ಬೆಳಗಾವಿ :
ರಾಜ್ಯ ಪ್ರವಾಸೋದ್ಯಮ ಇಲಾಖೆಯು ಕಳೆದ ವರ್ಷದ ರಾಜ್ಯೋತ್ಸವ ಸಂದರ್ಭದಲ್ಲಿ ಬಿಡುಗಡೆ ಮಾಡಿದ 50 ಲಕ್ಷ ರೂ. ಅನುದಾನದಲ್ಲಿ ಮಂಗಳವಾರ ತರಾತುರಿಯಲ್ಲಿ ರಾಜ್ಯೋತ್ಸವದ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಿರುವ ಬೆಳಗಾವಿ ಜಿಲ್ಲಾಧಿಕಾರಿಗಳ ಸರ್ವಾಧಿಕಾರಿ ಧೋರಣೆಯ ವಿರುದ್ಧ ಬೆಳಗಾವಿ ಅನೇಕ ಕನ್ನಡ ಪರ ಸಂಘಟನೆಗಳು ತೀವ್ರ ಆಕ್ರೋಶ, ಅಸಮಾಧಾನ ವ್ಯಕ್ತಪಡಿಸಿವೆ.
ಸೋಮವಾರ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಸಭೆ ಸೇರಿದ್ದ ಸಂಘಟನೆಗಳು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದವು.
ಬೆಳಗಾವಿ ಜನತೆಗಾಗಲಿ, ಮಾಧ್ಯಮಕ್ಕಾಗಲಿ
ರಸಮಂಜರಿ ಕಾರ್ಯಕ್ರಮದ ಬಗ್ಗೆ ಕಿಂಚಿತ್ತೂ
ಮಾಹಿತಿಯಿಲ್ಲ. ಕಳೆದ ಅಕ್ಟೊಬರ್ ನಲ್ಲಿ ಬೆಳಗಾವಿ ಕನ್ನಡ ಸಂಘಟನೆಗಳು ಬೆಂಗಳೂರಿನಲ್ಲಿ ಗಡಿ ಉಸ್ತುವಾರಿ ಸಚಿವ ಎಚ್. ಕೆ. ಪಾಟೀಲ ಅವರೊಂದಿಗೆ ಸಭೆ ನಡೆಸಿದ ಪರಿಣಾಮವಾಗಿ 50 ಲ. ರೂ. ಅನುದಾನ ಬಿಡುಗಡೆಯಾಗಿತ್ತು. ಈ ಅನುದಾನದಲ್ಲಿ ಬೆಳಗಾವಿ ಹಬ್ಬ ಕಾರ್ಯಕ್ರಮ ನಡೆಸಿ ಸಚಿವರಾದ ಎಚ್. ಕೆ. ಪಾಟೀಲ, ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ, ಹಿರಿಯ ಸಾಹಿತಿಗಳು ಮತ್ತು ಬೆಳಗಾವಿಯಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ ನಿವೃತ್ತ ಅಧಿಕಾರಿಗಳನ್ನು ಸನ್ಮಾನಿಸಲು ಕನ್ನಡ ಸಂಘಟನೆಗಳು ತೀರ್ಮಾನಿಸಿದ್ದವು. ಆದರೆ ಜಿಲ್ಲಾಧಿಕಾರಿಗಳು ಕನ್ನಡ
ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ
ತರಾತುರಿಯಿಂದ ರಸಮಂಜರಿ ಕಾರ್ಯಕ್ರಮವನ್ನು
ಆಯೋಜಿಸಿರುವದು ಖಂಡನೀಯವೆಂದು ಸಭೆಯಲ್ಲಿ ಮಾತನಾಡಿದ ಮುಖಂಡರು, ಸೋಮವಾರ ಮುಂಜಾನೆಯವರೆಗೂ
ಮಾಧ್ಯಮಗಳಿಗೂ ಈ ಕಾರ್ಯಕ್ರಮದ ಬಗ್ಗೆ
ಗೊತ್ತಿರಲಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದರು.
50 ಲ. ರೂ. ಆನುದಾನದ ದುಂದುವೆಚ್ಚ ಮಾಡುವ ಉದ್ದೇಶದಿಂದಲೇ ಜಿಲ್ಲಾಧಿಕಾರಿಗಳು ಕನ್ನಡ ಸಂಘಟನೆಗಳನ್ನು ದೂರವಿಟ್ಟು ಕಾರ್ಯಕ್ರಮ ನಡೆಸುತ್ತಿರುವದು ಸ್ಪಷ್ಟವಾಗಿದೆ ಎಂದು ಕನ್ನಡ
ಮುಖಂಡರು ಆರೋಪಿಸಿದರು.
ಕಾರ್ಯಕ್ರಮಕ್ಕೆ ಬೆಳಗಾವಿಗೆ ಬರಲು ತಮಗೆ ಸಾಧ್ಯವಾಗುವದಿಲ್ಲ ಎಂದು ಗಡಿ ಉಸ್ತುವಾರಿ ಸಚಿವ ಎಚ್. ಕೆ. ಪಾಟೀಲ ಅವರು ತಮಗೆ ತಿಳಿಸಿದ್ದಾಗಿ
ಅಶೋಕ ಚಂದರಗಿ ಸಭೆಗೆ ತಿಳಿಸಿದರು.
ಜಿಲ್ಲಾಧಿಕಾರಿಗಳ ನಡೆಯ ವಿರುದ್ಧ ಪ್ರತಿಭಟಿಸಿ ಕಾರ್ಯಕ್ರಮವನ್ನು ಬಹಿಷ್ಕರಿಸಲು ಸಭೆಯು
ನಿರ್ಧರಿಸಿತು.
ಕನ್ನಡ ಹೋರಾಟಗಾರರಾದ ಮಹಾದೇವ ತಳವಾರ, ಅಶೋಕ ಚಂದರಗಿ, ನಗರ ಸೇವಕ ರಮೇಶ ಸೊಂಟಕ್ಕಿ, ಶ್ರೀನಿವಾಸ ತಾಳೂಕರ, ವಾಜೀದ ಹಿರೇಕೋಡಿ,
ಬಲರಾಮ ಮಾಸೇನಟ್ಟಿ, ಮೈನೋದ್ದೀನ್ ಮಕಾನದಾರ, ದೇವೇಂದ್ರ ತಳವಾರ, ಮಹೇಶ ಶೀಗಿಹಳ್ಳಿ, ಶಿವು ದೇವುರ,
ಗೌಸ್ ಸನದಿ, ಸಂತೋಷ ತಳ್ಳಿಮನಿ, ನಾಗೇಶ ಕೊಪ್ಪದ, ಬಾಳೇಶ ಗುಡಗನಟ್ಟಿ ಹಾಗೂ ಪ್ರಕಾಶ ಮೂಕನವರ
ಮುಂತಾದವರು ಮಾತನಾಡಿದರು.


