ನವದೆಹಲಿ: ಸೋಮವಾರ ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ ಧನಕರ ಅವರ ಅನಿರೀಕ್ಷಿತ ರಾಜೀನಾಮೆಯಿಂದ ಅನಿವಾರ್ಯವಾದ ಮುಂದಿನ ಉಪರಾಷ್ಟ್ರಪತಿಗಳ ಹುದ್ದೆಗೆ ನಡೆವ ಚುನಾವಣೆಯಲ್ಲಿ ಆಡಳಿತಾರೂಢ ಎನ್ಡಿಎ ಮೈತ್ರಿಕೂಟವು ಸಂಖ್ಯಾಬಲವನ್ನು ಹೊಂದಿದೆ.
ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ಉಪರಾಷ್ಟ್ರಪತಿಗಳನ್ನು ಆಯ್ಕೆ ಮಾಡುತ್ತಾರೆ. ಅಲ್ಲಿ ಮೇಲ್ಮನೆಯ ನಾಮನಿರ್ದೇಶಿತ ಸದಸ್ಯರು ಸಹ ತಮ್ಮ ಮತ ಚಲಾಯಿಸಲು ಅರ್ಹರಾಗಿರುತ್ತಾರೆ.
543 ಸದಸ್ಯರ ಲೋಕಸಭೆಯಲ್ಲಿ ಒಂದು ಸ್ಥಾನ ಪಶ್ಚಿಮ ಬಂಗಾಳದ ಬಸಿರ್ಹತ್ ಲೋಕಸಭಾ ಸ್ಥಾನ ಮಾತ್ರ ಖಾಲಿ ಇದೆ. 245 ಸದಸ್ಯರ ರಾಜ್ಯಸಭೆಯಲ್ಲಿ ಐದು ಸ್ಥಾನಗಳು ಖಾಲಿ ಇವೆ.
ರಾಜ್ಯಸಭೆಯಲ್ಲಿ ಖಾಲಿ ಇರುವ ಐದು ಸ್ಥಾನಗಳಲ್ಲಿ, ನಾಲ್ಕು ಸ್ಥಾನಗಳು ಜಮ್ಮು ಮತ್ತು ಕಾಶ್ಮೀರದಿಂದ ಮತ್ತು ಒಂದು ಸ್ಥಾನ ಪಂಜಾಬ್ನಿಂದ ಖಾಲಿ ಇದ್ದು, ಕಳೆದ ತಿಂಗಳು ನಡೆದ ಉಪಚುನಾವಣೆಯಲ್ಲಿ ವಿಧಾನಸಭೆಗೆ ಆಯ್ಕೆಯಾದ ನಂತರ ರಾಜ್ಯಸಭಾ ಸದಸ್ಯ ಸಂಜೀವ ಅರೋರಾ ತಮ್ಮ ಸ್ಥಾನ ತ್ಯಜಿಸಿದ್ದಾರೆ.
ಉಭಯ ಸದನಗಳ ಒಟ್ಟಾರೆ ಬಲ 786 ಆಗಿದ್ದು, ಎಲ್ಲಾ ಅರ್ಹ ಮತದಾರರು ತಮ್ಮ ಹಕ್ಕು ಚಲಾಯಿಸುವುದನ್ನು ಪರಿಗಣಿಸಿ, ಉಪರಾಷ್ಟ್ರಪತಿ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಯು 394 ಮತಗಳನ್ನು ಪಡೆಯಬೇಕಾಗುತ್ತದೆ. ಲೋಕಸಭೆಯಲ್ಲಿ, ಬಿಜೆಪಿ ನೇತೃತ್ವದ ಎನ್ಡಿಎ 542 ಸದಸ್ಯರ ಸದನದಲ್ಲಿ 293 ಸದಸ್ಯರ ಬೆಂಬಲವನ್ನು ಹೊಂದಿದೆ. ರಾಜ್ಯಸಭೆಯಲ್ಲಿ 240 ಸದಸ್ಯರಲ್ಲಿ ನಾಮನಿರ್ದೇಶಿತ ಸದಸ್ಯರು ಎನ್ಡಿಎ (NDA) ಅಭ್ಯರ್ಥಿಗೆ ಬೆಂಬಲವಾಗಿ ಮತ ಚಲಾಯಿಸುತ್ತಾರೆ ಎಂದು ಭಾವಿಸಿದರೆ ಆಡಳಿತ ಮೈತ್ರಿಕೂಟವು 129 ಸದಸ್ಯರ ಬೆಂಬಲವನ್ನು ಹೊಂದಿದೆ. ಆಡಳಿತ ಮೈತ್ರಿಕೂಟವು ಲೋಕಸಭೆ ಹಾಗೂ ರಾಜ್ಯಸಭೆಯ ಎರಡೂ ಸದನಗಳ ಸಂಯೋಜಿತ 786 ಸ್ಥಾನಗಳಲ್ಲಿ 422 ಸ್ಥಾನಗಳನ್ನು ಹೊಂದಿದೆ.
ಸಂವಿಧಾನದ 68 ನೇ ವಿಧಿಯ 2ನೇ ವಿಧಿಯ ಪ್ರಕಾರ, ಉಪರಾಷ್ಟ್ರಪತಿಗಳ ನಿಧನ, ರಾಜೀನಾಮೆ ಅಥವಾ ಪದಚ್ಯುತಗೊಳಿಸುವಿಕೆ ಅಥವಾ ಇನ್ಯಾವುದೇ ಕಾರಣದಿಂದ ಅವರ ಹುದ್ದೆಯಲ್ಲಿನ ಖಾಲಿ ಸ್ಥಾನವನ್ನು ಭರ್ತಿ ಮಾಡಲು ಚುನಾವಣೆಯನ್ನು “ಸಾಧ್ಯವಾದಷ್ಟು ಬೇಗ” ನಡೆಸಲಾಗುತ್ತದೆ.
ಖಾಲಿ ಸ್ಥಾನವನ್ನು ತುಂಬಲು ಆಯ್ಕೆಯಾದ ವ್ಯಕ್ತಿಯು “ಅವರು ತಮ್ಮ ಹುದ್ದೆಯನ್ನು ವಹಿಸಿಕೊಂಡ ದಿನಾಂಕದಿಂದ ಐದು ವರ್ಷಗಳ ಪೂರ್ಣ ಅವಧಿಗೆ” ಅಧಿಕಾರ ವಹಿಸಿಕೊಳ್ಳಲು ಅರ್ಹರಾಗಿರುತ್ತಾರೆ.
ಉಪರಾಷ್ಟ್ರಪತಿಗಳ ಹುದ್ದೆ ದೇಶದ ಎರಡನೇ ಅತ್ಯುನ್ನತ ಸಾಂವಿಧಾನಿಕ ಹುದ್ದೆ. ಅವರು ಐದು ವರ್ಷಗಳ ಅವಧಿಗೆ ಸೇವೆ ಸಲ್ಲಿಸುತ್ತಾರೆ, ಆದರೆ ಅಧಿಕಾರಾವಧಿ ಮುಗಿದರೂ, ಉತ್ತರಾಧಿಕಾರಿ ಅಧಿಕಾರ ವಹಿಸಿಕೊಳ್ಳುವವರೆಗೆ ಅಧಿಕಾರದಲ್ಲಿ ಮುಂದುವರಿಯಬಹುದು.
ವೈದ್ಯಕೀಯ ಕಾರಣಗಳನ್ನು ಉಲ್ಲೇಖಿಸಿ ಜಗದೀಪ ಧನಕರ ಉಪರಾಷ್ಟ್ರಪತಿಗಳ ಹುದ್ದೆಗೆ ಸೋಮವಾರ ಸಂಜೆ ಅನಿರೀಕ್ಷಿತವಾಗಿ ರಾಜೀನಾಮೆ ನೀಡಿದ್ದಾಋೆ. ಅವರು ತಮ್ಮ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕಳುಹಿಸಿದ್ದಾರೆ ಮತ್ತು ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.