ಬೆಳಗಾವಿ : ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಕೆಲವು ಪ್ರಾಧಿಕಾರಗಳಿಗೆ ಅನುದಾನ ನೀಡಿದ ಸರ್ಕಾರ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರವನ್ನೇ ಕಡೆಗಣಿಸಿದೆ. ಈ ತಾರತಮ್ಯ ಖಂಡಿಸಿ ಮಾರ್ಚ್ 18 ರಂದು ಚನ್ನಮ್ಮನ ಕಿತ್ತೂರು ಪಟ್ಟಣವನ್ನು ಸಂಪೂರ್ಣ ಬಂದ್ ಮಾಡಲು, ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದಲ್ಲಿ ಮಂಗಳವಾರ ನಡೆದ ಸಭೆ ಒಕ್ಕೊರಲಿನಿಂದ ನಿರ್ಣಯ ತೆಗೆದುಕೊಂಡಿತು.
ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಚನ್ನಮ್ಮನ ವರ್ತುಲದಲ್ಲಿ ಅಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆಯವರೆಗೆ ಪ್ರತಿಭಟನೆ ನಡೆಸಲಾಗುವುದು. ಅನುದಾನ ಹಂಚಿಕೆಯಲ್ಲಿ ಕಿತ್ತೂರಿಗೆ ಆದ ಅನ್ಯಾಯ ಖಂಡಿಸಲಾಗುವುದು’ ಎಂದು ನೇತೃತ್ವ ವಹಿಸಿದ್ದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಘೋಷಿಸಿದರು.
ಕೆಲವು ಪ್ರಾಧಿಕಾರಿಗಳಿಗೆ ಹತ್ತಾರು ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಹೀಗಿರುವಾಗ, ಕಿತ್ತೂರು ಪ್ರಾಧಿಕಾರಕ್ಕೆ ಬಜೆಟ್ನಲ್ಲಿ ₹10 ಕೋಟಿಯೂ ಬೇಡವೇ ಎಂದು ಪ್ರಶ್ನಿಸಿದರು.
ಈ ಸಲದ ಬಜೆಟ್ನಿಂದ ಕಿತ್ತೂರಿನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಇಲ್ಲಿಯೂ ಪ್ರವಾಸೋದ್ಯಮ ಬೆಳೆಸಲು ಪಕ್ಷಾತೀತವಾಗಿ ಹೋರಾಟ ಮಾಡಬೇಕಿದೆ. ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಕಿತ್ತೂರಿಗೆ ಒಳ್ಳೆಯ ಕಾಲ ಬರುವುದಿಲ್ಲ. ಜಯದ ಛಲದೊಂದಿಗೆ ಎಲ್ಲರೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ವರ್ತಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸಾಣಿಕೊಪ್ಪ, ಮಾತನಾಡಿ, ಕಿತ್ತೂರಿಗೆ, ರಾಣಿ ಚನ್ನಮ್ಮನಿಗೆ ಮೊದಲಿನಿಂದಲೂ ಅನ್ಯಾಯ ಆಗುತ್ತಲೇ ಬಂದಿದೆ. ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಚನ್ನಮ್ಮ ಆಗಿದ್ದರೂ, ಝಾನ್ಸಿಯ ರಾಣಿ ಲಕ್ಷ್ಮಿಬಾಯಿ ಅವರನ್ನು ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಎಂದು ಘೋಷಿಸಲಾಗಿದೆ. ಪ್ರಾಧಿಕಾರಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನಕ್ಕಾಗಿ ಪಕ್ಷಾತೀತವಾಗಿ ನಾಡಿನ ಜನರು ಹೋರಾಟ ಮಾಡಿ, ಹಕ್ಕೊತ್ತಾಯ ಮಂಡಿಸಬೇಕು ಎಂದರು.
ನಿಚ್ಚಣಕಿಯ ಪಂಚಾಕ್ಷರಿ ಸ್ವಾಮೀಜಿ, ದೇಗುಲಹಳ್ಳಿ, ಅಂಬಡಗಟ್ಟಿಯ ಮಠದ ವೀರೇಶ್ವರ ಸ್ವಾಮೀಜಿ, ಕಾದರವಳ್ಳಿಯ ಮೌಲನಾ ಹಜರತ್ ತಸ್ವೀರಸಾಬ್ ಮುಜಾವರ್ ಅವರು, ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ನಿರ್ಧಾರ ಬೆಂಬಲಿಸಿ ಮಾತನಾಡಿದರು.
ಕಿತ್ತೂರು ನಾಡ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಜಗದೀಶ ವಸ್ತ್ರದ, ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಬಿ.ದಳವಾಯಿ, ಕಿತ್ತೂರು ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅಪ್ಪೇಶ ದಳವಾಯಿ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಹನುಮಂತ ಲಂಗೋಟಿ, ಗ್ರಾಮೀಣ ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ, ಚಂದ್ರಗೌಡ ಪಾಟಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.