ಶಿಲ್ಲಾಂಗ್ : ಮೇಘಾಲಯದಲ್ಲಿ ಮಧುಚಂದ್ರದ ಸಮಯದಲ್ಲಿ ಪತಿಯನ್ನು ಕೊಂದ ಆರೋಪದ ಮೇಲೆ ಬಂಧಿಸಲ್ಪಟ್ಟ ಇಂದೋರದ ಮಹಿಳೆಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ.
ಮಧುಚಂದ್ರದ ಸಮಯದಲ್ಲಿ ಪತಿ ರಾಜ ರಘುವಂಶಿಯನ್ನು ಹತ್ಯೆ ಮಾಡಲು ಪತ್ನಿ ಸೋನಂ ಹತ್ಯೆಗೆ ಸಂಚು ರೂಪಿಸಿದ್ದಳು ಎನ್ನುವ ಮಾಹಿತಿ ಹೊರಬಿದ್ದ ಬೆನ್ನಲ್ಲೇ ಪ್ರಕರಣಕ್ಕೆ ಸಂಬಂಧಿಸಿದೆ ಎನ್ನಲಾದ ಮತ್ತೊಂದು ವೀಡಿಯೊ ಹೊರಬಿದ್ದಿದೆ. ರಾಜಾ ರಘುವಂಶಿ ಹತ್ಯೆ ಪ್ರಕರಣದಲ್ಲಿ ಈಗ ಬಂಧಿತನಾಗಿರುವ ಸೋನಂಳ ಪ್ರಿಯಕರ ಮಧ್ಯಪ್ರದೇಶದ ರಾಜ ಕುಶ್ವಾಹಾ ಎಂಬಾತ ಆಕೆಯ ಪತಿ ರಾಜಾ ರಘುವಂಶಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ವೀಡಿಯೊ ಈಗ ವೈರಲ್ ಆಗಿದೆ. ಈ ವಿಷಯದ ಕುರಿತು ಸಹೋದರಿ ಮಾಹಿತಿ ಹಂಚಿಕೊಂಡಿದ್ದಾರೆ.
ರಾಜಾ ರಘುವಂಶಿ ಅವರ ಶವವನ್ನು ಮನೆಗೆ ತಂದಾಗ ಪತ್ನಿಯ ಪ್ರಿಯಕರ ಎಂದು ಹೇಳಲಾದ ರಾಜ ಕುಶ್ವಾಹ ಸೋನಮ್ ತಂದೆಯನ್ನು ಸಮಾಧಾನಪಡಿಸುತ್ತಿರುವುದು ಕಂಡುಬಂದಿದೆ.
29 ವರ್ಷದ ರಾಜಾ ರಘುವಂಶಿ ಅವರನ್ನು ಅವರ ಪತ್ನಿ ಸೋನಮ್ ಮತ್ತು ಆಕೆಯ ಗೆಳೆಯ ರಾಜ ಕುಶ್ವಾಹ ನಡೆಸಿದ ಪಿತೂರಿಯ ಭಾಗವಾಗಿ ಕಡಿದು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋನಮ್ ಮತ್ತು ರಾಜ ಕುಶ್ವಾಹ ಹಾಗೂ ಮೂವರು ಸುಪಾರಿ ಕೊಲೆಗಾರರನ್ನು ಬಂಧಿಸಲಾಗಿದೆ.
ಹನಿಮೂನ್ ಕೊಲೆಯ ಬಗ್ಗೆ ರಾಜಾ ರಘುವಂಶಿ ಅವರ ಸಹೋದರಿ ಶ್ರಾಸ್ತಿ ಇನ್ಸ್ಟಾಗ್ರಾಮ್ನಲ್ಲಿ ತನ್ನ ಸಹೋದರನ ಮದುವೆ ಮತ್ತು ಅತ್ತಿಗೆಯ ಬಂಧನದ ವೀಡಿಯೊಗಳ ಜೊತೆಗೆ ಕೊಲೆ ಪ್ರಕರಣದ ನವೀಕರಣಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಅಂತಹ ಒಂದು ವೀಡಿಯೊದಲ್ಲಿ ರಾಜಾ ಅವರ ಅಂತ್ಯಕ್ರಿಯೆಯಲ್ಲಿ ಸೋನಮ್ ಅವರ ತಂದೆ ದೇವಿ ಸಿಂಗ್ ಅವರೊಂದಿಗೆ ರಾಜ ಕುಶ್ವಾಹ ಕಾಣಿಸಿಕೊಂಡಿರುವುದು ಕಂಡುಬಂದಿದೆ.
ಕೊಲೆಯಾದ ರಘುವಂಶಿ ತಾಯಿ ಉಮಾ ರಘುವಂಶಿ ಹೇಳಿಕೊಂಡಿರುವ ಪ್ರಕಾರ, ತಮ್ಮ ಮಗನ ಮದುವೆಯಲ್ಲಿ ಸೋನಮ್ ಅವರ ತಂದೆಯೊಂದಿಗೆ ರಾಜನನ್ನು ಕೆಲವರು ನೋಡಿದ್ದಾರೆ ಎಂದು ಹೇಳಿದ್ದಾರೆ.
“ನನ್ನ ಸಹೋದರ ಏಳು ಜನ್ಮದ ವರೆಗೆ ಸೋನಮ್ ಜೊತೆ ಇರುವುದಾಗಿ ಪ್ರತಿಜ್ಞೆ ಮಾಡಿದ್ದ, ಆದರೆ ಅವನಿಗೆ ಏಳು ದಿನಗಳವರೆಗೆ ಇರಲು ಸಾಧ್ಯವಾಗಲಿಲ್ಲ ಎಂದು ಸಹೋದರಿ ಹೇಳಿದ್ದಾರೆ.
ಮೇ 11 ರಂದು ಇಂದೋರದಲ್ಲಿ ನಡೆದ ಅವರ ವಿವಾಹದ ಒಂಬತ್ತು ದಿನಗಳ ನಂತರ ಮೇ 20 ರಂದು ರಾಜಾ ರಘುವಂಶಿ ಮತ್ತು ಸೋನಮ್ ಮೇಘಾಲಯಕ್ಕೆ ತೆರಳಿದ್ದರು. ಈಶಾನ್ಯ ರಾಜ್ಯದ ಪ್ರವಾಸಿ ತಾಣಕ್ಕೆ ಹೋದ ನಂತರದಲ್ಲಿ ದಂಪತಿ ಮೇ 23 ರಂದು ನಾಪತ್ತೆಯಾಗಿದ್ದರು. ಜೂನ್ 2 ರಂದು ಕೊಲೆ ಬೆಳಕಿಗೆ ಬಂದಿದ್ದು, ರಾಜಾ ರಘುವಂಶಿ ಅವರ ಮೃತದೇಹದಲ್ಲಿ ಮಚ್ಚಿನಿಂದಾದ ಗಾಯಗಳು ಪತ್ತೆಯಾಗಿವೆ.
ಆದರೆ, ಸೋನಮ್ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಸೋನಮ್ ಉತ್ತರಪ್ರದೇಶದ ಘಾಜಿಪುರದಲ್ಲಿ ಕಾಣಿಸಿಕೊಂಡಾಗ ಆಕೆಯನ್ನು ಬಂಧಿಸಲಾಯಿತು. ಈ ಪ್ರಕರಣದಲ್ಲಿ ಆಕೆ ಪ್ರಮುಖ ಶಂಕಿತಳಾಗಿದ್ದು, ಆಕೆ ಮತ್ತು ಆಕೆಯ ಗೆಳೆಯನನ್ನು ಕೊಲೆಯ ಮಾಸ್ಟರ್ ಮೈಂಡ್ ಎಂದು ಕರೆಯಲಾಗುತ್ತಿದೆ.
ಮೇಘಾಲಯ ಪೊಲೀಸ್ ಮೂಲಗಳು ಹೇಳುವಂತೆ ರಾಜ್ ಮತ್ತು ಸೋನಮ್ ರಾಜಾ ರಘುವಂಶಿ ಅವರನ್ನು ಕೊಲ್ಲಲು ವಿಕಾಸ, ಆನಂದ ಮತ್ತು ಆಕಾಶ ಎಂಬ ಮೂವರು ಬಾಡಿಗೆ ಕೊಲೆಗಾರರನ್ನು ನೇಮಿಸಿಕೊಂಡಿದ್ದರು. ವ್ಯಾಪಕವಾದ ಹುಡುಕಾಟದ ನಂತರ ಮೂವರು ಆರೋಪಿಗಳನ್ನು ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಬಂಧಿಸಲಾಯಿತು.