ಬೆಳಗಾವಿ : ಮಹಾರಾಷ್ಟ್ರದ ಸಿಂಧದುರ್ಗ, ಕೊಲ್ಲಾಪುರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿನ ರೈತರಿಗೆ ತೊಂದರೆ ನೀಡುತ್ತಿರುವ ಕಾಡಾನೆಗಳನ್ನು ಸೆರೆಹಿಡಿಯಲು ನೆರವಾಗುವಂತೆ ಮಹಾರಾಷ್ಟ್ರದ ಅರಣ್ಯ ಇಲಾಖೆ ಈಗ ಕರ್ನಾಟಕದ ಅರಣ್ಯ ಇಲಾಖೆ ಕೇಳಿದೆ.
ಕೊಲ್ಲಾಪುರದ ಉಪ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ಚಂದಗಡ, ಸಿಂಧುದುರ್ಗ ಜಿಲ್ಲೆಯ ವೆಂಗುರ್ಲಾ ಮತ್ತು ಸಾವಂತವಾಡಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ವಲಯ ಅರಣ್ಯ ಅಧಿಕಾರಿಗಳು ಖಾನಾಪುರದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನೀತಾ ನಿಂಬರಗಿ, ವಲಯ ಅರಣ್ಯಾಧಿಕಾರಿ ಶ್ರೀಕಾಂತ ಪಾಟೀಲ ಬಳಿ ಚರ್ಚಿಸಿದ್ದಾರೆ.
ಕೊಲ್ಲಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ.ಜಿ.ಸಿಂಗ್ ಮಾತನಾಡಿ, ಮಹಾರಾಷ್ಟ್ರದ ಎರಡು ಜಿಲ್ಲೆಗಳ ಅರಣ್ಯ ಪ್ರದೇಶದಲ್ಲಿ 50 ಕ್ಕೂ ಹೆಚ್ಚು ಕಾಡಾನೆಗಳಿವೆ. ಅವು ರೈತರ ಜಮೀನಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿವೆ. ಕಾಡಿನಲ್ಲಿರುವ ಜನರಿಗೆ ಭಯ ಹುಟ್ಟಿಸುತ್ತಿವೆ. ಖಾನಾಪುರದಲ್ಲಿ ನಡೆಸಿದ ಕಾರ್ಯಾಚರಣೆ ಮಾದರಿಯಲ್ಲಿ ಮಹಾರಾಷ್ಟ್ರದ ಅರಣ್ಯದಲ್ಲೂ ಕಾರ್ಯಾಚರಣೆ ನಡೆಸಿ ಕಾಡಾನೆಗಳನ್ನು ಸೆರೆ ಹಿಡಿಯಲು ನೆರವಾಗಬೇಕು’ ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸುನೀತಾ ನಿಂಬರಗಿ ಅವರು, ಶಿವಮೊಗ್ಗದ ಸಕ್ರೆಬೈಲ್ ಆನೆ ಬಿಡಾರದಲ್ಲಿ ಪಳಗಿದ ಆನೆಗಳನ್ನು ತರಿಸಿ, ಮಹಾರಾಷ್ಟ್ರದ ಕಾಡಾನೆಗಳನ್ನು ಸೆರೆಹಿಡಿಯಲು ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧ. ಈ ವಿಷಯವಾಗಿ ಮಹಾರಾಷ್ಟ್ರ ಕರ್ನಾಟಕ ಸರ್ಕಾರದ ಜತೆಗೆ ಪತ್ರ ವ್ಯವಹಾರ ನಡೆಸಬೇಕು ಎಂದರು.
ಮಹಾರಾಷ್ಟ್ರದ ಅಧಿಕಾರಿಗಳು ಜಳಗಾ ಗ್ರಾಮದ ಶ್ರೀಗಂಧ ನೆಡುತೋಪು ವೀಕ್ಷಿಸಿದರು. ಬೆಳಗಾವಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ಟು ರಾಜಾ ಇದ್ದರು.