ಕಾರವಾರ : ಜನಪ್ರಿಯ ರಿಯಾಲಿಟಿ ಶೋ ‘ಕಾಮಿಡಿ ಕಿಲಾಡಿಗಳು’ ಮೂಲಕ ರಾಜ್ಯಕ್ಕೆ ಪರಿಚಿತರಾಗಿದ್ದ ಕಲಾವಿದ ಚಂದ್ರಶೇಖರ ಸಿದ್ದಿ (31) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಚಿಮ್ಮಳ್ಳಿ ಗ್ರಾಮದ ಸಿದ್ದಿ ಸಮುದಾಯಕ್ಕೆ ಸೇರಿದ ಚಂದ್ರಶೇಖರ, ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಜ್ಯಾದ್ಯಂತ ಹೆಸರು ಮಾಡಿದ್ದರು. ನಿನಾಸಂನಲ್ಲಿ ನಾಟಕ ತರಬೇತಿ ಪಡೆದಿದ್ದ ಅವರು ಉತ್ತಮ ಯೋಗಪಟು ಕೂಡ ಆಗಿದ್ದರು
ಕಳೆದ 2-3 ತಿಂಗಳಿಂದ ಚಂದ್ರಶೇಖರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಈ ಕಾರಣಕ್ಕಾಗಿ ಅವರಿಗೆ ವೈದ್ಯೋಪಚಾರವನ್ನೂ ಕೊಡಿಸಲಾಗಿತ್ತು. ಜುಲೈ 31ರಂದು ಮಧ್ಯಾಹ್ನ, ಪತ್ನಿಯ ಜೊತೆ ಕಟ್ಟಿಗೆ ಗ್ರಾಮದಲ್ಲಿ ಕೆಲಸಕ್ಕೆ ಹೋಗಿದ್ದಾಗ, ಶೌಚಾಲಯಕ್ಕೆ ಹೋಗುವುದಾಗಿ ಹೇಳಿ ಹೋದ ಚಂದ್ರಶೇಖರ ವಾಪಸ್ ಬಂದಿರಲಿಲ್ಲ. ಇದರಿಂದ ಅವರನ್ನು ಹುಡುಕಿಕೊಂಡು ಹೋದಾಗ, ಅವರು ಸಮೀಪದ ಅರಣ್ಯದಲ್ಲಿ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹ*ತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕಲಾವಿದ ಚಂದ್ರಶೇಖರ ಅವರ ಅಕಾಲಿಕ ನಿಧನಕ್ಕೆ ಹಿತೈಷಿಗಳು, ಅಭಿಮಾನಿಗಳು ಆಘಾತ ವ್ಯಕ್ತಪಡಿಸಿದ್ದಾರೆ.