ಬೆಳಗಾವಿ : ಕ್ಷೇತ್ರದ ಅಭಿವೃದ್ಧಿ ಜೊತೆಗೆ ಲೋಕಾಪುರದಿಂದ ಧಾರವಾಡಕ್ಕೆ ಸೇರುವ ನಿಯೋಜಿತ ರೈಲ್ವೆ ಮಾರ್ಗದ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.
ರಾಮದುರ್ಗದ ರೈಲ್ವೆ ಹೋರಾಟ ಕ್ರಿಯಾ ಸಮಿತಿ ಸದಸ್ಯರು ಭೇಟಿ ನೀಡಿದ ಸಂದರ್ಭದಲ್ಲಿ ಈ ವಿಷಯ ತಿಳಿಸಿದ ಅವರು, ಸವದತ್ತಿಯ ಯಲ್ಲಮ್ಮ ದೇವಸ್ಥಾನದ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಲ್ಲಿ ತಿರುಪತಿ ಮಾದರಿಯಲ್ಲಿ ಅಭಿವೃದ್ಧಿ ಮಾಡುವುದಾಗಿ ಹೇಳಿದರು.
ಈ ಭಾಗದ ಧಾರ್ಮಿಕ ಮತ್ತು ಐತಿಹಾಸಿಕ ಕ್ಷೇತ್ರಗಳ ವೀಕ್ಷಣೆಗೆ ಕೋಟಿಗೂ ಹೆಚ್ಚು ಜನ ಆಗಮಿಸುತ್ತಿದ್ದಾರೆ. ಇದನ್ನು ಅರಿತ ಕೇಂದ್ರ ರೈಲ್ವೆ ಸಚಿವರು ನೂತನ ರೈಲ್ವೆ ಮಾರ್ಗದ ಮರು ಸಮೀಕ್ಷೆ ಒಪ್ಪಿಗೆ ಸೂಚಿಸಿದ್ದಾರೆ. ಇದರಿಂದ ಲೋಕಾಪುರ, ರಾಮದುರ್ಗ, ಸವದತ್ತಿ ಮತ್ತು ಧಾರವಾಡಕ್ಕೆ ಹೋಗುವ ರೈಲ್ವೆ ಮಾರ್ಗ ಶೀಘ್ರದಲ್ಲಿ ಅನುಷ್ಠಾನಗೊಳ್ಳಲಿದೆ. ಇದಕ್ಕಾಗಿ ವಿಶೇಷ ಕಾಳಜಿ ವಹಿಸುವುದಾಗಿ ಅವರು ತಿಳಿಸಿದರು.
ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ, ರಾಮದುರ್ಗ ರೈಲ್ವೆ ಹೋರಾಟ ಕ್ರಿಯಾ ಸಮಿತಿ ಸದಸ್ಯರಾದ ಗೈಬು ಜೈನೆಖಾನ, ಮಹ್ಮದ್ಶಫಿ ಬೆಣ್ಣಿ, ಎಂ.ಕೆ. ಯಾದವಾಡ, ದಾದಾಪೀರ ಹಾಜಿ ಸೇರಿದಂತೆ ಅನೇಕರು ಇದ್ದರು.