ಬೆಳಗಾವಿ : ಸರ್ವ ಸಮಾನತೆಗಾಗಿ ಹೋರಾಡಿದ ಬಸವಣ್ಣನವರು ನಮ್ಮ ನಾಡಿನ ಸಾಂಸ್ಕೃತಿಕ ನಾಯಕ, ಅವರು ಈ ನಾಡಿನ ಸ್ಫೂರ್ತಿಯ ಸೆಳೆ ಹಾಗೂ ಸ್ವಾಭಿಮಾನದ ಪ್ರತೀಕ. ಅವರ ಕಂಚಿನ ಪ್ರತಿಮೆ ಬೆಳಗಾವಿ ಹೃದಯಭಾಗದಲ್ಲಿ ಅನಾವರಣಗೊಳ್ಳುತ್ತಿರುವುದು ಹೆಮ್ಮೆ ಎನಿಸುತ್ತಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.
ಗೋವಾವೇಸ್ದ ಬಸವೇಶ್ವರ ಉದ್ಯಾನವನಕ್ಕೆ ಸೊಲ್ಲಾಪುರದಿಂದ ಆಗಮಿಸಿದ ಬಸವಣ್ಣನವರ ಕಂಚಿನ ಪ್ರತಿಮೆಗೆ ಪೂಜೆ ನೆರವೇರಿಸಿ ಮಾತನಾಡಿದರು. ಬೆಳಗಾವಿ ಬಸವೇಶ್ವರ ಸರ್ಕಲ್ದಲ್ಲಿ ಮೊದಲಿನ ಪ್ರತಿಮೆ ಶಿಥಿಲಗೊಂಡಿತ್ತು ಹಾಗಾಗಿ ನೂತನ ಬಸವ ಪ್ರತಿಮೆ ಮಹಾನಗರ ಪಾಲಿಕೆಯ ಅನುದಾನದಲ್ಲಿ ಸಿದ್ಧಗೊಂಡಿದೆ. ಬೆಳಗಾವಿಯಲ್ಲಿ ಬಸವಣ್ಣನವರ ಕಂಚಿನ ಪ್ರತಿಮೆ ಅನಾವರಣಗೊಳ್ಳುತ್ತಿರುವುದು ಹರ್ಷತಂದಿದೆ. ಸಮಸ್ತ ಬಸವಾಭಿಮಾನಿಗಳ ಕನಸು ಸಾಕಾರಗೊಂಡಿದೆ ಎಂದು ಹೇಳಿದರು.
ಇದಕ್ಕೆ ಸಹಾಯ ಸಹಕಾರಗಳನ್ನು ನೀಡಿದ ಸ್ಥಳೀಯ ಶಾಸಕ ಅಭಯ ಪಾಟೀಲ, ಮಹಾನಗರ ಪಾಲಿಕೆಗೆ ಧನ್ಯವಾದಗಳನ್ನು ಅರ್ಪಿಸಿದ ಅವರು, ಶೀಘ್ರವಾಗಿ ಉದ್ಯಾನದ ಕಾಮಗಾರಿಯನ್ನು ಪೂರ್ಣಗೊಳಿಸಿ ಬಸವಣ್ಣನವರ ಈ ಪ್ರತಿಮೆಯ ಪ್ರಾಣ ಪ್ರತಿಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.
ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಮಾತನಾಡಿ, ಎಸ್.ವಿ.ಬೆಂಬಳಗಿ ಹಾಗೂ ಅನೇಕ ಹಿರಿಯರ ಪ್ರಯತ್ನದಿಂದ ಇಲ್ಲಿ ಬಸವಣ್ಣನವರ ಪ್ರತಿಮೆಯನ್ನು ಅನಾವರಣಗೊಳಿಸಲಾಗಿತ್ತು. ಅದು ಶಿಥಿಲಗೊಂಡ ಕಾರಣ ನೂತನ ಕಂಚಿನ ಪ್ರತಿಮೆಗಾಗಿ ಡಾ.ಪ್ರಭಾಕರ ಕೋರೆಯವರ ನೇತೃತ್ವದಲ್ಲಿ ಮಹಾಸಭೆಯು ಮಹಾನಗರ ಪಾಲಿಕೆ ಹಾಗೂ ಶಾಸಕ ಅಭಯ ಪಾಟೀಲ ಅವರ ಮೂಲಕ ಕೇಳಿಕೊಂಡಾಗ ಸ್ಪಂದಿಸಿ ಸಹಾಯಹಸ್ತ ನೀಡಿದರು. ಸೊಲ್ಲಾಪುರದಲ್ಲಿ 15 ಅಡಿ ಎತ್ತರದ ಪ್ರತಿಮೆ ಸಿದ್ಧಗೊಂಡು ಎರಡು ಮೂರು ವರ್ಷಗಳಾದರೂ ಕಾರಣಾಂತರಗಳಿಂದ ಬೆಳಗಾವಿಗೆ ತರಲು ಸಾಧ್ಯವಾಗಿರಲಿಲ್ಲ. ಇಂದು ಬಸವಣ್ಣ ಕಾಲ ಕೂಡಿಸಿ ಕೊಟ್ಟಿದ್ದಾನೆ. ಪ್ರತಿಮೆ ಇಲ್ಲಿ ಅನಾವರಣಗೊಂಡಿದ್ದು ಹರ್ಷತಂದಿದೆ ಎಂದು ಹೇಳಿದರು.
ಉಪಾಧ್ಯಕ್ಷ, ಹಿರಿಯ ನ್ಯಾಯವಾದಿ ಎಂ.ಬಿ.ಜೀರಲಿ ಮಾತನಾಡಿ, ಬಸವಣ್ಣನವರ ಕಂಚಿನ ಪ್ರತಿಮೆಯನ್ನು ಇಲ್ಲಿ ಪ್ರತಿಷ್ಠಾಪಿಸಬೇಕೆಂಬ ಇಚ್ಛಾಶಕ್ತಿ ಇಂದು ಸಾಕಾರಗೊಂಡಿದೆ. ಈ ನಾಡಿನ ಸಾಂಸ್ಕೃತಿಕ ವಲಯಕ್ಕೆ ಬಸವಣ್ಣನವರ ಕೊಡುಗೆ ಬಹುದೊಡ್ಡದು. ಅವರ ಸಂದೇಶಗಳು ವಿಶ್ವಮಾನ್ಯವೆನಿಸಿವೆ. ಈ ನಿಟ್ಟಿನಲ್ಲಿ ಯುವಜನಾಂಗಕ್ಕೆ ಬಸವಣ್ಣನವರ ಪ್ರತಿಮೆ ಆದರ್ಶವೆನಿಸಲಿದೆ. ಸಹಾಯ ಸಹಕಾರಗಳನ್ನು ನೀಡಿದ ಎಲ್ಲರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.
ಡಾ.ಎಚ್.ಬಿ.ರಾಜಶೇಖರ, ಚಂದ್ರಶೇಖರ ಬೆಂಬಳಗಿ, ಬಾಲ ಚಂದ್ರಬಾಗಿ, ಆರ್.ಪಿ.ಪಾಟೀಲ, ಡಾ.ಎಸ್.ಎಂ. ದೊಡಮನಿ, ಚೇತನ ಅಂಗಡಿ, ವಿದ್ಯಾ ಗೌಡರ, ಸರೋಜನಿ ನಿಶಾನದಾರ, ವಿರುಪಾಕ್ಷ ನಿಶಾನದಾರ, ಸೋಮಲಿಂಗ ಮಾವಿನಕಟ್ಟಿ, ವಿ.ಕೆ.ಪಾಟೀಲ, ಜ್ಯೋತಿ ಬಾದಾಮಿ, ರಮೇಶ ಕಳಸಣ್ಣನವರ, ಜ್ಯೋತಿ ಬದಾಮಿ, ಶೈಲಜಾ ಸಂಸುದ್ದಿ, ಸಂಜೀವ ಜಮಖಂಡಿ, ಬಾಬಣ್ಣ ಕಿತ್ತೂರ ಮೂರ್ತಿಕಾರ ಸಾಗರ ರಾಮಪುರೆ ಮಹಾಸಭೆಯ ಪದಾಧಿಕಾರಿಗಳು, ನೇಕಾರ, ಉಪ್ಪಾರ, ಹಡಪದ, ಜಂಗಮ, ಕುರುವಿನಶೆಟ್ಟಿ ಸಮಾಜದ ಬಸವ ಭಕ್ತರು, ವಿವಿಧ ಲಿಂಗಾಯತ ಸಂಘಟನೆಗಳು ಪ್ರಮುಖರು, ಶಹಾಪುರ ಅಕ್ಕನ ಬಳಗದ ಶರಣೆಯರು, ಉಪಸ್ಥಿತರಿದ್ದರು. ಕೆಎಲ್ಇ ಸಂಗೀತ ಶಾಲೆಯ ಡಾ.ಸುನೀತಾ ಪಾಟೀಲ ಹಾಗೂ ಸಂಗಡಿಗರು ವಚನ ಪ್ರಾರ್ಥನೆ ಮಾಡಿದರು.
