- ಬೆಳಗಾವಿ : ಹುಕ್ಕೇರಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಶನಿವಾರ ಯುವಕರ ಗುಂಪು ಶ್ರೀರಾಮ ಸೇನೆಯ ಐವರು ಕಾರ್ಯಕರ್ತರನ್ನು ಮರಕ್ಕೆ ಕಟ್ಟಿ ಹಿಗ್ಗಾ-ಮುಗ್ಗಾ ಥಳಿಸಿದೆ. ಇದರ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾನುವಾರ ಹರಿದಾಡಿವೆ. ಈ ಬಗ್ಗೆ ಬಿಜೆಪಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಪೊಲೀಸರು ಈ ನಿಟ್ಟಿನಲ್ಲಿ ನಿಷ್ಪಕ್ಷಪಾತವಾಗಿ ಹಿಂದು ಯುವಕರಿಗೆ ನ್ಯಾಯ ಒದಗಿಸಿ ಕೊಡುವಂತೆ ಬಿಜೆಪಿ ಒತ್ತಾಯ ಮಾಡಿದೆ.
ಗೋ ಸಾಗಣೆ ತಡೆಯಲು ಮುಂದಾಗಿದ್ದಕ್ಕೆ ಹಲ್ಲೆ ಮಾಡಲಾಗಿದೆ ಎಂದು ಶ್ರೀರಾಮ ಸೇನೆ ಕಾರ್ಯಕರ್ತರು ಆರೋಪಿಸಿದ್ದಾರೆ.
ಈ ಘಟನೆಗೂ ಗೋ ರಕ್ಷಣೆಗೂ ಯಾವುದೇ ಸಂಬಂಧವಿಲ್ಲ. ಮಹಿಳೆ ಜತೆಗೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಥಳಿಸಲಾಗಿದೆ ಎಂದು ಆರೋಪಿಗಳು ಹೇಳಿದ್ದಾರೆ.
ಎರಡೂ ಕಡೆಯಿಂದ ದೂರು ದಾಖಲಾಗಿಲ್ಲ. ವಿಡಿಯೊ ಆಧರಿಸಿ ಹುಕ್ಕೇರಿ ಪೊಲೀಸರೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಘಟನೆ ವಿವರ: ಮುಸ್ಲಿಂ ಯುವಕರು ಜೂನ್ 27ರಂದು
ಗೋವುಗಳ ಸಾಗಾಟ ಮಾಡುತ್ತಿದ್ದಾಗ ಅದನ್ನು ತಡೆದ ಶ್ರೀರಾಮ ಸೇನೆ ಕಾರ್ಯಕರ್ತರು, ಗೋವುಗಳ ಸಹಿತವಾಗಿ ವಾಹನವನ್ನು ಹುಕ್ಕೇರಿ ಪೊಲೀಸ್ ಠಾಣೆಗೆ ತಂದಾಗ ಅವುಗಳನ್ನು ಬೆಳವಿ ಗೋಶಾಲೆಗೆ ಸಾಗಿಸಲಾಗಿತ್ತು. ಮಾರನೆಯ ದಿನ ಗೋಶಾಲೆಯಿಂದ ಮುಸ್ಲಿಂ ಯುವಕರು ಗೋವುಗಳನ್ನು ಮರಳಿ ಪಡೆದಿದ್ದರು.ವಿಷಯ ತಿಳಿದ ಶ್ರೀರಾಮ ಸೇನೆ ಕಾರ್ಯಕರ್ತರು ಮತ್ತೆ ಗೋವುಗಳನ್ನು ಸಾಗಿಸುತ್ತಿದ್ದ ವಾಹನ ಬೆನ್ನಟ್ಟಿ ಹಿಡಿದರು. ಆಗ ಮುಸ್ಲಿಂ ಯುವಕರು ಹಾಗೂ ಶ್ರೀರಾಮ ಸೇನೆ ಕಾರ್ಯಕರ್ತರ ಮಧ್ಯೆ ಚಕಮಕಿ ನಡೆದಿತ್ತು. ಬಳಿಕ ಶಿವರಾಜ ಬಾಬಾಸಾಹೇಬ ನಾಯಿಕ ಎನ್ನುವವರು, ಈ ಗೋವುಗಳನ್ನು ಹೈನುಗಾರಿಕೆಗೆ ಖರೀದಿಸಿ ಒಯ್ಯುತ್ತಿರುವುದು ಖಚಿತ. ಇದರ ಬಗ್ಗೆ ನಮ್ಮ ತಕರಾರು ಇಲ್ಲ ಎಂದು ಹುಕ್ಕೇರಿ ಠಾಣೆಗೆ ಮುಚ್ಚಳಿಕೆ ಬರೆದುಕೊಟ್ಟರು. ಈ ಎಲ್ಲ ಘಟನೆಗಳ ಬಳಿಕ ಶ್ರೀರಾಮ ಸೇನೆ ಕಾರ್ಯಕರ್ತರನ್ನು ಹಿಡಿದುಕೊಂಡು ಬಂದ ಯುವಕರು, ಇಂಗಳಿಯಲ್ಲಿ ಗಿಡಕೆ, ಕಟ್ಟಿ, ಮನಸೋ ಇಚ್ಚೆ,
ಥಳಿಸಿದ್ದಾರೆ.ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಗೋ ರಕ್ಷಣೆ ಮಾಡಿದ್ದಕ್ಕೆ ಹೊಡೆದಾಟ ನಡದಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯ ಇಲ್ಲ, ದೂರು ನೀಡಿಲ್ಲ. ಮಹಿಳೆಯೊಂದಿಗೆ ಅಸಭ್ಯ ವರ್ತನೆ ಮಾಡಿದ್ದಕ್ಕೆ ಹೊಡೆದಿರುವುದಾಗಿ ಕೆಲವು ಯುವಕರು ಹೇಳಿದ್ದು ಆ ಬಗ್ಗೆಯೂ ದೂರು ಬಂದಿಲ್ಲ. ವಿಡಿಯೊ ಆಧರಿಸಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ ಎಂದರು.
ಮರಕ್ಕೆ ಕಟ್ಟಿ ಶ್ರೀರಾಮಸೇನೆಯ ಐವರು ಯುವಕರಿಗೆ ಥಳಿತ
