ಬೆಳಗಾವಿ : ಅಥಣಿ ತಾಲೂಕಿನಲ್ಲಿ ಸ್ವಚ್ಛ, ಸುಂದರ ಪರಿಸರ ನಿರ್ಮಿಸುವ ಸಂಕಲ್ಪದಿಂದ 25 ಸಾವಿರ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಯಕ್ಕಂಚಿ ಗ್ರಾಮದ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯಲ್ಲಿ ಪರಿಶಿಷ್ಟ ಪಂಗಡದ ವಿವಿಧ ಅಭಿವೃದ್ಧಿ ಯೋಜನೆಯಡಿ ₹2 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವ ಡೈನಿಂಗ್ ಹಾಲ್ ಮತ್ತು ಅಡುಗೆ ಕೋಣೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಅಥಣಿ ತಾಲ್ಲೂಕಿನ ಪ್ರತಿಯೊಂದು ಶಾಲೆಯ ಎಂಟನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಒಂದು ಸಸಿ ದತ್ತು ನೀಡಿ ಪಾಲನೆ, ಪೋಷಣೆ ಮಾಡುವ ಹೊಣೆಗಾರಿಕೆ ನೀಡಲಾಗಿದೆ. ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ವಸತಿ ಶಾಲೆಗಳಿಗೆ ಪ್ರಥಮ ಆದ್ಯತೆ ನೀಡಲಾಗಿದೆ. ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಸುಸಜ್ಜಿತ ಪ್ರಯೋಗಾಲಯ ಮಂಜೂರಾಗಿದೆ’ ಎಂದರು.
‘ಸಮಾಜ ಕಲ್ಯಾಣ ಇಲಾಖೆಯಿಂದ ನಡೆಸಲಾಗುವ ಈ ವಸತಿ ಶಾಲೆಯಲ್ಲಿ 300 ವಿದ್ಯಾರ್ಥಿಗಳು ಓದುತ್ತಿದ್ದು, ಮಾದರಿಯಾಗಿ ರೂಪಿಸಲಾಗುವುದು. ಹಳೆಯ ವಸತಿ ನಿಲಯದ ಒಳಗಡೆ ನೀರು ಬಾರದಂತೆ ಶೀಟ್ (ಛಾವಣಿ) ಹಾಕಿಸಲಾಗುವುದು’ ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಯಾದವಾಡ, ಜಿಲ್ಲಾ ಪಂಚಾಯಿತಿ ಸಹಾಯಕ ಅಭಿಯಂತರ ವೀರಣ್ಣ ವಾಲಿ, ಕೆಆರ್ಐಡಿಎಲ್ ಅಧಿಕಾರಿ ಸಂತೋಷ ಶೇಗುಣಸಿ, ಅಡಿವೆಪ್ಪ ಉಳ್ಳಾಗಡ್ಡಿ, ಪಿಎಸ್ಐ ಚಂದ್ರಕಾಂತ ಸಾಗನೂರ, ಒಗೆಪ್ಪ ಅರಟಾಳ ಮುಂತಾದವರು ಉಪಸ್ಥಿತರಿದ್ದರು.