ನವದೆಹಲಿ: ದೆಹಲಿ ಮುಖ್ಯಮಂತ್ರಿಯಾಗಿ ಅರವಿಂದ ಕೇಜ್ರಿವಾಲ್ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಆದರೆ, ಮದ್ಯದಂಗಡಿಗಳನ್ನು ತೆರೆಯುವ ಮೂಲಕ ಜನರ ಕೋಪಕ್ಕೆ ಗುರಿಯಾದರು ಎಂದು ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆಯೊಬ್ಬರು ರಾಷ್ಟ್ರ ರಾಜಧಾನಿಯ ಮುಖ್ಯಮಂತ್ರಿಯಾಗಿರುವುದು ಹೆಮ್ಮೆಯ ಸಂಗತಿ. ರೇಖಾ ಗುಪ್ತಾ ಅವರ ಉತ್ತಮ ಆಲೋಚನೆ ಮತ್ತು ಕಾರ್ಯಗಳಿಗೆ ಜನರು ಮತ ಹಾಕಿದ್ದಾರೆ ಎಂದಿದ್ದಾರೆ.
ಹಿಂದಿನ ಮುಖ್ಯಮಂತ್ರಿ(ಅರವಿಂದ ಕೇಜ್ರಿವಾಲ್) ಉತ್ತಮ ಕೆಲಸಗಳನ್ನು ಮಾಡುತ್ತಿದ್ದು, ಮೂರು ಬಾರಿ ದೆಹಲಿ ಮುಖ್ಯಮಂತ್ರಿಯಾದರು. ಅವರು ಉತ್ತಮ ಕೆಲಸ ಮಾಡುತ್ತಿದ್ದರಿಂದ ನಾನು ಅವರ ಬಗ್ಗೆ ಏನು ಮಾತನಾಡಿರಲಿಲ್ಲ. ಆದರೆ, ನಂತರದ ದಿನಗಳಲ್ಲಿ ಅವರು ನಿಧಾನವಾಗಿ ಮದ್ಯ ಮಾರಾಟ ಮಳಿಗೆಗಳನ್ನು ತೆರೆಯಲು ಮತ್ತು ಪರವಾನಗಿಗಳನ್ನು ನೀಡಲು ಪ್ರಾರಂಭಿಸಿದರು. ಇದು ನನಗೆ ಬೇಸರ ತಂದಿತ್ತು ಎಂದು ಹೇಳಿದ್ದಾರೆ. ಹಿಂದಿನಿಂದಲೂ ಮದ್ಯ ಸೇವನೆ ಮತ್ತು ಮಾರಾಟವನ್ನು ಅಣ್ಣಾ ಹಜಾರೆ ವಿರೋಧಿಸುತ್ತಾ ಬಂದಿದ್ದಾರೆ.
ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಜೈಲು ಪಾಲಾಗಿದ್ದ ಕೇಜ್ರಿವಾಲ್ ಅವರು ಜಾಮೀನಿನಡಿ ಹೊರಗೆ ಬಂದು ಚುನಾವಣೆ ಎದುರಿಸಿದ್ದರು. ಚುನಾವಣೆಯಲ್ಲಿ ಬಿಜೆಪಿ ಪರ್ವೇಶ್ ವರ್ಮಾ ಅವರ ಎದುರು ಸೋಲನುಭವಿಸಿದ್ದರು.
ಚುನಾವಣೆಯಲ್ಲಿ 48 ಸ್ಥಾನಗಳಲ್ಲಿ ಅಭೂತಪೂರ್ವ ಜಯಗಳಿಸಿದ್ದ ಬಿಜೆಪಿ, ರೇಖಾ ಗುಪ್ತಾ ಅವರನ್ನು ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆ ಮಾಡಿತ್ತು. ಗುರುವಾರ ಗುಪ್ತಾ ಅವರು ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.