ಬೀಡ್: ಮಗಳ ಶಿಕ್ಷಣಕ್ಕಾಗಿ ಹಣ ಸಂಪಾದಿಸಬೇಕೆಂಬ ಸಂಕಲ್ಪದೊಂದಿಗೆ ಮ್ಯಾರಥಾನ್ಗೆ ಇಳಿದ ಮಹಾರಾಷ್ಟ್ರದ 47 ವರ್ಷದ ತಾಯಿಯೊಬ್ಬರು, ಸೀರೆ ಧರಿಸಿ ಬರಿಗಾಲಿನಲ್ಲೇ ಓಡಿ ಮೊದಲ ಸ್ಥಾನ ಪಡೆದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅಂಬಾಜೋಗೈನಲ್ಲಿ ನಡೆದ ‘ಅಮೃತ ದೌಡ್’ ಮ್ಯಾರಥಾನ್ ಸ್ಪರ್ಧೆಯಲ್ಲಿ ಸೀರೆ ಧರಿಸಿ ಓಡಿದ 47 ವರ್ಷದ ರಮಾಬಾಯಿ ರಣವೀರ ಅವರು, ಕ್ರೀಡಾ ಶೂ ಮತ್ತು ಟ್ರ್ಯಾಕ್ಸೂಟ್ ಧರಿಸಿದ್ದ ಯುವ ಸ್ಪರ್ಧಿಗಳನ್ನು ಹಿಂದಿಕ್ಕಿ 3 ಕಿ.ಮೀ. ಮ್ಯಾರಥಾನ್ನಲ್ಲಿ ಮೊದಲ ಸ್ಥಾನ ಪಡೆದು ₹3,000 ನಗದು ಬಹುಮಾನ ಗೆದ್ದಿದ್ದಾರೆ. ಈ ಬಹುಮಾನ ಮೊತ್ತವನ್ನು ಪುತ್ರಿಯರ ವಿದ್ಯಾಭ್ಯಾಸಕ್ಕೆ ಬಳಸುವುದಾಗಿ ಅವರು ತಿಳಿಸಿದ್ದಾರೆ.
ಭಾರತೀಯ ಶಿಕ್ಷಣ ಪ್ರಸಾರಕ ಸಂಸ್ಥೆಯ ಖೋಲೇಶ್ವರ ಶಿಕ್ಷಣ ಸಂಕೀರ್ಣದ ಅಮೃತ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಈ ಮ್ಯಾರಥಾನ್ ಅಂಬಾಜೋಗೈಯ ಛತ್ರಪತಿ ಶಿವಾಜಿ ಮಹಾರಾಜ್ ಚೌಕದಿಂದ ಆರಂಭವಾಗಿ ಭಾಗ್ಯನಗರ ಚೌಕದಲ್ಲಿ ಅಂತ್ಯಗೊಂಡಿತು. ಸ್ಥಳೀಯ ಯುವಕರು ಹಾಗೂ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ರಮಾಬಾಯಿ ಅವರು ಸೀರೆ ಮತ್ತು ಚಪ್ಪಲಿ ಧರಿಸಿಕೊಂಡು ಸಾಮಾನ್ಯ ಸ್ಪರ್ಧಿಯಂತೆ ಪಾಲ್ಗೊಂಡಿದ್ದರು.
ಓಟ ಆರಂಭವಾದ ಕೆಲವೇ ಹೊತ್ತಿನಲ್ಲಿ ಅವರ ಚಪ್ಪಲಿಗಳು ಜಾರಲು ಆರಂಭಿಸಿದ್ದರಿಂದ ವೇಗಕ್ಕೆ ಅಡ್ಡಿಯಾಯಿತು. ಆದರೆ ಅವರು ಅದರಿಂದ ಹಿಂಜರಿಯದೆ ಚಪ್ಪಲಿಗಳನ್ನು ಕೈಯಲ್ಲಿ ಹಿಡಿದುಕೊಂಡೇ ಬರಿಗಾಲಿನಲ್ಲೇ ಓಟ ಮುಂದುವರಿಸಿದರು. ರಸ್ತೆಯ ಮೇಲಿನ ಕಲ್ಲುಗಳು, ಸೀರೆ ಧರಿಸಿ ಓಡುವ ಸವಾಲು ಸೇರಿದಂತೆ ಹಲವು ಅಡಚಣೆಗಳು ಎದುರಾದರೂ ಗುರಿ ತಲುಪುವತ್ತ ಮಾತ್ರ ಗಮನಹರಿಸಿದ ಅವರು ಅಂತಿಮವಾಗಿ ಮೊದಲಿಗರಾಗಿ ಗುರಿ ಮುಟ್ಟಿದರು. ಕ್ರೀಡಾ ಬೂಟುಗಳು ಮತ್ತು ಟ್ರ್ಯಾಕ್ಸೂಟ್ಗಳನ್ನು ಧರಿಸಿದ್ದ ಹಲವಾರು ಯುವ ಸ್ಪರ್ಧಿಗಳನ್ನು ಹಿಂದಿಕ್ಕಲು ಅವರ ದೃಢಸಂಕಲ್ಪವೇ ಕಾರಣವಾಯಿತು.
ರಮಾಬಾಯಿ ಅವರ ಸಾಧನೆ ಕಂಡು ಪ್ರೇಕ್ಷಕರು ಮತ್ತು ಆಯೋಜಕರು ಭಾವುಕರಾದರು. ಪುತ್ರಿಯರ ಶಿಕ್ಷಣಕ್ಕಾಗಿ ಹಣ ಸಂಪಾದಿಸಲು ತಾಯಿ ತೋರಿದ ಹೋರಾಟದ ಮನೋಭಾವ ಮತ್ತು ದೃಢಸಂಕಲ್ಪಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ವಿಜಯದ ಪ್ರತೀಕವಾಗಿ ದೊರೆತ ಬಹುಮಾನದ ಮೊತ್ತವನ್ನು ಪುತ್ರಿಯರ ವಿದ್ಯಾಭ್ಯಾಸಕ್ಕೆ ಬಳಸಲು ಅವರು ನಿರ್ಧರಿಸಿದ್ದಾರೆ.
ಸ್ಪರ್ಧೆಯ ಅಧಿಕೃತ ಬಹುಮಾನ ₹3,000 ಆಗಿದ್ದರೂ, ತನಗೆ ಒಟ್ಟು ₹5,000 ನೀಡಲಾಗಿದೆ ಎಂದು ರಮಾಬಾಯಿ ರಣವೀರ ತಿಳಿಸಿದ್ದಾರೆ. “ಅವರು ನನಗೆ ₹3,000 ಬದಲಿಗೆ ₹5,000 ನೀಡಿದ್ದಕ್ಕೆ ತುಂಬಾ ಸಂತೋಷವಾಗಿದೆ. ಈ ಹಣವನ್ನು ನನ್ನ ಪುತ್ರಿಯರ ಶಿಕ್ಷಣ ಹಾಗೂ ಶೈಕ್ಷಣಿಕ ಸಾಮಗ್ರಿಗಳ ಖರೀದಿಗೆ ಬಳಸುತ್ತೇನೆ” ಎಂದು ಅವರು ಹೇಳಿದ್ದಾರೆ.
ಬರಿಗಾಲಿನಲ್ಲಿ ಓಡಿದ ರಮಾಬಾಯಿ ಅವರ ಈ ಸಾಧನೆಯ ವಿಡಿಯೊ ಮತ್ತು ಚಿತ್ರಗಳು ನಂತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅವರ ದೃಢಸಂಕಲ್ಪ ಮತ್ತು ಹೋರಾಟದ ಮನೋಭಾವಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಅಡುಗೆ ಕೆಲಸವೇ ಜೀವನಾಧಾರ
ಈ ಓಟದ ಹಿಂದೆ ಅತ್ಯಂತ ಭಾವನಾತ್ಮಕ ಕಾರಣವೊಂದು ಅಡಗಿದೆ. ಅವರ ಪತಿಯ ಆಕಸ್ಮಿಕ ನಿಧನದ ಬಳಿಕ ರಮಾಬಾಯಿ ಕುಟುಂಬದ ಏಕೈಕ ಆಧಾರಸ್ತಂಭವಾಗಿದ್ದಾರೆ. ಇಬ್ಬರು ಪುತ್ರಿಯರ ಶಿಕ್ಷಣ ಮತ್ತು ಕುಟುಂಬದ ನಿರ್ವಹಣೆಗೆ ಅವರು ಅಡುಗೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ.
ಅವರೊಬ್ಬ ಪುತ್ರಿ ಬಿ.ಎಸ್ಸಿ. ಪದವಿ ವ್ಯಾಸಂಗ ಮಾಡುತ್ತಿದ್ದು, ಮತ್ತೊಬ್ಬ ಪುತ್ರಿ ಪೂಜಾ ರಣವೀರ ಪೊಲೀಸ್ ನೇಮಕಾತಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ.
ಮ್ಯಾರಥಾನ್ನಲ್ಲಿ ಭಾಗವಹಿಸಲು ತಾಯಿಗೆ ಪ್ರೇರಣೆ ನೀಡಿದ್ದೇ ಮಗಳು ಪೂಜಾ. ಈ ಸ್ಪರ್ಧೆಯಲ್ಲಿ ಪೂಜಾ ಕೂಡ ಭಾಗವಹಿಸಿದ್ದು, ಎರಡನೇ ಸ್ಥಾನ ಪಡೆದಿದ್ದಾರೆ. ಈ ಕುರಿತು ಮಾತನಾಡಿದ ಅವರು, “ನನ್ನ ತಾಯಿ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದರೆ, ನಾನು ಎರಡನೇ ಸ್ಥಾನ ಪಡೆದೆ” ಎಂದು ಹೆಮ್ಮೆಯಿಂದ ತಿಳಿಸಿದ್ದಾರೆ.
“ನನ್ನ ತಾಯಿ ಎಂದಿಗೂ ಸೋಲು ಒಪ್ಪಿಕೊಳ್ಳುವುದಿಲ್ಲ. ಯಾವುದೇ ಸವಾಲು ಬಂದರೂ ಅದನ್ನು ಧೈರ್ಯವಾಗಿ ಎದುರಿಸುತ್ತಾರೆ. ಅವರ ಇದೇ ಗುಣವು ಜೀವನದ ಅನೇಕ ಕಷ್ಟಗಳನ್ನು ಜಯಿಸಲು ನೆರವಾಗಿದೆ” ಎಂದು ಪೂಜಾ ಹೇಳಿದ್ದಾರೆ.
ತಮ್ಮ ಕನಸುಗಳು ಮತ್ತು ತಾಯಿಯ ಶಿಕ್ಷಣ ಪ್ರೀತಿಯ ಕುರಿತು ಮಾತನಾಡಿದ ಪೂಜಾ, “ನನ್ನ ತಾಯಿಗೆ ಶಿಕ್ಷಣದ ಬಗ್ಗೆ ಅಪಾರ ಆಸಕ್ತಿ ಇದೆ. ಅವರು ಯಾವಾಗಲೂ ಓದಿನ ಮಹತ್ವವನ್ನು ನಮಗೆ ತಿಳಿಸುತ್ತಾರೆ. ನನ್ನ ತಂದೆ ಮುಂಬೈನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟರು. ನಾನು ಪೊಲೀಸ್ ಅಧಿಕಾರಿಯಾಗುವ ಕನಸು ಕಂಡಿದ್ದು, ಅದಕ್ಕಾಗಿ ಆ ನಿಟ್ಟಿನಲ್ಲಿ ವಿದ್ಯಾಭ್ಯಾಸ ಮುಂದುವರಿಸುತ್ತಿದ್ದೇನೆ” ಎಂದು ತಿಳಿಸಿದ್ದಾರೆ.