ಬೆಳಗಾವಿ: ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಆಗ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿದ್ದ ಹಾಲಿ ಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ತಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದರು. ಅದರಂತೆ ಇದೀಗ ತಮ್ಮ ಸಚಿವ ಸಂಪುಟದಲ್ಲಿ ಲಕ್ಷ್ಮಣ ಸವದಿ ಅವರಿಗೆ ಯೋಗ್ಯ ಸ್ಥಾನಮಾನ ನೀಡುವ ಮೂಲಕ ತಾವು ಕೊಟ್ಟ ಮಾತಿಗೆ ಬದ್ಧತೆ ತೋರಿಸಿದ್ದಾರೆ. ಈ ಮೂಲಕ ಡಿ.ಕೆ. ಶಿವಕುಮಾರ್ ಅವರು ಲಕ್ಷ್ಮಣ ಸವದಿ ಅವರಿಗೆ ಕೊಟ್ಟ ಮಾತಿಗೆ ತಪ್ಪದಂತೆ ನಡೆದುಕೊಂಡಿದ್ದಾರೆ.
ಲಕ್ಷ್ಮಣ ಸವದಿ ಅವರು ಅತ್ಯಂತ ಪ್ರಭಾವಿ ಹಾಗೂ ಸಂಘಟನೆಯಲ್ಲಿ ಹೆಸರು ಮಾಡಿದ ನಾಯಕರಾಗಿದ್ದಾರೆ. ಈ ಹಿಂದೆ ಬಿಜೆಪಿ ಆಡಳಿತದಲ್ಲಿದ್ದಾಗ ಅನೇಕ ಉಪಚುನಾವಣೆಗಳು ನಡೆದಿದ್ದವು. ಅಂದಿನ ಸಂದರ್ಭದಲ್ಲಿ ಆಗ ಬಿಜೆಪಿಯಲ್ಲಿದ್ದ ಅವರಿಗೆ ಆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ತರುವಲ್ಲಿ ಉಸ್ತುವಾರಿಯನ್ನಾಗಿ ನಿಯೋಜಿಸಲಾಗಿತ್ತು. ಸಾಕಷ್ಟು ಪೂರ್ವ ತಯಾರಿ ಮತ್ತು ತಮ್ಮಲ್ಲಿರುವ ಸಂಘಟನಾತ್ಮಕ ಚಾತುರ್ಯತೆಯನ್ನು ಬಳಸಿಕೊಂಡು ಅವರು ಬಿಜೆಪಿಗೆ ಗೆಲುವು ತಂದುಕೊಡುತ್ತಿದ್ದರು. ಈ ಮೂಲಕ ಉಪಚುನಾವಣೆಗಳ ಗೆಲುವಿನ ಸರದಾರ ಎಂದು ಲಕ್ಷ್ಮಣ ಸವದಿ ಅವರು ಕರೆಸಿಕೊಂಡಿದ್ದು ಇತಿಹಾಸ.
ಈ ಸಲ ಸಚಿವ ಸಂಪುಟ ಸೇರಲು ಕಾಂಗ್ರೆಸ್ ಶಾಸಕರ ನಡುವೆ ಸಾಕಷ್ಟು ದೊಡ್ಡ ಮಟ್ಟದ ಪೈಪೋಟಿಯೇ ನಡೆದಿತ್ತು. ಈ ಪೈಪೋಟಿ ನಡುವೆ ಡಿ.ಕೆ.ಶಿವಕುಮಾರ್ ನೇತೃತ್ವದ ಸಂಪುಟದಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಅಥಣಿ ಕ್ಷೇತ್ರದ ಪ್ರಭಾವಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಯಶಸ್ವಿಯಾಗಿದ್ದಾರೆ. ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸಂಪುಟದಲ್ಲಿ ಸತೀಶ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳಕರ ಸಚಿವರಾಗಿದ್ದರು. ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಸತೀಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ಸಿಕ್ಕಿತ್ತು.
ಸಂಪುಟ ವಿಸ್ತರಣೆ ವೇಳೆ ಮಂತ್ರಿ ಸ್ಥಾನ ಪಡೆಯಲು ಶಾಸಕರಾದ ಲಕ್ಷ್ಮೀ ಹೆಬ್ಬಾಳಕರ, ಅಶೋಕ ಪಟ್ಟಣ, ಲಕ್ಷ್ಮಣ ಸವದಿ, ಮಹಾಂತೇಶ ಕೌಜಲಗಿ ಮತ್ತಿತರರು ಪ್ರಯತ್ನ ನಡೆಸಿದ್ದರು. ಆದರೆ,
ಈ ಪೈಪೋಟಿಯಲ್ಲಿ ಪ್ರಭಾವಿ ನಾಯಕರ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿ ಮಂತ್ರಿ ಸ್ಥಾನ ಪಡೆಯುವಲ್ಲಿ ಪ್ರಭಾವಿ ಜನನಾಯಕ ಲಕ್ಷ್ಮಣ ಸವದಿ ಸಫಲವಾಗಿದ್ದಾರೆ.
ಲಕ್ಷ್ಮಣ ಸವದಿ ಅವರು ಈ ಮೊದಲು ಬಿಜೆಪಿಯಿಂದ 2004, 2008, 2013 ಹಾಗೂ ಕಾಂಗ್ರೆಸ್ ಪಕ್ಷದಿಂದ 2023ರ ವಿಧಾನಸಭೆ ಚುನಾವಣೆಗಳಲ್ಲಿ ಅಥಣಿ ಕ್ಷೇತ್ರದಿಂದ ಗೆದ್ದಿದ್ದಾರೆ. ಒಂದು ಬಾರಿ ವಿಧಾನ ಪರಿಷತ್ ಸದಸ್ಯರಿದ್ದಾಗ ಉಪಮುಖ್ಯಮಂತ್ರಿ ಆಗಿದ್ದರು. ಈ ಮೂಲಕ ಅಂದಿನ ಬಿಜೆಪಿ ಸರಕಾರದಲ್ಲಿ ಅವರಿಗೆ ಉನ್ನತ ಸ್ಥಾನಮಾನ ನೀಡಲಾಗಿತ್ತು. ಬಿಜೆಪಿಯಲ್ಲಿ ಭವಿಷ್ಯದ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ದೃಷ್ಟಿಯಿಂದ ಈ ಜನನಾಯಕನಿಗೆ ಅಂದು ಉನ್ನತ ಸ್ಥಾನಮಾನ ನೀಡಲಾಗಿತ್ತು. ಸಹಕಾರ, ಕೃಷಿ ಹಾಗೂ ಸಾರಿಗೆ ಸಚಿವರಾಗಿ ಕೆಲಸ ಮಾಡಿದ ಅಪಾರ ಅನುಭವವಿದೆ. ಹೀಗಾಗಿ ಯಾವುದೇ ಖಾತೆಯನ್ನು ಕೊಟ್ಟರು ಲಕ್ಷ್ಮಣ ಸವದಿ ಅವರು ಆ ಖಾತೆಯಲ್ಲಿ ಅತ್ಯಂತ ಸಮರ್ಥರಾಗಿ ಕೆಲಸ ಮಾಡುತ್ತಾರೆ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ. ಒಟ್ಟಾರೆ ತಡವಾಗಿ ಆದರೂ ಲಕ್ಷ್ಮಣ ಸವದಿ ಅವರಲ್ಲಿರುವ ನಾಯಕತ್ವ ಮತ್ತು ಚಾಣಾಕ್ಷತೆ ಗಮನಿಸಿ ಕಾಂಗ್ರೆಸ್ ಹೈಕಮಾಂಡ್ ಅವರಿಗೆ ಸಚಿವ ಸ್ಥಾನ ನೀಡಿರುವುದು ನಿಜಕ್ಕೂ ಅಭಿನಂದನೀಯ. ಅದರಲ್ಲೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರಾಬಲ್ಯ ಹೊಂದಿರುವ ಗಾಣಿಗ ಸಮಾಜಕ್ಕೆ ಕಾಂಗ್ರೆಸ್ ಪಕ್ಷ ನ್ಯಾಯ ಒದಗಿಸಿ ಕೊಟ್ಟಂತಾಗಿದೆ.