ಝಜ್ಜರ್: ಪ್ರಯಾಗರಾಜ ಮಹಾಕುಂಭ ಮೇಳದಲ್ಲಿ ತಮ್ಮ ವಿಶಿಷ್ಟ ಆಧ್ಯಾತ್ಮಿಕ ವ್ಯಕ್ತಿತ್ವದ ಮೂಲಕ ದೇಶದ ಗಮನ ಸೆಳೆದಿದ್ದ “ಐಐಟಿಯನ್ ಬಾಬಾ” ಖ್ಯಾತಿಯ ಅಭಯ್ ಸಿಂಗ್ ಈಗ ತಮ್ಮ ಮದುವೆಯ ಮೂಲಕ ಸುದ್ದಿಯಲ್ಲಿದ್ದಾರೆ. ಹರಿಯಾಣದ ಝಜ್ಜರ್ನಲ್ಲಿ ಸೋಮವಾರ ಪತ್ನಿಯೊಂದಿಗೆ ಕಾಣಿಸಿಕೊಂಡ ಅವರು, ತಮ್ಮ ವೈವಾಹಿಕ ಜೀವನದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನೆಲೆಸಿರುವ ಈ ದಂಪತಿ ಫೆಬ್ರವರಿ ತಿಂಗಳಲ್ಲಿ ವಿವಾಹವಾಗಿದ್ದಾರೆ.
ಫೆಬ್ರವರಿ 15 ರಂದು ಮಹಾಶಿವರಾತ್ರಿಯ ಶುಭ ಸಂದರ್ಭದಲ್ಲಿ ಹಿಮಾಚಲ ಪ್ರದೇಶದ ಅಘಂಜರ್ ಮಹಾದೇವ ದೇವಾಲಯದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಫೆಬ್ರವರಿ 19ರಂದು ಕಾನೂನುಬದ್ಧವಾಗಿ ನ್ಯಾಯಾಲಯದಲ್ಲಿ ವಿವಾಹವನ್ನು ನೋಂದಾಯಿಸಿಕೊಂಡಿದ್ದಾರೆ.
ಕರ್ನಾಟಕದ ನಂಟು
ಐಐಟಿಯನ್ ಬಾಬಾ” ಅಭಯ ಸಿಂಗ್ ಅವರ ಪತ್ನಿ ಪ್ರತೀಕಾ ಮೂಲತಃ ಕರ್ನಾಟಕದವರು. ವಿಶೇಷವೆಂದರೆ ಇವರು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದಾರೆ. ಅಭಯ ಅವರ ಪ್ರಾಮಾಣಿಕತೆ ಮತ್ತು ಸರಳ ವ್ಯಕ್ತಿತ್ವಕ್ಕೆ ಮಾರುಹೋದ ಪ್ರತೀಕಾ, ಕಳೆದ ಒಂದು ವರ್ಷದಿಂದ ಅವರ ಪರಿಚಯ ಹೊಂದಿದ್ದರು. ದಂಪತಿ ಪ್ರಸ್ತುತ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ವಾಸಿಸುತ್ತಿದ್ದಾರೆ. ಅಭಯ ಸಿಂಗ್ ದಂಪತಿ ತಮ್ಮ ಕುಟುಂಬವನ್ನು ಭೇಟಿ ಮಾಡಲು ಝಜ್ಜರ್ಗೆ ಭೇಟಿ ನೀಡಿದರು. ಹಾಗೂ ಅವರು ತಮ್ಮ ಹೆತ್ತವರೊಂದಿಗೆ ಕೆಲಕಾಲ ಸಮಯ ಕಳೆದರು. ಈ ದಂಪತಿ ಜೊತೆಯಾಗಿ ಸನಾತನ ಧರ್ಮ ಮತ್ತು ಆಧ್ಯಾತ್ಮದ ಪ್ರಚಾರದಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದಾರೆ.
ಯಾರು ಈ ಐಐಟಿಯನ್ ಬಾಬಾ?
ಹರಿಯಾಣದ ಝಜ್ಜರ್ ಜಿಲ್ಲೆಯ ಸಾಸ್ರೋಲಿ ಗ್ರಾಮದವರಾದ ಅಭಯ ಸಿಂಗ್ ಅವರ ಜೀವನ ಪಯಣ ಕುತೂಹಲಕಾರಿಯಾಗಿದೆ.
ಇವರು ಐಐಟಿ ಬಾಂಬೆಯಲ್ಲಿ (IIT Bombay) ಏರೋಸ್ಪೇಸ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಕೆನಡಾದ ಪ್ರತಿಷ್ಠಿತ ಏರೋಸ್ಪೇಸ್ ಕಂಪನಿಯಲ್ಲಿ ಮಾಸಿಕ ಸುಮಾರು 3 ಲಕ್ಷ ರೂಪಾಯಿ ಸಂಬಳದ ಕೆಲಸ ಮಾಡುತ್ತಿದ್ದರು.
ವಿಜ್ಞಾನ ಮತ್ತು ತಂತ್ರಜ್ಞಾನಕ್ಕಿಂತಲೂ ಜೀವನದ ಅರ್ಥವನ್ನು ಹುಡುಕುತ್ತಾ ಆಧ್ಯಾತ್ಮದತ್ತ ಮುಖ ಮಾಡಿದ ಇವರು, ಕೆಲಸ ತೊರೆದು ಸನ್ಯಾಸ ದೀಕ್ಷೆ ಪಡೆದರು. 2025ರ ಪ್ರಯಾಗರಾಜ ಮಹಾಕುಂಭ ಮೇಳದಲ್ಲಿ ಕೇಸರಿ ವಸ್ತ್ರಧಾರಿ ಇಂಜಿನಿಯರ್ ಆಗಿ ಇವರ ಫೋಟೋಗಳು ಜಗತ್ತಿನಾದ್ಯಂತ ವೈರಲ್ ಆಗಿದ್ದವು.
“ಭವಿಷ್ಯದಲ್ಲಿ ‘ಸನಾತನ ವಿಶ್ವವಿದ್ಯಾಲಯ’ವನ್ನು ಸ್ಥಾಪಿಸುವ ಗುರಿ ಹೊಂದಿದ್ದೇವೆ” ಎಂದು ದಂಪತಿ ತಮ್ಮ ಕನಸನ್ನು ಹಂಚಿಕೊಂಡಿದ್ದಾರೆ. ಪ್ರಸ್ತುತ ಈ ಜೋಡಿ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಸರಳ ಜೀವನ ನಡೆಸುತ್ತಿದ್ದಾರೆ.


