ಅಯೋಧ್ಯೆ: ಇಲ್ಲಿನ ಪ್ರಸಿದ್ದ ಹನುಮಾನ್ ಗಢಿ ದೇಗುಲದ ಮುಖ್ಯ ಅರ್ಚಕ ಮಹಾಂತ ಪ್ರೇಮ್ ದಾಸ್, ಬುಧವಾರ ದೇಗುಲ ಆವರಣ ತೊರೆದು ಅಕ್ಷಯ ತೃತೀಯಾ ಹಿನ್ನೆಲೆಯಲ್ಲಿ ಮೆರವಣಿಗೆ ಮೂಲಕ ರಾಮ ಮಂದಿರಕ್ಕೆ ಭೇಟಿ ನೀಡಿದರು.
ಈ ಮೂಲಕ ದಾಸ್ ಹನುಮಾನ್ ದೇಗುಲ ಆವರಣದಿಂದ ಹೊರ ಹೋಗಲು ನಿಷೇಧವಿದ್ದ ಸುಮಾರು 300 ವರ್ಷಗಳ ಹಳೆ ಸಂಪ್ರದಾಯವನ್ನು ಕೊನೆಗೊಳಿಸಿದ ಮೊದಲಿಗ ಎನಿಸಿದರು. ಈ ನಿಷೇಧ 1737ರಿಂದ 288 ವರ್ಷ ಆಚರಣೆಯಲ್ಲಿತ್ತು. ಒಂದು ಬಾರಿ ಮಹಾಂತರಾಗಿ
ನೇಮಕವಾದ ಮೇಲೆ ಅವರ ಜೀವನವೆಲ್ಲ ಈ ದೇಗುಲದಲ್ಲಿ, ಮರಣದ ನಂತರ ಮಾತ್ರ ಅವರ ದೇಹ ದೇಗುಲ ಬಿಟ್ಟು ಹೋಗುತ್ತಿತ್ತು.
ಸಾವಿರಾರು ನಾಗಾ ಸಾಧುಗಳು, ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಆನೆಗಳು, ಒಂಟೆಗಳು, ಕುದುರೆಗಳು,
ಸಂಗೀತ ಕಚೇರಿ ತಂಡಗಳು ಮೆರವಣಿಗೆಯ ಅಂದ ಹೆಚ್ಚಿಸಿದವು. ಸರಯೂ ನದಿ ದಡದಿಂದ ಮೆರವಣಿಗೆ ಆರಂಭವಾಯಿತು. ಈ ವೇಳೆ ದಾಸ್ ನದಿಯಲ್ಲಿ ಪುಣ್ಯ ಸ್ನಾನ ಮಾಡಿದರು.