ಐಗಳಿ :
ಅರಿವುಳ್ಳ ಜೀವಿ ಎಂದರೆ ಮನುಷ್ಯ ಮಾತ್ರ. ಶರಣ, ಋುಷಿ-ಮುನಿಗಳ ಸಂಗದಲ್ಲಿದ್ದರೇ ಯಾವ ಅರಮನೆಯೂ ಬೇಡ ಎಂದೆನಿಸುವುದು. ಹಾಗಾಗಿ ಗುರುವಿನ ವಾಣಿಯಿಂದ ಸುಖ, ಶಾಂತಿ ಪಡೆದು ಒಳ್ಳೆಯ ಜೀವನ ಸಾಗಿಸಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ನಂದಗಾಂವ ಗ್ರಾಮದಲ್ಲಿ ಜರುಗಿದ ಅವಜೀಕರ ಮಹಾರಾಜರ 23ನೇ ಪುಣ್ಯರಾಧನೆ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೃತ್ತಿಯಾವುದಾದರೂ ನಿಷ್ಠೆ, ಶ್ರದ್ಧೆಯಿಂದ ಮಾಡಬೇಕು. ನಾವು ನೀವೆಲ್ಲರೂ ಇಂತಹ ಸಂತ್ಸಂಗದಲ್ಲಿ ಪಾಲ್ಗೊಂಡು ಪುನಿತರಾಗೋಣ. ಮಾನವ ಜನ್ಮ ಸಿಗುವುದು ದುರ್ಲಬವಾಗಿದೆ.
ಈ ಜನ್ಮಕ್ಕೆ ಬಂದ ಮೇಲೆ ಧಾನ, ಧರ್ಮ ಮಾಡಿ ಸತ್ಕಾರ್ಯಗಳಲ್ಲಿ ತೊಡಗಬೇಕು. ನೊಂದವರ ಕಣ್ಣೀರು ಒರೆಸಲು ಮನ ಮಿಡಿಯುತ್ತಿರಬೇಕು ಎಂದರು. ಹುಟ್ಟಿದ ಮನುಷ್ಯ ಸಾಯಲೇಬೇಕು. ಆಯುಷ್ಯ, ಐಶ್ವರ್ಯ, ಅಧಿಕಾರ ಶಾಶ್ವತವಲ್ಲ. ಹುಟ್ಟು ಸಾವುಗಳ ಮಧ್ಯ ಪುಣ್ಯ ಮಾಡಿದ ಮೇಲೆ ಮುಕ್ತಿ ಪಡೆಯುವುದೇ ಶಾಶ್ವತವಾಗಿ ಉಳಿಯುತ್ತದೆ. ಆಶ್ರಮಕ್ಕೆ ಮೂಲ ಭೂತ ಸೌಕರ್ಯ ಒದಗಿಸಲು ಎಲ್ಲ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಇಂಚಗೇರಿಯ ಪ.ಪೂ ರೇವಣಸಿದ್ಧ ಮಹಾರಾಜರು ಸಾನ್ನಿಧ್ಯ ವಹಿಸಿ ಮಾತನಾಡಿ, ಆಚರಣೆಯಿಲ್ಲದ ಮಾತಿಗೆ ಅರ್ಥವಿಲ್ಲ. ಇಂದು ಯುವಕರು ಅಧ್ಯಾತ್ಮದ ಹಾದಿಯಿಂದ ದೂರ ಸಾಗುತ್ತಿರುವುದು ಖೇದಕರ ಸಂಗತಿಯಾಗಿದೆ.
ಗುರುವಿನ ಗುಲಾಮನಾಗುವ ತನಕ ಮುಕ್ತಿ ಸಿಗಲಾರದು. ಶುದ್ಧ ಕಾಯಕ ಮಾಡಿದ ವ್ಯಕ್ತಿ ದೇವರಿಗೆ ಪ್ರೀಯನಾಗುತ್ತಾನೆ. ಗುರು ಹಿರಿಯರಿಗೆ ಗೌರವ ಕೊಡಬೇಕು. ಚಿಕ್ಕವರಾದರೂ ಒಳ್ಳೆಯ ಮಾತು ಹೇಳಿದರೇ ಆಲಿಸಬೇಕು ಎಂದರು. ಶೇಗುಣಸಿಯ ಡಾ.ಮಹಾಂತಪ್ರಭು ಸ್ವಾಮೀಜಿ ಆಶೀರ್ವಚನ ನೀಡಿ, ವಿಮಲಭ್ರಹ್ಮ ಎಂದರೆ ಶೂನ್ಯವಾಗಿದೆ. ಏನೂ ಇಲ್ಲದೇ ಇರುವುದಾಗಿದೆ. ಭಗವಂತ ದೊಡ್ಡ, ದೊಡ್ಡ ಕಟ್ಟಡಗಳಲ್ಲಿ ಇಲ್ಲ. ಭಕ್ತರ ಶ್ರದ್ಧೆ, ಭಕ್ತಿಯಲ್ಲಿ ಇದ್ದಾನೆ. ದೇವರಲ್ಲಿ ಪ್ರೀತಿ ಮಾಡುವವರಲ್ಲಿ ಅವರಿಗೆ ಗೊತ್ತಲ್ಲದೇ ಒಂದು ಶಕ್ತಿ ಪ್ರಾಪ್ತಿಯಾಗುತ್ತದೆ ಎಂದರು.
ಅವಜೀಕರ ಮಠದ ಪೀಠಾಧ್ಯಕ್ಷ ಮಹಾದೇವ ಮಹಾರಾಜರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶ್ರೀಮಠ ಬೆಳೆದು ಬಂದ ದಾರಿ ವಿವರಿಸಿದರು. ಅಪ್ಪಾಸಾಬ್ ಅಡಹಳ್ಳಿ ದಾಸಬೋಧ ವಾಚಿಸಿದರು. ಯಕ್ಕಂಚಿಯ ಗುರುಪಾದ ಸ್ವಾಮೀಜಿ, ಶೇಗುಣಸಿಯ ಹಣಮಂತ ಮಹಾರಾಜರು, ಅಡವಯ್ಯ ಸ್ವಾಮೀಜಿ, ಬಾಳು ಶರಣರು, ಲಕ್ಕಪ್ಪ ಶರಣರು, ಮಲ್ಲಪ್ಪ ಶರಣರು, ಪ್ರಕಾಶ ಮಹಾರಾಜರು, ಇಂದು ತಾಯಿ ಮಾತೋಶ್ರೀ, ಪ್ರಕಾಶ ಮಹಾರಾಜರು, ಶ್ರೀಶೈಲ ನಾರಗೊಂಡ, ಅಣ್ಣಪ್ಪ ಖೋತ, ಪುಷ್ಪಕುಮಾರ ಪಾಟೀಲ, ರಾಜಶೇಖರ ಟೋಪಗಿ, ಸಂಜು ಅವಕ್ಕನವರ ಸೇರಿದಂತೆ ಹಲವರು ಇದ್ದರು. ಆನಂದ ಕುಲಕರ್ಣಿ ಸ್ವಾಗತಿಸಿದರು. ಶಿವಲಿಂಗಯ್ಯ ಗುರುಸ್ವಾಮಿ ನಿರೂಪಿಸಿ, ವಂದಿಸಿದರು.