ಮುಂಬೈ : ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರು ಇತ್ತೀಚಿಗೆ ಗ್ರಾಮೀಣ ಭಾಗದಲ್ಲಿ ಕಾರಿನಲ್ಲಿ ಸಂಚರಿಸುವಾಗ, ಗ್ರಾಮೀಣ ಮಕ್ಕಳ ಆಟಿಕೆ ಕಾರಿಗೆ ಬೆರಗಾಗಿದ್ದಾರೆ.
ಗ್ರಾಮೀಣ ಭಾಗದ ಯುವಕರ ಪ್ರತಿಭೆಗೆ ಸಚಿನ್ ಅವರು ಮನಸೋತಿದ್ದಾರೆ. ಅವರ ಸೃಜನಶೀಲತೆ, ಬಂಡಿಯ ವಿನ್ಯಾಸ ಮತ್ತು ಕಲ್ಪನೆಯ ಕುರಿತು ಮೆಚ್ಚಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೊವನ್ನು ಸಚಿನ್ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ವಿಡಿಯೊದಲ್ಲಿ ಯುವಕರು, ಚಿಕ್ಕ ಚಿಕ್ಕ ಮರದ ತುಂಡುಗಳನ್ನು ಬಳಸಿಕೊಂಡು ಅದಕ್ಕೆ ಸೈಕಲ್ ಚಕ್ರಗಳನ್ನು ಅಳವಡಿಸಿ, ಬಂಡಿ ತಯಾರಿಸಿದ್ದಾರೆ. ನಂತರ ಅದರ ಮೇಲೆ ಓರ್ವ ಯುವ ಕುಳಿತುಕೊಂಡರೆ, ಮತ್ತೋರ್ವ ಯುವಕ ಆ ಬಂಡಿಯನ್ನು ಎಳೆದುಕೊಂಡು ಓಡುತ್ತಿರುವುದನ್ನು ಕಾಣಬಹುದು.
ವಿಡಿಯೊವನ್ನು ಹಂಚಿಕೊಂಡ ಸಚಿನ್ ಅವರು 'ಭಾರತದ ಹಳ್ಳಿಯಲ್ಲಿ ಸಂಚರಿಸುವಾಗ ವಿಭಿನ್ನವಾದ ಕಾರು ಒಂದನ್ನು ನೋಡಿದೆ. ಆ ಕಾರಿನ ಬಗ್ಗೆ ನನಗೆ ಕುತೂಹಲ ಮೂಡಿತು. ಅದು ಯಾವುದೇ ಶೋ ರೂಮ್ನಿಂದ ಬಂದದ್ದಲ್ಲ. ಬದಲಾಗಿ ಮಕ್ಕಳ ಕಲ್ಪನೆಯಲ್ಲಿ ಮೂಡಿದ್ದಾಗಿತ್ತು' ಎಂದು ಬರೆದುಕೊಂಡಿದ್ದಾರೆ.
'ಹಳ್ಳಿ ಮಕ್ಕಳ ಈ ಬಂಡಿಯು ನಿಜಕ್ಕೂ ಅದ್ಭುತವಾಗಿದೆ. ಇದು ಅವರ ಪ್ರತಿಭೆಗೆ ಹಿಡಿದ ಕೈಗನ್ನಡಿಯಾಗಿದೆ. ಇಂತಹ ಅನ್ವೇಷಣೆಗಳಿಗೆ ಬೇಕಾಗಿರುವುದು ಅವಕಾಶ ಮಾತ್ರ' ಎಂದು ಸಚಿನ್ ಅವರು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೊಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಬಳಕೆದಾರರೊಬ್ಬರು 'ಈ ಮಕ್ಕಳು ಭವಿಷ್ಯದ ಇಂಜಿನಿಯರ್ಗಳು' ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು 'ಎಲ್ಲಾ ಕಾರುಗಳಿಗಿಂತ ಹೆಚ್ಚಿನ ಮೈಲೇಜ್ ನೀಡುತ್ತದೆ' ಎಂದು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.
