ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಘೋರ ಘಟನೆ ಬೆಳಕಿಗೆ ಬಂದಿದೆ. 5 ವರ್ಷದ ಬಾಲಕಿ ಮೇಲೆ ಮೌಲ್ವಿಯೋರ್ವ ಅತ್ಯಾಚಾರವೆಸಗಿರುವ ಘಟನೆ ನಡೆದಿದೆ. ಮಸೀದಿಯಲ್ಲಿ ಮೌಲ್ವಿಯೋರ್ವ ಹೇಯ ಕೃತ್ಯವೆಸಗಿದ್ದಾನೆ. ಸಿಸಿಟಿವಿ ದೃಶ್ಯ ವೈರಲ್ ಆದ ಬೆನ್ನಲ್ಲೇ ಪೊಲೀಸರು ಆರೋಪಿ ಮೌಲ್ವಿಯನ್ನು ಬಂಧಿಸಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ
ಮೌಲ್ವಿ ತುಫೇಲ್ ಅಹ್ಮದ್ ದಾದಾಫೀರ್ ನಗರ್ಚಿ (22) ಬಂಧಿತ ಆರೋಪಿ. ಎರಡು ವರ್ಷಗಳ ಹಿಂದೆ ಬಾಲಕಿ ಮೇಲೆ ಮೌಲ್ವಿ ಅತ್ಯಾಚಾರವೆಸಗಿದ್ದು, ಈ ಕುರಿತ ವಿಡಿಯೋ ವೈರಲ್ ಆಗಿತ್ತು. 2023ರ ಅಕ್ಟೋಬರ್ ಐದರಂದು ಘಟನೆ ನಡೆದಿದೆ. ಮಸೀದಿ ಪಕ್ಕದ ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕಿಯನ್ನು ಈತ ಪುಸಲಾಯಿಸಿ ಅತ್ಯಾಚಾರ ಎಸಗಿದ್ದ ದೃಶ್ಯ ಮಸೀದಿಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ತಗಡಿನ ಶೆಡ್ ನಿರ್ಮಾಣದ ಕೆಲಸ ಮಾಡುವ ಈಗ ಆಗಾಗ ಮಸೀದಿಗಳಿಗೆ ಹೋಗಿ ಧರ್ಮ ಬೋಧನೆಯನ್ನು ಸಹ ಮಾಡುತ್ತಿದ್ದ.
ಆದರೆ ತಾನು ಬಾಲಕಿಯ ಮೇಲೆ ಮಾಡಿರುವ ಅತ್ಯಾಚಾರದ ವಿಷಯವನ್ನು ಬಹಿರಂಗಪಡಿಸದಂತೆ ಪೋಷಕರಿಗೆ ತಡೆವೊಡ್ಡಿದ್ದ. ಮಸೀದಿಯವರು ದೂರು ನೀಡದಂತೆ ಬೆದರಿಕೆಯೊಡ್ಡಿದ್ದ ಕಾರಣಕ್ಕೆ ಪೋಷಕರು ಹೆದರಿ ಸುಮ್ಮನಾಗಿದ್ದರು.
ಕೊನೆಗೂ ಪತ್ತೆಯಾಗಿದ್ದು ಹೇಗೆ ಗೊತ್ತೇ ?
ಹಿಂದೂ ಸಂಘಟನೆ ಕಾರ್ಯಕರ್ತ
ಪುನೀತ್ ಕೆರೆಹಳ್ಳಿ ಎಂಬುವವರ ಟ್ವಿಟರ್ ನಲ್ಲಿ ವಿಡಿಯೋ ವೈರಲ್ ಆಗಿದ್ದು, ಬಾಲಕಿ ಪೋಷಕರಿಗೆ ಬೆದರಿಕೆ ಹಾಕಿರುವ ಕಾರಣಕ್ಕೆ ಪೋಷಕರು ದೂರು ನೀಡಲಾಗದ ಸ್ಥಿತಿಯಲ್ಲಿದ್ದಾರೆ. ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. ಕಾನೂನು ಕ್ರಮ ಕೈಗೊಂಡು ನ್ಯಾಯಕೊಡಿಸುವಂತೆ ಒತ್ತಾಯಿಸಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಮುರಗೋಡ ಠಾಣೆ ಪೊಲೀಸರು ಬಾಲಕಿ ಪೋಷಕರನ್ನು ಪತ್ತೆ ಮಾಡಿ ದೂರು ದಾಖಲಿಸಿಕೊಂಡು ಮೌಲ್ವಿಯನ್ನು ಬಂಧಿಸಿ ಹಿಂಡಲಗಾ ಜೈಲಿಗಟ್ಟಿದ್ದಾರೆ.
ಈ ಬಗ್ಗೆ ಪತ್ರಕರ್ತರಿಗೆ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಶಂಕರ್ ಗುಳೇದ ಅವರು, ಆರೋಪಿ ಬಾಲಕಿಯ ತಂದೆಗೆ ಬೆದರಿಕೆ ಹಾಕಿದ್ದಾನೆ. ಬಾಲಕಿಯ ತಂದೆ ಮಾತನಾಡಿದ ಆಡಿಯೋ ತುಣುಕು ಇದೆ. ಸಾಮಾಜಿಕ ಜಾಲತಾಣಗಳ ಮಾನಿಟರಿಂಗ್ ಕೋಶದವರು ಇದನ್ನೇ ಸಾಕ್ಷಿಯಾಗಿ ಇಟ್ಟುಕೊಂಡು ಕಾರ್ಯ ಪ್ರವೃತ್ತಗೊಂಡಾಗ ಅತ್ಯಾಚಾರ ವಿಷಯ ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದರು.
ಆರೋಪಿಯು ಮಸೀದಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಈ ನಡುವೆ ಪ್ರಕರಣ ನಡೆದ ಬೆನ್ನಲ್ಲೇ ಕೆಲವರು ತಮ್ಮಲ್ಲೇ ರಾಜಿ ಪಂಚಾಯಿತಿ ನಡೆಸಿ ಪ್ರಕರಣವನ್ನು ಮುಚ್ಚಿ ಹಾಕಿದ್ದರು. ಬಾಲಕಿಯ ಪಾಲಕರು ಸಹ ಈ ಬಗ್ಗೆ ಯಾವುದೇ ನೀಡಲಿಲ್ಲ. ಇತ್ತೀಚಿಗೆ ಬಾಲಕಿಯ ತಂದೆ ಈ ವಿಷಯವನ್ನು ಬೇರೊಬ್ಬರ ಜೊತೆ ಮೊಬೈಲ್ ನಲ್ಲಿ ಹೇಳಿಕೊಂಡಿದ್ದರು. ಇದರ ಆಡಿಯೋ ತುಣುಕು ಮತ್ತು ಸಿಸಿಟಿವಿ ತುಣುಕು ಸಂಗ್ರಹಿಸಿರುವ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಎಂಬುವರು ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಈ ನಿಟ್ಟಿನಲ್ಲಿ ಮುರಗೋಡ ಪೊಲೀಸ್ ಠಾಣೆಯ ಅಧಿಕಾರಿಗಳ ನೇತೃತ್ವದಲ್ಲಿ ಮೂರು ತಂಡ ರಚಿಸಿ ಬುಧವಾರದಂದು ಆರೋಪಿಯನ್ನು ಬಂಧಿಸಿ ವಶಕ್ಕೆ ಪಡೆಯಲಾಗಿದೆ. ತಂದೆ-ತಾಯಿ ಜೊತೆಗೆ ಜಗಳ ಮಾಡಿಕೊಂಡು ಚಿಕ್ಕಮ್ಮನ ಮನೆಗೆ ಬಂದಿದ್ದ ಆರೋಪಿ ಈ ದುಷ್ಕತ್ಯ ಎಸಗಿರುವುದಾಗಿ ಅವರು ತಿಳಿಸಿದರು.
ದೂರು ನೀಡುವಂತೆ ಪೊಲೀಸರು ಬಾಲಕಿಯ ಪಾಲಕರಿಗೆ ಮನವಿ ಮಾಡಿದ್ದಾರೆ. ಆದರೆ ಅವರು ನಿರಾಕರಣೆ ಮಾಡಿದ್ದಾರೆ. ಆದ್ದರಿಂದ ಕೊನೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕವನ್ನು ಸಂಪರ್ಕಿಸಿ ಅಂಗನವಾಡಿ ಕಾರ್ಯಕರ್ತೆಯ ಮೂಲಕ ದೂರು ದಾಖಲು ಮಾಡಿಕೊಳ್ಳಲಾಗಿದೆ. ಈ ಪ್ರಕರಣದ ಸಂಬಂಧ ಮಸೀದಿಯವರು ನೇರ ಆರೋಪಿಗಳಾಗಿಲ್ಲ. ಸಂಧಾನ ಮಾಡಿ ಪ್ರಕರಣ ಮುಚ್ಚಲು ಯತ್ನಿಸಿದವರನ್ನು ವಿಚಾರಿಸಲಾಗುತ್ತಿದೆ. 2024ರ ಜುಲೈ ಒಂದಕ್ಕಿಂತ ಮೊದಲು ಈ ಘಟನೆ ನಡೆದಿದ್ದರಿಂದ ಐಪಿಸಿ ಕಾಯ್ದೆ ಅನ್ನುವ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.