ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಪ್ರತಿಯಾಗಿ ನಡೆಸಿದ ಕಾರ್ಯಾಚರಣೆ ಕುರಿತು ವಿಶ್ವದ ಪ್ರಮುಖ ರಾಷ್ಟ್ರಗಳಿಗೆ ಭಾರತದ ನಿಲುವು ಮನವರಿಕೆ ಮಾಡಿಕೊಡಲು ತೆರಳಿದ್ದ ನಿಯೋಗವೊಂದರ ಸದಸ್ಯರಾಗಿಯೂ ಶೃಂಗ್ಲಾ ಕಾರ್ಯನಿರ್ವಹಿಸಿದ್ದಾರೆ. ತಮ್ಮ ನೇತೃತ್ವದ ‘ಡಾರ್ಜಿಲಿಂಗ್ ವೆಲ್‌ಫೇರ್‌ ಸೊಸೈಟಿ’ಯಡಿ 2023 ಹಾಗೂ 2024ರಲ್ಲಿ ಪಶ್ಚಿಮ ಬಂಗಾಳದ ವಿವಿಧೆಡೆ ಹಮ್ಮಿಕೊಂಡ ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಂಡಿದ್ದರು. ಇದು ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಸೂಚನೆ ಎಂದೇ ಹೇಳಲಾಗುತ್ತಿತ್ತು.

ಕಾನೂನು ತಜ್ಞ ನಿಕಮ್:
ಸರ್ಕಾರಿ ವಕೀಲರಾಗಿದ್ದ ಉಜ್ವಲ್‌ ನಿಕಮ್‌ ಹಲವಾರು ಮಹತ್ವದ ಪ್ರಕರಣಗಳಲ್ಲಿ ವಾದ ಮಂಡಿಸಿ ಗಮನ ಸೆಳೆದಿದ್ದಾರೆ. 2008ರಲ್ಲಿ ಮುಂಬೈ ಮೇಲಿನ ಉಗ್ರರ ದಾಳಿ ಪ್ರಕರಣದಲ್ಲಿ ವಾದ ಮಂಡಿಸಿದ್ದರು. ಸಿನಿಮಾ ನಿರ್ಮಾಪಕ ಗುಲ್ಷನ್‌ ಕುಮಾರ್‌, ಬಿಜೆಪಿ ನಾಯಕ ಪ್ರಮೋದ್‌ ಮಹಾಜನ್ ಕೊಲೆ ಪ್ರಕರಣದಲ್ಲಿಯೂ ಅವರು ವಕಾಲತ್ತು ವಹಿಸಿದ್ದರು. 1993ರಲ್ಲಿ ಮುಂಬೈನಲ್ಲಿ ಸಂಭವಿಸಿದ್ದ ಸರಣಿ ಬಾಂಬ್‌ ಸ್ಫೋಟ ಪ್ರಕರಣ 2003ರಲ್ಲಿ ಗೇಟ್‌ವೇ ಆಫ್‌ ಇಂಡಿಯಾ ಬಳಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿಯೂ ವಾದ ಮಂಡಿಸಿದ್ದರು. ಮಹಾರಾಷ್ಟ್ರ ವಿಧಾನಸಭೆಗೆ ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಮುಂಬೈ ಉತ್ತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಿಕಮ್‌ ಕಾಂಗ್ರೆಸ್‌ ಅಭ್ಯರ್ಥಿ ವರ್ಷಾ ಗಾಯಕ್ವಾಡ್‌ ವಿರುದ್ಧ ಪರಾಭವಗೊಂಡರು. ಅವರು 2016ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಶಿಕ್ಷಣ ತಜ್ಞೆಗೆ ಅವಕಾಶ
ಡಾ.ಮೀನಾಕ್ಷಿ ಜೈನ್‌ ದೆಹಲಿಯ ಗಾರ್ಗಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರ 2014ರಲ್ಲಿ ಅವರನ್ನು ಭಾರತೀಯ ಇತಿಹಾಸ ಸಂಶೋಧನಾ ಪರಿಷತ್ತಿಗೆ (ಐಸಿಎಚ್‌ಆರ್‌) ನಾಮನಿರ್ದೇಶನ ಮಾಡಿತ್ತು. ಟೈಮ್ಸ್‌ ಆಫ್‌ ಇಂಡಿಯಾ ದೈನಿಕದ ಮಾಜಿ ಸಂಪಾದಕ ಗಿರಿಲಾಲ್‌ ಜೈನ್‌ ಅವರ ಪುತ್ರಿಯಾದ ಮೀನಾಕ್ಷಿ ರಾಜಕೀಯ ವಿಜ್ಞಾನಿ ಆಗಿಯೂ ಖ್ಯಾತರು. ಅವರಿಗೆ 2020ರಲ್ಲಿ ಪದ್ಮಶ್ರೀ ಪ್ರಶಸ್ತಿ ಸಂದಿದೆ.

ಶಿಕ್ಷಕ ವೃತ್ತಿಯಿಂದ ರಾಜ್ಯಸಭೆಗೆ
ಶಿಕ್ಷಕರಾಗಿ ವೃತ್ತಿ ಆರಂಭಿಸಿ ನಂತರ ರಾಜಕೀಯ ಪ್ರವೇಶಿಸಿರುವ ಸಿ.ಸದಾನಂದನ್‌ ಕೇರಳ ಬಿಜೆಪಿಯ ಪ್ರಮುಖ ನಾಯಕ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ನಾಯಕರು ಸ್ಥಾಪಿಸಿರುವ ‘ಭಾರತೀಯ ವಿಚಾರ ಕೇಂದ್ರಂ’ ನಡಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. 1994ರಲ್ಲಿ ಸಿಪಿಎಂ ಕಾರ್ಯಕರ್ತರು ನಡೆಸಿದ ಹಲ್ಲೆಯಲ್ಲಿ ಸದಾನಂದನ್‌ ಅವರು ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾರೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ