ಮುಂಬೈ: ಸೋಮವಾರ ಬೆಳಿಗ್ಗೆ ಮುಂಬ್ರಾ ಬಳಿ ಕಿಕ್ಕಿರಿದು ತುಂಬಿದ್ದ ಮುಂಬೈ ಲೋಕಲ್ ರೈಲಿನಿಂದ 10 ಕ್ಕೂ ಹೆಚ್ಚು ಪ್ರಯಾಣಿಕರು ಕೆಳಕ್ಕೆ ಬಿದ್ದು, ಕನಿಷ್ಠ ಆರು ಮಂದಿ ಸಾವಿಗೀಡಾಗಿದ್ದಾರೆ ಮತ್ತು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ರೈಲು ಗರಿಷ್ಠ ಜನದಟ್ಟಣೆಯಿಂದ ತುಂಬಿರುವ ಸಮಯದಲ್ಲಿ ಇದು ಸಂಭವಿಸಿದೆ. ರೈಲು ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ತುಂಬಿಕೊಂಡು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಕಡೆಗೆ ಪ್ರಯಾಣಿಸುತ್ತಿತ್ತು ಎಂದು ಹೇಳಲಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ರೈಲು ತುಂಬಾ ಜನದಟ್ಟಣೆಯಿಂದ ಕೂಡಿತ್ತು, ಅನೇಕ ಪ್ರಯಾಣಿಕರು ಬಾಗಿಲುಗಳು ಮತ್ತು ಫುಟ್ಬೋರ್ಡ್ಗಳಲ್ಲಿ ನೇತಾಡಬೇಕಾಯಿತು. ಹಾಗೂ ರೈಲು ಮುಂಬ್ರಾ ಮತ್ತು ದಿವಾ ನಿಲ್ದಾಣಗಳ ನಡುವೆ ವೇಗವನ್ನು ಪಡೆದುಕೊಂಡ ವೇಳೆ ಈ ಘಟನೆ ಸಂಭವಿಸಿದೆ.
ತುರ್ತು ತಂಡಗಳು ಮತ್ತು ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಿದರು, ಅಲ್ಲಿ ಐದು ಜನರು ಬರುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ನಂತರ, ಮತ್ತೊಬ್ಬ ಗಾಯಗೊಂಡ ವ್ಯಕ್ತಿ ಸಾವಗೀಡಾದರು ಎಂದು ಹೇಳಲಾಗಿದ್ದು, ಸಾವಿನ ಸಂಖ್ಯೆ ಆರು ಎಂದು ರೈಲ್ವೆ ಮೂಲಗಳು ತಿಳಿಸಿವೆ.
ಇನ್ನೂ ಹಲವರು ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಅವರ ಸ್ಥಿತಿ ಗಂಭೀರವಾಗಿದೆ. ಮೃತರ ಗುರುತುಗಳು ಇನ್ನೂ ದೃಢಪಟ್ಟಿಲ್ಲ. ರೈಲ್ವೆ ಅಧಿಕಾರಿಗಳು ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ ಮತ್ತು ತಾಂತ್ರಿಕ ಸಮಸ್ಯೆಗಳು ಅಥವಾ ಹಠಾತ್ ಜರ್ಕ್ಗಳು ದುರಂತಕ್ಕೆ ಕಾರಣವೇ ಎಂದು ತನಿಖೆ ನಡೆಸುತ್ತಿದ್ದಾರೆ.
ಪ್ರತಿದಿನ ಲಕ್ಷಾಂತರ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ಮುಂಬೈನ ಉಪನಗರ ರೈಲು ಜಾಲದಲ್ಲಿ ಜನದಟ್ಟಣೆಯ ನಿರಂತರ ಸಮಸ್ಯೆಯನ್ನು ಈ ಘಟನೆ ಮತ್ತೊಮ್ಮೆ ತೋರಿಸಿದೆ.