ಬೆಂಗಳೂರು: ರಾಜ್ಯ ಸರ್ಕಾರವು ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರಿಗೆ ಮಂಗಳವಾರ ಸಿಹಿ ಸುದ್ದಿ ನೀಡಿದ್ದು, ಕೆಎಸ್ಆರ್ಟಿಸಿ ಸೇರಿ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳ ನೌಕರರು, ಅಧಿಕಾರಿಗಳ ವೇತನ ಶೇಕಡಾ 12.5 ರಷ್ಟು ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಆರ್ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ(ಎನ್ಡಬ್ಲ್ಯೂಕೆಆರ್ಟಿಸಿ) ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ (ಕೆಕೆಆರ್ಟಿಸಿ) ನೌಕರರಿಗೆ ವೇತನ ಹೆಚ್ಚಳ 2025 ಏಪ್ರಿಲ್ 1 ರಿಂದಲೇ ಅನ್ವಯವಾಗಲಿದೆ.
ರಾಜ್ಯ ಸರ್ಕಾರ, ಸಾರಿಗೆ ನೌಕರರ ವೇತನವನ್ನು 2025 ಮಾರ್ಚ್ 31ರ ಮೂಲ ವೇತನದ ಮೇಲೆ ಶೇಕಡಾ 12.5 ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದು, ಹೊಸ ವೇತನವು 2026 ಜುಲೈ 1ರಿಂದ ಜಾರಿಗೆ ಬರಲಿದೆ ಎಂದು ಆದೇಶ ತಿಳಿಸಿದೆ.
1-04-2025 ರಿಂದ 30-06-2026 ರವರೆಗಿನ ವೇತನ ಪರಿಷ್ಕರಣೆ ಹೆಚ್ಚಳದ ಹಿಂಬಾಕಿ ಮೊತ್ತವನ್ನು ಮುಂದಿನ ದಿನಗಳಲ್ಲಿ ಪಾವತಿ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ನಾಲ್ಕು ಸಾರಿಗೆ ಸಂಸ್ಥೆಗಳ ಸುಮಾರು 1 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಗೆ ವೇತನ ಪರಿಷ್ಕರಣೆ ಅನ್ವಯವಾಗಲಿದೆ. ವೇತನ ಹೆಚ್ಚಳದಿಂದ ನಾಲ್ಕು ಸಾರಿಗೆ ನಿಗಮಗಳಿಗೆ ಪ್ರತಿ ತಿಂಗಳು ಸುಮಾರು 72 ಕೋಟಿ ರೂ.ಗಳಷ್ಟು, ಪ್ರತಿ ವರ್ಷ ಸುಮಾರು 873 ಕೋಟಿ ರೂ.ಗಳಷ್ಟು ಹೆಚ್ಚುವರಿ ವೆಚ್ಚವಾಗಲಿದೆ.
ಹಿಂಬಾಕಿ ಮೊದಲ ಕಂತಿನ ಹಣ ಜಮೆ
ಅಲ್ಲದೇ, ನೌಕರರಿಗೆ ಪಾವತಿಸಬೇಕಿದ್ದ ಹಳೆಯ ವೇತನ ಹಿಂಬಾಕಿಯ ಮೊದಲ ಕಂತಿನ ಹಣವನ್ನು ಸಹ ಬಿಡುಗಡೆ ಮಾಡಿದೆ. ಈಗಾಗಲೇ 2023 ರ ಮಾರ್ಚ್ ವೇತನ ಪರಿಷ್ಕರಣೆಯ 26 ತಿಂಗಳ ಹಿಂಬಾಕಿ ಮೊತ್ತ 1271.92 ಕೋಟಿ ರೂ. ಇದ್ದು, ಮೊದಲ ಕಂತಿನ ಹಣ ರೂ. 450 ಕೋಟಿಯನ್ನು ಸರ್ಕಾರವು ಬಿಡುಗಡೆ ಮಾಡಿದ್ದು, ನೌಕರರ ಖಾತೆಗಳಿಗೆ ಜಮಾ ಮಾಡಲಾಗಿದೆ. ಐದು ನಿಗಮಗಳಿಗೆ 2021ರ ಜನವರಿ 01 ರಿಂದ 2023ರ ಫೆಬ್ರವರಿ 28ರವರೆಗಿನ ಒಟ್ಟು 26 ತಿಂಗಳ ವೇತನ ಹಿಂಬಾಕಿ ಪಾವತಿಗೆ ಸರ್ಕಾರ ಈ ಹಿಂದೆ ಅನುಮೋದನೆ ನೀಡಿತ್ತು.
ಸಾರಿಗೆ ನೌಕರರ ವಿವಿಧ ಸಂಘಟನೆಗಳು ಶೇ.25 ರಷ್ಟು ವೇತನ ಪರಿಷ್ಕರಣೆಗೆ ಒತ್ತಾಯಿಸಿದ್ದವು. ವೇತನ ಪರಿಷ್ಕರಣೆ ಮಾಡದಿದ್ದರೆ ಮುಷ್ಕರ ಮಾಡಲು ನಿರ್ಧರಿಸಿದ್ದವು. ಸದ್ಯ ಸಾರಿಗೆ ಇಲಾಖೆ ಶೇ.12.5 ರಷ್ಟು ವೇತನ ಪರಿಷ್ಕರಿಸಿದೆ. ಆದರೆ, ಇದಕ್ಕೆ ಸಾರಿಗೆ ನೌಕರರ ಸಂಘಟನೆಗಳು ಈ ಹೆಚ್ಚಳಕ್ಕೆ ಸಹಮತ ಸೂಚಿಸಿಲ್ಲ.
