ಬೆಳಗಾವಿ: ಬೆಳಗಾವಿ- ಬೆಂಗಳೂರು ವಂದೇ ಭಾರತ ರೈಲು ಶೀಘ್ರ ಸಂಚಾರ ಪ್ರಾರಂಭಿಸುವ ಕುರಿತು ಮತ್ತು ಬೆಳಗಾವಿ-ಮಿರಜ್ ನಡುವೆ ಸಂಚರಿಸುತ್ತಿರುವ ವಿಶೇಷ ರೈಲನ್ನು ಪ್ಯಾಸೇಂಜರ್ ರೈಲಾಗಿ ಪರಿವರ್ತಿಸುವ ಕುರಿತು ಹಾಗೂ ಘಟಪ್ರಭಾ ರೈಲು ನಿಲ್ದಾಣದ ನವೀಕರಣ ಕಾಮಗಾರಿ ಕಳೆಪೆ ಮತ್ತು ಆಮೆಗತಿಯಲ್ಲಿ ಸಾಗಿರುವ ಕುರಿತು ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ, ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹಾಗೂ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರೊಂದಿಗೆ ರಾಜ್ಯಸಭೆ ಸಂಸದ ಈರಣ್ಣ ಕಡಾಡಿ ವಿಸ್ತೃತ ಚರ್ಚೆ ನಡೆಸಿದರು.
ನನ್ನ ಬೇಡಿಕೆಗಳಿಗೆ ಸ್ಪಂದಿಸಿದ ಸಚಿವರು ವಂದೇ ಭಾರತ ರೈಲಿಗೆ ಈಗಾಗಲೇ ಅನುಮತಿ ನೀಡಲಾಗಿದ್ದು, ಹೊಸ ರೈಲು ಬೋಗಿಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಅವುಗಳ ಲಭ್ಯತೆಯ ಆಧಾರದ ಮೇಲೆ ಆದಷ್ಟು ಬೇಗ ವಂದೇ ಭಾರತ ರೈಲು ಪ್ರಾರಂಭಿಸುವುದಾಗಿ ಭರವಸೆ ನೀಡಿದರು.
ಬೆಳಗಾವಿ-ಮಿರಜ್ ವಿಶೇಷ ರೈಲನ್ನು ಕೇವಲ ಒಂದು ತಿಂಗಳಲ್ಲಿ ಪ್ಯಾಸೇಂಜರ್ ರೈಲಾಗಿ ಪರಿವರ್ತಿಸಿ ಆದೇಶಿಸುವುದಾಗಿ ಭರವಸೆ ನೀಡಿದರು.
ಘಟಪ್ರಭಾ ರೈಲು ನಿಲ್ದಾಣದ ಕಾಮಗಾರಿಗಳು ನಿಧಾನಗತಿಯ ಮತ್ತು ಕಳಪೆ ಮಟ್ಟದಾಗಿರುವ ಕುರಿತು ಶೀಘ್ರದಲ್ಲಿ ರೈಲ್ವೆ ಅಧಿಕಾರಿಗಳಿಂದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ ಎಂದು ಸಂಸದರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.