ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಿಣಿಯೆ ಗ್ರಾಮದಲ್ಲಿ ಶ್ರೀ ವಿಠ್ಠಲ ರುಕ್ಮಿಣಿ ದೇವಸ್ಥಾನದ ನೂತನ ಕಟ್ಟಡದ ಕಾಮಗಾರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭಾನುವಾರ ಭೂಮಿ ಪೂಜೆ ನೆರವೇರಿಸಿದರು.
ಸುಮಾರು 60 ಲಕ್ಷ ರೂ.ಗಳ ವೆಚ್ಚದಲ್ಲಿ ಈ ದೇವಸ್ಥಾನ ನಿರ್ಮಾಣವಾಗಲಿದೆ. ಗ್ರಾಮಸ್ಥರ ಬೇಡಿಕೆಯಂತೆ ವಿಶೇಷ ಪ್ರಯತ್ನ ಮಾಡಿ ಅನುದಾನ ಮಂಜೂರು ಮಾಡಿಸಲಾಗಿದೆ. ಈಗಾಗಲೆ ಕ್ಷೇತ್ರದಲ್ಲಿ 140ಕ್ಕೂ ಹೆಚ್ಚು ದೇವಸ್ಥಾನಗಳನ್ನು ಜೀರ್ಣೋದ್ಧಾರಗೊಳಿಸಲಾಗಿದೆ. ಕ್ಷೇತ್ರದಲ್ಲಿ ಓಡಾಡುವಾಗ ಯಾವುದೇ ಭಾಗಕ್ಕೆ ಹೋದರೂ ನೂತನ ದೇವಾಲಯಗಳನ್ನು ಕಣ್ತುಂಬಿಕೊಳ್ಳಲು ಸಂತೋಷವೆನಿಸುತ್ತಿದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಈ ಸಂದರ್ಭದಲ್ಲಿ ಹೇಳಿದರು.
ಈ ವೇಳೆ ಯುವರಾಜ ಕದಂ, ಮೃಣಾಲ್ ಹೆಬ್ಬಾಳಕರ್, ಸುರೇಶ ಡುಕರೆ, ಮಾರುತಿ ಡುಕರೆ, ಗ್ರಾಮ ಪಂಚಾಯತ್ ಅಧ್ಯಕ್ಷ ಹೇಮಂತ ಪಾಟೀಲ, ಡಾ.ಕೃಷ್ಣ ಪಾಟೀಲ, ಸುಭಾಷ್ ಡುಕರೆ, ರಾಮನಿಂಗ ದಳವಿ, ಮಹಾವೀರ ಕಿಣಗಿ, ವರ್ಷಾ ಡುಕರೆ, ನಿವೃತ್ತಿ ಡುಕರೆ, ಸಂತೋಷ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಚಾಲನೆ
ಬೆಳಗಾವಿ : ನಾವಗೆ ಗ್ರಾಮದ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭಾನುವಾರ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.
ನಾವಗೆಯ ಲಕ್ಷ್ಮೀ ನಗರ ನಿವಾಸಿಗಳ ಕೋರಿಕೆಯ ಮೇರೆಗೆ ಲಕ್ಷ್ಮೀ ನಗರ ಕ್ರಾಸ್ ನಲ್ಲಿ ಸುಮಾರು 35 ಲಕ್ಷ ರೂ.ಗಳ ವೆಚ್ಚದಲ್ಲಿ ಫೇವರ್ಸ್ಗಳನ್ನು ಅಳವಡಿಸಲಾಗುತ್ತಿದೆ. ಕ್ಷೇತ್ರದ ಜನರ ಯಾವುದೇ ಬೇಡಿಕೆಯನ್ನೂ ಕಡೆಗಣಿಸದೆ ಅಭಿವೃದ್ಧಿ ಯೋಜನೆ ಕೈಗೊಳ್ಳಲಾಗುತ್ತಿದೆ. ಹಾಗಾಗಿ ಇಡೀ ಕ್ಷೇತ್ರಾದ್ಯಂತ ನಿರಂತರವಾಗಿ ಕೆಲಸಗಳು ನಡೆಯುತ್ತಿವೆ. ಜನರು ಸಹ ಇದೇ ರೀತಿಯ ಸಹಕಾರವನ್ನು ಮುಂದುವರಿಸಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿನಂತಿಸಿದರು.
ಈ ವೇಳೆ ಪಾರ್ವತಿ ಗುರೆಣ್ಣವರ, ಅನಿತಾ ಕೊಡ್ಲಿ, ನೀಲಕಂಠ ಸತ್ಯಣ್ಣವರ, ಅಡಿವೆಪ್ಪ ಹಿರೇಮಠ ಹಾಗೂ ಇನ್ನುಳಿದ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.