ಮೈಸೂರು: ಜಿಲ್ಲೆಯ ತಿ.ನರಸೀಪುರದಲ್ಲಿರುವ ತ್ರಿವೇಣಿ ಸಂಗಮದಲ್ಲಿ ಸೋಮವಾರ (ಫೆ.10) ಮೂರು ದಿನಗಳ ಕುಂಭಮೇಳ ಆರಂಭವಾಗಲಿದ್ದು, ಲಕ್ಷಾಂತರ ಭಕ್ತರು ಪುಣ್ಯಸ್ನಾನ ಮಾಡಲಿದ್ದಾರೆ.
ದಕ್ಷಿಣ ಪ್ರಯಾಗ ಎಂದೇ ಖ್ಯಾತಿ ಪಡೆದಿರುವ ತಿರುಮಕೂಡಲಿನಲ್ಲಿ ನಡೆಯುತ್ತಿರುವ 13ನೇ ಕುಂಭಮೇಳ ಇದಾಗಿದೆ. ಜೀವನದಿಗಳಾದ ಕಾವೇರಿ, ಕಪಿಲಾ ಹಾಗೂ ಗುಪ್ತಗಾಮಿನಿಯಾಗಿ ಹರಿಯುವ ‘ಸ್ಪಟಿಕ’ ನದಿಯ ಸಂಗಮದಲ್ಲಿ ಜನರು ಮಿಂದೇಳಲಿದ್ದಾರೆ.
ಜಿಲ್ಲಾಡಳಿತದ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಭಾನುವಾರವೂ ನದಿ ಸಂಗಮದಲ್ಲಿ ಭಕ್ತರು ಪುಣ್ಯಸ್ನಾನ ಮಾಡಿ, ಗುಂಜಾ ನರಸಿಂಹಸ್ವಾಮಿ, ಅಗಸ್ತೇಶ್ವರ ಸ್ವಾಮಿ ದೇಗುಲಗಳಲ್ಲಿ ಪೂಜೆ ಸಲ್ಲಿಸಿದರು.
ಸೋಮವಾರ ಬೆಳಿಗ್ಗೆ 9ಕ್ಕೆ ಅಗಸ್ತೇಶ್ವರ ಸ್ವಾಮಿ ದೇಗುಲದಲ್ಲಿ ಅನುಜ್ಞೆ, ಪುಣ್ಯಾಹ, ಗಣಹೋಮ, ಪೂರ್ಣಾಹುತಿ, ಅಭಿಷೇಕ, ಮಹಾಮಂಗಳಾರತಿ ನೆರವೇರಲಿದೆ. ಸಂಜೆ 5 ಗಂಟೆಗೆ ಧಾರ್ಮಿಕ ಸಭೆ, ಅತಿಥಿಗಳಿಂದ ಉದ್ಘಾಟನೆ ಮತ್ತು ಧ್ವಜಾರೋಹಣ ನೆರವೇರಲಿದೆ.
ನದಿ ತಟದಲ್ಲಿ ಸ್ವಾಮೀಜಿಗಳಿಗೆ ಕುಟೀರ ವ್ಯವಸ್ಥೆ ಮಾಡಲಾಗಿದ್ದು, ಸಾಧುಗಳು- ಮಠಾಧೀಶರಿಗೆ ನಡುಹೊಳೆ ಬಸಪ್ಪನ ಸನ್ನಿಧಿಯಲ್ಲಿ ಸ್ನಾನಕ್ಕೆ ಸ್ಥಳ ಮೀಸಲಿರಿಸಲಾಗಿದೆ. ಅತಿ ಗಣ್ಯರ ಸ್ನಾನಕ್ಕೆ ಪ್ರತ್ಯೇಕ ಸ್ಥಳವನ್ನು ನಿಗದಿ ಮಾಡಲಾಗಿದೆ.
12ರಂದು ಬೆಳಗ್ಗೆ 9ರಿಂದ 9.30ರೊಳಗೆ ಪವಿತ್ರ ಕುಂಭಸ್ನಾನ ನಡೆಯಲಿದ್ದು, ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ. ನದಿ ಪಾತ್ರದ ಹಲವೆಡೆ ಮುಳುಗುತಜ್ಞರು, ತೆಪ್ಪ- ದೋಣಿ ನಿಯೋಜಿಸಲಾಗಿದೆ. ಅಗ್ನಿಶಾಮಕ ದಳ ಹಾಗೂ ನೂರಾರು ಪೊಲೀಸರು ಸರ್ವಸನ್ನದ್ದರಾಗಿದ್ದಾರೆ. ಸರ್ಕಾರ ಕುಂಭಮೇಳಕ್ಕೆ ₹ 6 ಕೋಟಿ ಅನುದಾನ ಬಿಡುಗಡೆ ಮಾಡಿದೆ.