ಬೆಳಗಾವಿ : ಬೆಳಗಾವಿ ಲೋಕಸಭಾ ಸದಸ್ಯ ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಶುಕ್ರವಾರ ಕೇಂದ್ರ ಕಾನೂನು ಸಚಿವ ಅರ್ಜುನ ರಾಮ್ ಮೇಘವಾಲ್ ಅವರನ್ನು ಸಂಸದ ಭವನದ ಅವರ ಕಚೇರಿಯಲ್ಲಿ ಭೇಟಿ ಮಾಡಿ, ಬೆಳಗಾವಿ ಬಾರ್ ಅಸೋಶಿಯೇಶನ್ ತನ್ನ ಅಸ್ತಿತ್ವದ 150 ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನಲೆಯಲ್ಲಿ 150 ( ನೂರೈವತ್ತು ವರ್ಷ) ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ಈ ಸಮಾರಂಭಕ್ಕೆ ಬೆಳಗಾವಿ ಬಾರ್ ಅಸೋಶಿಯೇಶನ್ ಅಧ್ಯಕ್ಷರ ಮನವಿಯಂತೆ ಬೆಳಗಾವಿಗೆ ಬರುವಂತೆ ವಿನಂತಿಸಿದರು.
150 ( ನೂರಾ ಐವತ್ತು ವರ್ಷ) ನೇ ವಾರ್ಷಿಕೋತ್ಸವ ಸಮಾರಂಭ ತಾತ್ಕಾಲಿಕವಾಗಿ ದಿನಾಂಕ: 4ನೇ ಅಕ್ಟೋಬರ್, 2025 ರಂದು ಆಯೋಜಿತಗೊಂಡಿರುತ್ತದೆ. ರಾಜ್ಯಾದ್ಯಂತ ಸುಮಾರು 20 ಸಾವಿರಕ್ಕೂ ಅಧೀಕ ಸಂಖ್ಯೆಯಲ್ಲಿ ವಕೀಲರ ಸಮೂಹ ಇದರಲ್ಲಿ ಭಾಗವಹಿಸಲಿದ್ದು, ಅದರಂತೆ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಸಹ ಭಾಗವಹಿಸಲಿರುವ ನಿರೀಕ್ಷೆ ಇದೆ, ಈ ಹಿನ್ನಲೆಯಲ್ಲಿ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವ ಬಗ್ಗೆ ಒಪ್ಪಿಗೆ ಸೂಚಿಸುವಂತೆ ಕೇಂದ್ರ ಕಾನೂನು ಮಂತ್ರಿಗಳಲ್ಲಿ ಸಂಸದ ಜಗದೀಶ ಶೆಟ್ಟರ್ ವಿನಂತಿಸಿದರು.
ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಕಾನೂನು ಸಚಿವರು, ಪ್ರಸ್ತಾಪಿತ ಸಮಾರಂಭದಲ್ಲಿ ಭಾಗವಹಿಸುವುದರ ಬಗ್ಗೆ ಸ್ಪಷ್ಟ ಭರವಸೆಯನ್ನು ನೀಡಿರುವ ಕುರಿತು ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದ ಜಗದೀಶ ಶೆಟ್ಟರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.